ಲೋಕಸಭೆ ಚುನಾವಣೆ: ಕಾಂಗ್ರೆಸ್ ಸಂಸದರ ಗುಪ್ತ ಸಭೆ
ಬೆಂಗಳೂರು, ಜೂನ್ 22: ಲೋಕಸಭೆ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ತಮ್ಮ ಟಿಕೆಟ್ಗೆ ಕುತ್ತು ಬರುತ್ತದೆ ಎಂದು ಹೆದರಿರುವ ಕಾಂಗ್ರೆಸ್ ಸಂಸದರು ಸಭೆ ನಡೆಸಿ ಮಾತುಕತೆಯಾಡಿದ್ದಾರೆ.
ಒಟ್ಟಿಗೆ ಚುನಾವಣೆ ಎದುರಿಸುವಂತಾದರೆ ಸೀಟುಗಳ ಹಂಚಿಕೆ ಸಮಸ್ಯೆ ಉಲ್ಬಣಿಸುವುದು ಖಾಯಂ. ಹಾಗಾಗಿ ಈಗಲೇ ಹೈಕಮಾಂಡ್ ಹಾಗೂ ಕೆಪಿಸಿಸಿ ಮೇಲೆ ಒತ್ತಡ ಹೇರುವ ತಂತ್ರವಾಗಿ ಈ ಸಭೆ ಸೇರಲಾಗಿದೆ.
ಕಾಂಗ್ರೆಸ್ ಹಿರಿಯ ಸಂಸದ ಕೆ.ಎಚ್.ಮುನಿಯಪ್ಪ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದೆ ಎನ್ನಲಾಗಿದ್ದು, ಪ್ರಕಾಶ್ ಹುಕ್ಕೇರಿ, ಚಂದ್ರಪ್ಪ ಸೇರಿ ಹಲವು ಪ್ರಮುಖ ಸಂಸದರು ಸಭೆಯಲ್ಲಿ ಭಾಗವಹಿಸಿದ್ದಾರೆಂದು ಸುದ್ದಿ ಮೂಲಗಳು ತಿಳಿಸಿವೆ.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿರುವ ಕಾರಣ ಇಲ್ಲಿನ ಬಹುತೇಕ ಲೋಕಸಭೆ ಸೀಟುಗಳು ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ. ಹಾಗಾಗಿ ಈ ಭಾಗದ ಕಾಂಗ್ರೆಸ್ ಸಂಸದರು ಮತ್ತು ಆಕಾಂಕ್ಷಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕೆ.ಎಚ್.ಮುನಿಯಪ್ಪ ಅವರ ಪ್ರಭಾವ ಇದ್ದು, ಇಲ್ಲಿ ಜೆಡಿಎಸ್ ಸೀಟು ಹೆಚ್ಚಿಗೆ ಹಂಚಿಕೆಯಾದಲ್ಲಿ ಕೆ.ಎಚ್.ಮುನಿಯಪ್ಪ ಅವರ ಪ್ರಭಾವವೂ ತಗ್ಗುವ ಸಾಧ್ಯತೆ ಇದೆ. ಇದು ಮುನಿಯಪ್ಪ ಅವರನ್ನು ಆತಂಕಕ್ಕೆ ತಳ್ಳಿದೆ.
ಅಲ್ಲದೆ ಮಂಡ್ಯ, ಹಾಸನ ಭಾಗದ ಕ್ಷೇತ್ರಗಳೂ ಸಹ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ ಹಾಗಾಗಿಯೇ ಕಾಂಗ್ರೆಸ್ ಸಂಸದರು ಸಭೆ ಸೇರಿದ್ದು ಹೈಕಮಾಂಡ್ ಮೇಲೆ ಒತ್ತಡ ಹೇರುವ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದ್ದು ಲೋಕಸಭೆ ಚುನಾವಣೆ ಹತ್ತಿರವಿರುವ ಕಾರಣ ಸಂಸದರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಸಭೆಯಲ್ಲಿ ತೀರ್ಮಾನ ಪಡೆದುಕೊಳ್ಳಲಾಗಿದೆ.












Click it and Unblock the Notifications