ಡಿ.ಕೆ.ಸುರೇಶ್ಗೆ ಒಲಿದ ಬಮುಲ್ ನಿರ್ದೇಶಕ ಸ್ಥಾನ, ಮುಂದಿನ ಪ್ಲ್ಯಾನ್ ಏನು?
ಬೆಂಗಳೂರು ಹಾಲು ಒಕ್ಕೂಟ ಲಿಮಿಟೆಡ್ (ಬಮುಲ್) ಆಡಳಿತ ಮಂಡಳಿಯ ನಿರ್ದೇಶಕರಾಗಿ ಕಾಂಗ್ರೆಸ್ ಮಾಜಿ ಸಂಸದ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ಮತ್ತೆ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಬಮುಲ್ ನಿರ್ದೇಶಕ ಸ್ಥಾನಕ್ಕೆ ಡಿಕೆ ಸುರೇಶ್ ಶನಿವಾರ ನಾಮಪತ್ರ ಸಲ್ಲಿಸಿದ್ದರು. ಆದರೆ ಉಳಿದ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳು ಅಮಾನ್ಯವಾಗಿದ್ದರಿಂದ ಸುರೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿಕೆ ಸುರೇಶ್ ಕನಕಪುರ ತಾಲ್ಲೂಕಿನಿಂದ ಬಮುಲ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಬೆಂಗಳೂರಿನ ಡೈರಿ ಸರ್ಕಲ್ನಲ್ಲಿರುವ ಬಮುಲ್ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದರು. ನಮ್ಮ ತಾಲ್ಲೂಕಿನ ಹೈನುಗಾರಿಕೆಯ ಅಭಿವೃದ್ಧಿಗೆ ಶಕ್ತಿ ತುಂಬಲು ಹಾಗೂ ರೈತರ ಪರವಾಗಿ ಕೆಲಸ ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ ಎಂದು ಹೇಳಿದ್ದರು.

ನನ್ನ ಸ್ಪರ್ಧೆಯನ್ನು ಡಿ.ಕೆ.ಸಹೋದರರು ಹಾಗೂ ದೇವೇಗೌಡರ ಕುಟುಂಬದ ನಡುವಿನ ಫೈಟ್ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಹಾಲಿನ ಕ್ಷೇತ್ರದಲ್ಲಿ ರಾಜಕೀಯ ಕಾಲಿಟ್ಟರೆ ರೈತರಿಗೆ ಅನ್ಯಾಯವಾಗುತ್ತೆ. ಯಾರು ಏನೇ ಚರ್ಚೆ ಮಾಡಲಿ, ರಾಜಕೀಯ ಹೊರಗಿಟ್ಟು ಹಾಲು ಉತ್ಪಾದನೆಯಲ್ಲಿ ಬದಲಾವಣೆ ತರುವತ್ತ ಗಮನ ಹರಿಸುತ್ತೇನೆ. ಸ್ಪರ್ಧೆ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದಿದ್ದರು.
ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು?
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಡಿಕೆ ಸುರೇಶ್ ಅವರನ್ನು ಮತ್ತೆ ರಾಜಕೀಯವಾಗಿ ಬಲಗೊಳಿಸಲು ಡಿಕೆ ಶಿವಕುಮಾರ್ ರಣತಂತ್ರ ರೂಪಿಸಿದ್ದರು. ಮೊದಲಿಗೆ ಚನ್ನಪಟ್ಟಣ ಅಭ್ಯರ್ಥಿ ಎಂದೂ ಡಿಕೆ ಸುರೇಶ್ ಅವರ ಹೆಸರು ಕೇಳಿಬಂದಿತ್ತು. ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಇವರ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಇದ್ದಕ್ಕಿದ್ದಂತೆ ಡೈರಿ ಕ್ಷೇತ್ರಕ್ಕೆ ಸುರೇಶ್ ಅವರ ಪ್ರವೇಶ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಬಮುಲ್ ನಿರ್ದೇಶಕರಾಗಿ ಸುರೇಶ್ ಆಯ್ಕೆಯಾಗಿರುವುದರ ಹಿಂದೆ ಕರ್ನಾಟಕ ಹಾಲು ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದು ಹಾಗೂ ಮುಂದೆ ಕೆಎಂಎಫ್ನ ಅಧ್ಯಕ್ಷರಾಗಬೇಕು ಎನ್ನುವ ಉದ್ದೇಶವಿದೆ ಎಂದು ಚರ್ಚೆಯಾಗುತ್ತಿದೆ.
ನಿರ್ದೇಶಕ ಸ್ಥಾನದ ಕ್ಷೀರ ಕ್ಷೇತ್ರಕ್ಕೆ ಕಾಲಿಟ್ಟಿರುವ ಅವರು ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ ಭೀಮಾ ನಾಯಕ್ ಕೂಡ ಈ ಹುದ್ದೆಗೆ ಸ್ಪರ್ಧೆಯಲ್ಲಿರುವುದಾಗಿ ಹೇಳಿದ್ದಾರೆ. ಬಳ್ಳಾರಿಯಿಂದ ನಿರ್ದೇಶಕ ಹುದ್ದೆಗೆ ಸ್ಪರ್ಧಿಸುವುದಾಗಿ ಭೀಮಾ ನಾಯಕ್ ಹೇಳಿದ್ದು, ಇಲ್ಲಿಯೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ನಡುವೆ ಜಿದ್ದಾಜಿದ್ದಿ ಎದುರಾಗುವ ಸಾಧ್ಯತೆ ಇದೆ. ಹೈಕೋರ್ಟ್ ತೀರ್ಪಿನ ಬಳಿಕ ಸದ್ಯದಲ್ಲೇ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಆದರೆ ಡಿಕೆ ಸುರೇಶ್ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನದ ವಿಚಾರದ ಬಗ್ಗೆ ಚರ್ಚೆಯಾಗಿಲ್ಲ. ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಕನಕಪುರ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ. ಬಮುಲ್ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸುರೇಶ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ.












Click it and Unblock the Notifications