ನಿನ್ನೆ ಕಾಂಗ್ರೆಸ್ ಇಂದು ಬಿಜೆಪಿ, ಛಲವಾದಿ ನಾರಾಯಣಸ್ವಾಮಿ ಲಾಂಗ್ ಜಂಪ್
ದೇವನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ಅವರು ಟಿಕೆಟ್ ಕೈ ತಪ್ಪುತ್ತಿದ್ದಂತೆ ಬಿಜೆಪಿ ತೆಕ್ಕೆಗೆ ಹಾರಿದ್ದಾರೆ ಆದರೆ ಅಲ್ಲಿಯೂ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ನಿನ್ನೆ (ಏಪ್ರಿಲ್ 21) ರಂದು ಕಾಂಗ್ರೆಸ್ನ ವೈ.ಎನ್.ಗೋಪಾಲಕೃಷ್ಣ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಂದ ಮಾಲಾರ್ಪಣೆ ಮಾಡಿಸಿಕೊಂಡು ಅಧಿಕೃತವಾಗಿ ಬಿಜೆಪಿ ತೆಕ್ಕೆಗೆ ಸೇರಿದ್ದಾರೆ.
ಛಲವಾದಿ ಅವರು ಇಷ್ಟು ದಿನ ವಿರೋಧಿಸುತ್ತಿದ್ದ ಬಿಜೆಪಿಯನ್ನೇ ಸೇರಿರುವುದು ಅವರ ನಡೆ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಬೇಸರ ಮೂಡಿಸಿದೆ. ಅವರು ಈ ಹಿಂದೆ ಬಿಜೆಪಿ ವಿರೋಧಿಸಿ ಹಾಕಿದ್ದ ಫೇಸ್ಬುಕ್ ಪೋಸ್ಟ್ಗಳು ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಟಿವಿ ಪ್ಯಾನೆಲ್ ಡಿಸ್ಕಷನ್ಗಳಲ್ಲಿ ಭಾಗಿ ಆಗಿ ಬಿಜೆಪಿ ವಿರುದ್ಧ ಅಬ್ಬರಿಸುತ್ತಿದ್ದ ಛಲವಾದಿ ಅವರು ಇದೀಗ ಅದೇ ಪಕ್ಷದ ಪಾದ ಹಿಡಿದಿರುವುದು ಕಾಂಗ್ರೆಸ್ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ. ಕೇವಲ ಅಧಿಕಾರಕ್ಕಾಗಿ ಛಲವಾದಿ ಅವರು 'ದಲಿತ ಕಾರ್ಡ್' ಬಳಸುತ್ತಾರೆ ಎಂಬ ಮಾತುಗಳೂ ಹರಿದಾಡುತ್ತಿವೆ.
ಚುನಾವಣೆ ಸಮಯಕ್ಕೆ ದೇವನಹಳ್ಳಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಎಂಬ ಆರೋಪವೂ ಛಲವಾದಿ ಅವರ ಮೇಲಿತ್ತು. ಅವರು ಟಿಕೆಟ್ಗಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ನಂಬಿಕೊಂಡಿದ್ದರು. ಆದರೆ ಟಿಕೆಟ್ ಕೈ ತಪ್ಪುತ್ತಿದ್ದಂತೆ, 'ಖರ್ಗೆ ಅವರ ಮಾತು ಕಾಂಗ್ರೆಸ್ನಲ್ಲಿ ನಡೆಯುವುದಿಲ್ಲ, ಕೆಪಿಸಿಸಿ ಪರಮೇಶ್ವರ್ ಅವರು ಟಿಕೆಟ್ ಒಂದಕ್ಕೆ 5 ಕೊಟಿಯಂತೆ ಮಾರಾಟ ಮಾಡಿದ್ದಾರೆ, ವೀರಪ್ಪ ಮೊಯ್ಲಿಗೆ ದಲಿತರನ್ನು ಕಂಡರೆ ಆಗದು' ಎಂದು ಆರೋಪಿಸಿದ್ದರು.

ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಾಜಿ ಶಾಸಕ ವೆಂಕಟಸ್ವಾಮಿ ಪಾಲಾಗಿದೆ. ಬಿಜೆಪಿಯಿಂದ ಎಕೆಪಿ ನಾಗೇಶ್ ಮತ್ತು ಜೆಡಿಎಸ್ ಪಕ್ಷದಿಂದ ಪಿಳ್ಳಮುನಿಶಾಮಪ್ಪ ಅವರು ಸ್ಪರ್ಧಿಸುತ್ತಿದ್ದಾರೆ.











Click it and Unblock the Notifications