ಬಿಎಸ್ ವೈ ಮೌನವಾಗಿದ್ದಕ್ಕೆ ಹೈಕಮಾಂಡ್ ಗೆ ದೂರು ಕೊಡ್ತಾರಂತೆ!
ಬೆಂಗಳೂರಿಗೆ ಅಮಿತ್ ಶಾ ಭೇಟಿ ವೇಳೆ ಬಿಎಸ್ ವೈ ವಿರುದ್ಧ ದೂರು ಸಲ್ಲಿಸಲು ಬಿಜೆಪಿಯ ಬಣವೊಂದರ ನಿರ್ಧಾರ. ಡಿಕೆ ಶಿವಕುಮಾರ್ ವಿರುದ್ಧ ಐಟಿ ರೈಡ್ ಆದಾಗ ಬಿಜೆಪಿ ವಿರುದ್ದ ಟೀಕೆ ಬಂದರೂ ಸುಮ್ಮನಿದ್ದಿದ್ದಕ್ಕೆ ದೂರು.
ಬೆಂಗಳೂರು, ಆಗಸ್ಟ್ 11: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಐಟಿ ದಾಳಿಯಾಗಿದ ವೇಳೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದ ಹಾಗೂ ಮಾಧ್ಯಮಗಳಿಂದ ಒಂದು ನಿರ್ದಿಷ್ಟ ಅಂತರ ಕಾಯ್ದುಕೊಂಡಿದ್ದ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ದೂರು ನೀಡಲು ರಾಜ್ಯ ಬಿಜೆಪಿಯ ಒಂದು ಗುಂಪು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಮೂರು ದಿನಗಳ ಅಮಿತ್ ಶಾ ರಾಜ್ಯ ಪ್ರವಾಸದ ವೇಳಾಪಟ್ಟಿ
ಆಗಸ್ಟ್ 12ರಂದು ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ, ಅವರನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಐಟಿ ದಾಳಿಯಾಗಿತ್ತು. ಆಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವಾರು ಕಾಂಗ್ರೆಸ್ ನಾಯಕರು ಈ ದಾಳಿಯು ಕೇಂದ್ರ ಸರ್ಕಾರದ ಪಿತೂರಿ, ಇದು ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದರು.
ಇದರ ವಿರುದ್ಧವಾಗಿ ಬಿಜೆಪಿ ನಾಯಕರೂ ವಾಗ್ವಾದಕ್ಕಿಳಿದಿದ್ದರು. ಮಾಜಿ ಮುಖ್ಯಮಂತ್ರಿ ಆರ್. ಅಶೋಕ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್ಸಿಗರ ಟೀಕೆಯನ್ನು ಅಲ್ಲಗಳೆದಿದ್ದರು.
ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ
ಆದರೆ, ಯಡಿಯೂರಪ್ಪ ಅವರು ಮಾತ್ರ ಪಕ್ಷದ ಬೆನ್ನಿಗೆ ನಿಲ್ಲಲಿಲ್ಲ ಎಂಬುದು ಆ ಗುಂಪಿನ ವಾದವಾಗಿದೆ. 'ಬಿಜೆಪಿ ವಿರುದ್ಧ ಪುಂಖಾನುಪುಂಖವಾಗಿ ಹೇಳಿಕೆಗಳು ಬರುತ್ತಿದ್ದರೂ, ಯಡಿಯೂರಪ್ಪ ಮೌನವಾಗಿದ್ದರು. ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ ತಮ್ಮ ಪಕ್ಷದ ಮೇಲೆ ಗಂಭೀರ ಆರೋಪ ಬಂದಾಗ ಮೌನವಾಗಿದ್ದು ತಪ್ಪು. ಇದನ್ನು ಅಮಿತ್ ಶಾ ಅವರೇ ಪ್ರಶ್ನಿಸಿ ತಿಳಿದುಕೊಳ್ಳಬೇಕು' ಎಂದು ಆ ಗುಂಪು ಅಮಿತ್ ಶಾ ಅವರಿಗೇ ಮನವಿ ಸಲ್ಲಿಸಲಿದೆ ಎಂದು ಹೇಳಲಾಗಿದೆ.