ಕೋವಿಡ್ ಸೋಂಕಿತರ ಶವ 15 ತಿಂಗಳ ಬಳಿಕ ಪತ್ತೆ; ತನಿಖೆಗೆ ಸಮಿತಿ
ಬೆಂಗಳೂರು, ನವೆಂಬರ್ 30; ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಶವ 15 ತಿಂಗಳ ಬಳಿಕ ಪತ್ತೆಯಾದ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ವಿಚಾರಣೆ ನಡೆಸಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ.
ಕೋವಿಡ್ನಿಂದ ಮೃತಪಟ್ಟ ದುರ್ಗಾ ಸುಮಿತ್ರಾ ಮತ್ತು ಮುನಿರಾಜು ಶವಗಳು 15 ತಿಂಗಳ ಬಳಿಕ ಶವಾಗಾರದಲ್ಲಿ ಪತ್ತೆಯಾಗಿತ್ತು. ನವೆಂಬರ್ 27ರಂದು ಬೆಳಗ್ಗೆ 10.30ರ ವೇಳೆಗೆ ಶವಾಗಾರ ಸ್ವಚ್ಛಗೊಳಿಸುವಾಗ ಶವಗಳು ಸಿಕ್ಕಿದ್ದವು.
ಈ ಘಟನೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಮಂಗಳವಾರ ಈ ಕುರಿತು ಇಎಸ್ಐ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ. ಕೋವಿಡ್ನಿಂದ ಮೃತಪಟ್ಟ ದುರ್ಗಾ ಸುಮಿತ್ರಾ ಹಾಗೂ ಮುನಿರಾಜು ಮೃತದೇಹಗಳು ಶವಾಗಾರ ಸ್ವಚ್ಛಗೊಳಿಸುವಾಗ ಶೈತ್ಯಗಾರದಲ್ಲಿ ಪತ್ತೆಯಾಗಿದ್ದು, ಈ ಕುರಿತು ವಿಚಾರಣೆ ನಡೆಸಲು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಹೇಳಿದೆ.

ಈ ಸಮಿತಿಯು ಪ್ರಕರಣದ ಬಗ್ಗೆ ವಿವರವಾದ ವಿಚಾರಣೆಯನ್ನು ನಡೆಸಿ ಒಂದು ವಾರದಲ್ಲಿ ವರದಿ ನೀಡಲಿದೆ. ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಎಸ್ಐ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಪೊಲೀಸರಿಗೆ ಮಾಹಿತಿ; ನವೆಂಬರ್ 27ರಂದು ಶವಾಗಾರ ಸ್ವಚ್ಛಗೊಳಿಸುವಾಗ ಶವಗಳು ಪತ್ತೆಯಾಗಿದ್ದವು. ಶವಗಳನ್ನು ಪ್ಲಾಸ್ಟಿಕ್ನಿಂದ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಅವುಗಳ ಮೇಲೆ ಹೆಸರು ಇರುವ ಟ್ಯಾಗ್ ಸಹ ಇತ್ತು.
ಶವ ಪತ್ತೆಯಾದ ಕೂಡಲೇ ಇಎಸ್ಐ ಆಸ್ಪತ್ರೆಯವರು ರಾಜಾಜಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದರು. ಪೊಲೀಸರ ನೇತೃತ್ವದಲ್ಲಿಯೇ ಶವಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಶವಗಳನ್ನು ರವಾನೆ ಮಾಡಲಾಗಿತ್ತು.
ನವೆಂಬರ್ 29ರಂದು ಕುಟುಂಬದವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಲಾಗಿತ್ತು. ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ಶವಗಳ ಅಂತ್ಯ ಸಂಸ್ಕಾರ ಸಹ ನಡೆದಿದೆ.
ತನಿಖೆಗೆ ಡಿಕೆಶಿ ಆಗ್ರಹ; ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 15 ತಿಂಗಳ ಬಳಿಕ ಕೋವಿಡ್ನಿಂದ ಮೃತರಾದವರ ದೇಹಗಳು ರಾಜಾಜಿನಗರದ ಇಎಸ್ಐ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಕಂಡುಬಂದಿರುವುದು ಆಘಾತಕಾರಿ. ಆಸ್ಪತ್ರೆಯ ಆಡಳಿತ ಜನರಿಗೆ ನರಕ ದರ್ಶನ ಮಾಡಿಸಿದೆ. ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರದ ನಿರ್ಲಕ್ಷ್ಯತೆಗೂ ಇದು ಕನ್ನಡಿ ಹಿಡಿದಂತಿದೆ ಎಂದು ದೂರಿದ್ದಾರೆ.
ಕೋವಿಡ್ ಸಮಯದಲ್ಲಿ ಜನರಿಗೆ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ, ಆಸ್ಪತ್ರೆಗೆ ಕಟ್ಟಿದ ಹಣ ಕೂಡ ವಾಪಸ್ ಬಂದಿಲ್ಲ. ಕನಿಷ್ಠಪಕ್ಷ ಮೃತರಿಗೆ ಗೌರವಯುತ ಅಂತ್ಯಸಂಸ್ಕಾರಕ್ಕೂ ಅವಕಾಶ ನೀಡದ ನೀಚ ಆಡಳಿತ ಇದಕ್ಕೆ ನೀಡುವ ಸಮಜಾಯಿಷಿ ಏನು? ಸತ್ತಾಗಲೂ ನೆಮ್ಮದಿ ನೀಡದ ಬಿಜೆಪಿ ಕೊಡುವ ಕಾರಣ ಏನು? ಎಂದು ಡಿ. ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸೂತಕದ ಮನೆಗೆ ಇನ್ನಿಲ್ಲದ ಆಘಾತ ನೀಡಿರುವ ಇಎಸ್ಐ ಆಸ್ಪತ್ರೆ ಕುರಿತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮೃದುಧೋರಣೆ ತೋರಿದಂತಿದೆ. ನಾಮಕಾವಸ್ಥೆ ತನಿಖೆ ನಡೆಸಿ, ಕೈತೊಳೆದುಕೊಳ್ಳುವಲ್ಲಿ ಬಿಜೆಪಿ ಸರ್ಕಾರದ್ದು ಎತ್ತಿದ ಕೈ ಎಂದು ಡಿ. ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಬೆಂಗಳೂರು ರಾಜಾಜಿನಗರದ ಇಎಸ್ಐ ಆಸ್ಪತ್ರೆಯ ಶೈತ್ಯಾಗಾರದಲ್ಲಿ 15 ತಿಂಗಳ ನಂತರ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿರುವ ಮೃತರ ಕುಟುಂಬದವರಿಗೆ ನ್ಯಾಯ ದೊರೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಬಿಜೆಪಿ ಸರ್ಕಾರ ನುಣುಚಿಕೊಳ್ಳುವ ಪ್ರಯತ್ನ ಮಾಡದೇ ತನಿಖೆ ನಡೆಸಬೇಕು ಎಂದು ಡಿ. ಕೆ. ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.












Click it and Unblock the Notifications