ಶೃಂಗೇರಿ ಚುನಾವಣೆ ವಿವಾದ: 2023ರಲ್ಲಿ ಮತಗಳ ತಿದ್ದುಪಡಿ ಆಗಿದೆ: ಸಿದ್ದರಾಮಯ್ಯ ಆರೋಪ
ಬೆಂಗಳೂರು: ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ ಮರು ಎಣಿಕೆಯಲ್ಲಿ 690 ಮತಗಳು ಲಭಿಸಿವೆ. ಬಿಜೆಪಿಯವರು ಕ್ರಿಮಿನಲ್ ಸಂಚು ಮಾಡಿ ವೋಟ್ ಚೋರಿ ಮಾಡಿದ್ದಾರೆ. ರಾಜೇಗೌಡರಿಗೆ ಬಿದ್ದಿದ್ದ 250 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಇದು ವೋಟ್ ಡಕಾಯಿತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೃಂಗೇರಿ ವಿಧಾನಸಭಾ ಕ್ಷೇತ್ರ ಚುನಾವಣೆ, ಮರುಮತದಾನ ಕುರಿತು ಕಿಡಿ ಕಾರಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿಗಳು ಮಾತನಾಡಿದರು. ಮರು ಮತ ಎಣಿಕೆಯಲ್ಲಿ ಕ್ಷೇತ್ರದಲ್ಲಿ ಮೂರು ವರ್ಷದಿಂದ ಶಾಸಕರಾಗಿದ್ದ ಕಾಂಗ್ರೆಸ್ ರಾಜೇಗೌಡರ ಸ್ಥಾನ ಅಸಿಂಧುಗೊಂಡಿದೆ. ಸಿದ್ದರಾಮಯ್ಯ ಅವರು ಇದರಲ್ಲಿ ಬಿಜೆಪಿ ಕೈವಾಡ ಇದೆ ಎಂದು ದೂರಿದರು.

ಕಾಂಗ್ರೆಸ್ನ ರಾಜೇಗೌಡ ಕಳೆದ ಚುನಾವಣೆಯಲ್ಲಿ ಶೃಂಗೇರಿಯಲ್ಲಿ 201 ಮತಗಳ ಅಂತರದಲ್ಲಿ ಗೆದ್ದಿದ್ದರು. ಅವರಿಗೆ 59,171 ಮತಗಳು ಬಂದಿದ್ದವು. ಎದುರಾಳಿ ಬಿಜೆಪಿಯ ಜೀವರಾಜ್ ಅವರಿಗೆ 58,970 ಮತಗಳು ಬಂದಿದ್ದವು. ಇವಿಎಂನಲ್ಲಿ ರಾಜೇಗೌಡರು 58,602 ಮತ ಮತ್ತು ಅಂಚೆಯಲ್ಲಿ 569 ಮತಗಳನ್ನು ಪಡೆದಿದ್ದಾರೆ. ಇನ್ನೂ ಜೀವರಾಜ್ ಅವರು 58,278 ಮತಗಳ ಜೊತೆಗೆ ಅಂಚೆ ಮೂಲಕ 692 ಮತ ಗಳಿಸಿದ್ದರು. ಇವೆಲ್ಲವೂ ಅರ್ಹ ಮತಗಳೆಂದು ಚುನಾವಣಾಧಿಕಾರಿಗಳು, ಏಜೆಂಟ್ಗಳು ಸಹಿ ಮಾಡಿ ಫಲಿತಾಂಶ ಘೋಷಿಸಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಿತ್ತು ಎಂಬುದನ್ನು ಹೈಲೈಟ್ ಮಾಡಿದರು.
314 ಮತಗಳು ಮಾತ್ರ ಅರ್ಹ
ಫಲಿತಾಂಶ ಬಂದ ಬಳಿಕ ಜೀವರಾಜ್ ಅವರು ಮತದಾನದಲ್ಲಿ ಅಕ್ರಮ ಆಗಿದೆ ಎಂದು ರಾಜ್ಯ ಹೈಕೋರ್ಟ್ ನಲ್ಲಿ ಮರು ಎಣಿಕೆಗೆ ದಾವೆ ಹೂಡಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇದೇ ವರ್ಷ ಮಾರ್ಚ್ 6ರಂದು ಮರು ಎಣಿಕೆಗೆ ನಿರ್ದೇಶಿಸಿತು. ಮರು ಎಣಿಕೆಯಲ್ಲಿ ರಾಜೇಗೌಡರಿಗೆ 314 ಮತಗಳು ಮಾತ್ರ ಅರ್ಹವಾಗುತ್ತವೆ. 255 ಮತಗಳು ಅನರ್ಹ ಎಂದು ಆಗುತ್ತದೆ ಎಂದು ಅವರು ವಿವರಿಸಿದರು.
ಮತಗಳ ತಿದ್ದುಪಡಿ ವಿವರಿಸಿದ ಸಿದ್ದರಾಮಯ್ಯ
ಎಣಿಕೆ ಬಳಿಕ ಎಲ್ಲಾ ದಾಖಲಾತಿಗಳನ್ನು ಟ್ರಂಕ್ನಲ್ಲಿ ಇಡಲಾಗುತ್ತದೆ. 2023ರಲ್ಲಿ ಮತ ಎಣಿಕೆಯಾಗುವಾಗ ಎರಡು ಕಡೆ ಬಿಜೆಪಿ ಸರ್ಕಾರವಿತ್ತು. ಆಗ ಬಿಜೆಪಿಯವರು ಸಿಬ್ಬಂದಿ ಮೂಲಕ ಮತಪತ್ರಗಳನ್ನು ತಿದ್ದಿದ್ದಾರೆ. ಇದು ಕ್ರಿಮಿನಲ್ ಸಂಚು. ಹೀಗಾಗಿ ಇಂದಿನ ಮರು ಎಣಿಕೆಯಲ್ಲಿ ಮತಗಳ ಏರುಪೇರಾಗಿವೆ ಎಂದು ಅವರು ಆರೋಪಿಸಿದರು.
ಆಕ್ಷೇಪ ಎತ್ತದೇ ಸಹಿ ಹಾಕಿದ್ದೇಕೆ?
ರಾಜೇಗೌಡರಿಗೆ ಮೂರನೇ ಸುತ್ತಿನಲ್ಲಿ ಲಭಿಸಿದ್ದ ಎಲ್ಲಾ 170 ಅಂಚೆ ಮತಗಳು ಈಗ ಅನರ್ಹವಾಗಿವೆ. ಅವು ಹಿಂದೆ ಮತ ಎಣಿಕೆಯಲ್ಲಿ ಅರ್ಹವಾಗಿದ್ದವು. ಕಾಂಗ್ರೆಸ್ನಿಂದ ಸುಧೀರ್ ಕುಮಾರ್ ಮರೋಳಿ ಅವರು ಏಜೆಂಟ್ ಆಗಿದ್ದರು. ಎಲ್ಲಾ ಏಜೆಂಟರು 2023ರಲ್ಲಿ ಸಹಿ ಹಾಕಿದ ದಾಖಲೆಯಿದೆ. ಮತಗಳು ಅನರ್ಹವಾಗಿದ್ದರೆ ಆಗಲೇ ಎಲ್ಲರೂ ಆಕ್ಷೇಪ ಎತ್ತಬಹುದಾಗಿತ್ತು. ಆಗ ಯಾರೂ ಆಕ್ಷೇಪ ಎತ್ತಲಿಲ್ಲ ಯಾಕೆ? ಎಂದು ಪ್ರಶ್ನಿಸಿದರು.
ಚುನಾವಣಾ ಆಯೋಗಕ್ಕೆ ಪತ್ರ
ಮರು ಎಣಿಕೆ ಸಂದರ್ಭದಲ್ಲಿ ಚುನಾವಣಾ ವೀಕ್ಷಕರು ಸಹ ಬಂದಿದ್ದರು. ಗಂಭೀರ ಸ್ವರೂಪದ ಕ್ರಿಮಿನಲ್ ಸಂಚು ನಡೆದಿರುವುದಾಗಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಅಂಚೆ ಮತಪತ್ರಗಳನ್ನು ಫೊರೆನ್ಸಿಕ್ ಪರಿಶೀಲನೆಗೆ ಸಲ್ಲಿಸಬೇಕಿತ್ತು. ಚುನಾವಣಾ ಫಲಿತಾಂಶ ಘೋಷಣೆಯನ್ನು ನ್ಯಾಯಾಲಯಕ್ಕೆ ಬಿಡಬೇಕಾಗಿತ್ತು. ಅದನ್ನು ಬಿಟ್ಟು ಚುನಾವಣಾಧಿಕಾರಿಗಳೇ ಫಲಿತಾಂಶ ಘೋಷಣೆ ಮಾಡಿದ್ದಾರೆ. ಚುನಾವಣಾ ವೀಕ್ಷಕರು ಅನುಮತಿ ಅನುಮತಿ ಇಲ್ಲದೇ ಆತುರಾತುರವಾಗಿ ಫಲಿತಾಂಶ ಘೋಷಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗೆ ಶಕ್ಷೆಯಾಗಲಿದೆ ಎಂದು ಆಗ್ರಹಿಸಿದರು.
ಕೇಂದ್ರದ ಇಬ್ಬರು ಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು ಸಮರ್ಥನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮುಂದಿನ ದಿನಗಳಲ್ಲಿ ಜನರು ಅವರಿಗೆ ಪಾಠ ಕಲಿಸಲಿದ್ದಾರೆ. ರಾಜೇಗೌಡ ಅವರು ನೀಡಿದ ದೂರಿನ ಮೇಲೆ ಎಫ್ಐಆರ್ ಆಗಿದೆ. ಇದು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದರು.
ಉಪ ಚುನಾವಣೆ ಫಲಿತಾಂಶ 2028ರ ಚುನಾವಣೆಗೆ ದಿಕ್ಸೂಚಿ
ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಫಲಿತಾಂಶ 2028ರ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದರು. ಅವರ ಪ್ರಕಾರ 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಾಯಿತು ಎಂದು ಬಿಜೆಪಿಯವರ ಧಾಟಿಯಲ್ಲಿಯೇ ತಿರುಗೇಟು ನೀಡಿದರು.
SDPIಗೆ ಅಧಿಕ ಮತ: ಎಡವಿದ್ದರೆ ಪರಿಶೀಲನೆ
ಹಿಂದೆ ನಡೆದಿದ್ದ ಮೂರು ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿದೆ. ಅಂದರೆ ಜನರ ಸರ್ಕಾರದ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ. ಮತದಾರರನ್ನು ನಾವು ತಲುಪಿದ್ದೇವೆ. ನಮ್ಮ ಮೇಲೆ ಜನ ವಿಶ್ವಾಸ, ಅಭಿಮಾನ ಇಟ್ಟುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿವೆ. ಇನ್ನೂ ಎಸ್ಡಿಪಿಐಗೆ ಹೆಚ್ಚು ಮತಗಳು ಬಂದಿವೆ. ಇದೆಲ್ಲ ನೋಡಿದರೆ ನಾವು ಎಲ್ಲಿ ಎಡವಿದ್ದೇವೆ ಎಂಬುವುದನ್ನು ಪರಿಶೀಲನೆ ಮಾಡಲಿದ್ದೇವೆ ಎಂದು ಅವಲೋಕನ ಮಾತುಗಳನ್ನು ಸಿಎಂ ಹೇಳಿದರು.















Click it and Unblock the Notifications