ಎಂಬಿ.ಪಾಟೀಲ್ ಮನೆಗೆ ಮುಖಂಡರ ಪರೇಡ್, ಸಿಎಂ ಕೂಡ ಬಂದು ಹೋದರು
ಬೆಂಗಳೂರು, ಜೂನ್ 08: ಅತೃಪ್ತ ಹಿರಿಯ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್ ಮನವೊಲಿಸಲು ಇನ್ನಿಲ್ಲದ ಪ್ರಯತ್ನಗಳು ಸಾಗಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಎಂಬಿ ಪಾಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಎಂಬಿ ಪಾಟೀಲ್ ಅವರ ಅಸಮಾಧಾನದ ಬಗ್ಗೆ ಮಾತನಾಡಿದ್ದೇನೆ, ಇದನ್ನು ಸರಿಪಡಿಸುವ ಕಾರ್ಯ ಕಾಂಗ್ರೆಸ್ ಮುಖಂಡರದ್ದು, ನಾನು ಮಾಹಿತಿಯನ್ನಷ್ಟೆ ಪಡೆದಿದ್ದೇನೆ ಎಂದರು.
ಎಂಬಿ ಪಾಟೀಲ್ ಕುಟುಂಬ ಹಾಗೂ ನಾವು ಬಹಳ ಕಾಲದ ಗೆಳೆಯರು ಅಷ್ಟೆ ಅಲ್ಲದೆ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಅವರ ಅಸಮಾಧಾನದ ಕಾರಣ ತಿಳಿದುಕೊಳ್ಳುವುದು ನನ್ನ ಜವಾಬ್ದಾರಿ ಹಾಗಾಗಿ ಎಂಬಿ ಪಾಟೀಲ್ ಭೇಟಿ ಮಾಡಿದ್ದೇನೆ ಎಂದರು.

ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ಗೆ ವಿಷಯ ಮುಟ್ಟಿಸುತ್ತೇನೆ ಎಂದಿರುವ ಕುಮಾರಸ್ವಾಮಿ. ಹೈಕಮಾಂಡ್ ಶೀಘ್ರವೇ ಮಧ್ಯವಸ್ಥಿಕೆ ವಹಿಸಿ ಪರಿಸ್ಥಿತಿ ಹತೋಟಿಗೆ ತರಬೇಕಿದೆ ಎಂದರು.
ಎಂಬಿ.ಪಾಟೀಲ್ ಅವರು ಕಾಂಗ್ರೆಸ್ ಮುಖಂಡರ ಮೇಲೆ ತೀವ್ರ ಅಸಮಾಧಾನಗೊಂಡಿದ್ದು ನಿನ್ನೆ ಸಿದ್ದರಾಮಯ್ಯ ಅವರು ಭೇಟಿ ಮಾಡಿ ಮಾತುಕತೆ ನಡೆಸಿ ಸಂಧಾನ ಮಾಡಲು ಯತ್ನಿಸಿ ವಿಫಲವಾಗಿದ್ದರು. ಇಂದು ಡಿಸಿಎಂ ಪರಮೇಶ್ವರ್, ಡಿಕೆ ಶಿವಕುಮಾರ್, ಕೆಜೆ ಜಾರ್ಜ್, ಆರ್ವಿ ದೇಶಪಾಂಡೆ ಇನ್ನೂ ಹಲವು ನಾಯಕರು ಪಾಟೀಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಎಂ.ಬಿ.ಪಾಟೀಲ್ ಅವರು ಯಾವುದಕ್ಕೂ ಬಗ್ಗಿಲ್ಲ.












Click it and Unblock the Notifications