ಬೆಂಗಳೂರಿನಲ್ಲಿ ಈ ಸಮಸ್ಯೆ ಇಲ್ಲವೇ ಇಲ್ಲ ಎಂದ ಡಿಸಿಎಂ ಡಿ.ಕೆ ಶಿವಕುಮಾರ್: ಬಿಜೆಪಿ ತಿರುಗೇಟು
ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಮುಂದುವರಿದಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆಯಾದರೂ ಇನ್ನುಳಿದ ಪ್ರದೇಶಗಳಲ್ಲಿ ರಸ್ತೆಗುಂಡಿ ಯಥಾಸ್ಥಿತಿ ಮುಂದುವರಿದಿದೆ. ಆದರೆ ರಸ್ತೆಗುಂಡಿ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಪ್ರಮುಖ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಬಿಜೆಪಿ ದೂರಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರೇ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಲಿ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸತ್ತವರ ಸಂಖ್ಯೆಯನ್ನೇ ಮುಚ್ಚಿಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಹದಗೆಟ್ಟ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆ ಗುಂಡಿಗಳು ಅಮಾಯಕ ಸವಾರರ ಜೀವ ಬಲಿ ಪಡೆಯುತ್ತಿರುವುದು ಇಡೀ ಜಗತ್ತಿಗೆ ತಿಳಿದಿದೆ. ಆದರೆ, ತಾವು ಸದನದಲ್ಲಿ "ಇಂತಹ ಪ್ರಕರಣಗಳು ಸಂಭವಿಸಿರುವುದು ಬೆಂಗಳೂರು ನಗರ ಪಾಲಿಕೆಗಳ ಗಮನಕ್ಕೆ ಬಂದಿರುವುದಿಲ್ಲ" ಎಂದು ಸದನಕ್ಕೆ ಸುಳ್ಳು ಮಾಹಿತಿ ನೀಡಿರುವುದು ಬೇಜವಾಬ್ದಾರಿತನದ ಪರಮಾವಧಿ ಎಂದು ಬಿಜೆಪಿ ಟೀಕಿಸಿದೆ.

ಅಲ್ಲದೇ ಕುರ್ಚಿ ಕಚ್ಚಾಟದಲ್ಲಿ ಮುಳುಗಿರುವ ಡಿಕೆ ಶಿವಕುಮಾರ್ ಅವರೇ, ಬೆಂಗಳೂರಿನ ಯಮಸ್ವರೂಪಿ ಗುಂಡಿಗಳು ಈ ವರ್ಷದಲ್ಲಿ ಬೆಂಗಳೂರಿನಲ್ಲಿ ಹಲವು ಜನರನ್ನು ಬಲಿಪಡಿದಿವೆ. ಆದರೆ, 2 ವರ್ಷಗಳಲ್ಲಿ ಅಂತಹ ಘಟನೆಗಳೇ ನಡೆದಿಲ್ಲವೆಂದು ಸದನದಲ್ಲಿ ಉತ್ತರ ನೀಡಿರುವ ತಾವು.
ರಸ್ತೆ ಗುಂಡಿಗಳಿಂದಾಗಿ ತಂದೆ ಕಳೆದುಕೊಂಡ ಮಕ್ಕಳ ಗೋಳು ಕೇಳಿದ್ದೀರಾ?, ಮಗ/ಮಗಳ ಕಳೆದುಕೊಂಡ ತಾಯಿಯ ದುಃಖ ಆಲಿಸಿದ್ದೀರಾ ಎಂದು ಕರ್ನಾಟಕ ಬಿಜೆಪಿ ಪ್ರಶ್ನೆ ಮಾಡಿದೆ. ಅಲ್ಲದೇ ತಮ್ಮ ಅಸಮರ್ಥ ಆಡಳಿತದಿಂದ ಆಗಿರುವ ಗುಂಡಿ ಗಂಡಾಂತರವನ್ನು "ಸೋಷಿಯಲ್ ಮೀಡಿಯಾ ಸೃಷ್ಟಿ" ಎಂದು ಹಾದಿ ತಪ್ಪಿಸುವುದು ಸರಿಯೇ ?
ಬೆಂಗಳೂರಿನ ರಸ್ತೆಗುಂಡಿಗಳು ಮೃತ್ಯುಕೂಪಗಳಾಗಿ ಸವಾರರ ಪ್ರಾಣ ತೆಗೆಯುತ್ತಿವೆ. ಕಾಂಗ್ರೆಸ್ ಕಾಲದಲ್ಲಿ ಬೆಂಗಳೂರು ಗುಂಡಿಯೂರಾಗಿ ಮಾರ್ಪಟ್ಟಿದ್ದರೂ ತಾವು ಗುಂಡಿಗಳಿಂದ ಯಾವ ಸಾವು ಸಂಭವಿಸಿಲ್ಲವೆಂದು ಸದನಕ್ಕೆ ಸುಳ್ಳು ಹೇಳಿರುವುದು ನಿಮ್ಮ ಕೊಳಕು ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಇದು ಪ್ರಜಾಪ್ರಭುತ್ವ ಮೌಲ್ಯಕ್ಕೆ ಎಸಗಿದ ಘೋರ ಅಪಚಾರ ಎಂದು ಟೀಕೆ ಮಾಡಿದೆ.
ಬೆಂಗಳೂರಿನಲ್ಲಿ ರಸ್ತೆಗುಂಡಿ ಇಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರಿನಲ್ಲಿ ರಸ್ತೆಗುಂಡಿ ಇಲ್ಲ, ಯಾವ ಸಮಸ್ಯೆಯೂ ಇಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಈಚೆಗೆ ಹೇಳಿದ್ದರು. ಬೆಂಗಳೂರಿನಲ್ಲಿ ಸಮಸ್ಯೆ ಆಗುತ್ತಿದೆ ಎನ್ನುವುದು ಕೇವಲ ಸೋಷಿಯಲ್ ಮೀಡಿಯಾ ಚರ್ಚೆ ಎಂದು ಡಿ.ಕೆ ಶಿವಕುಮಾರ್ ಅವರು ಈಚೆಗೆ ಮಾಧ್ಯಮಗಳಿಗೆ ಹೇಳಿದ್ದರು. ಬೆಂಗಳೂರಿನಲ್ಲಿ ಯಾವುದೇ ಹೊಂಡಗುಂಡಿ ಬಿದ್ದ ರಸ್ತೆಗಳು ಇಲ್ಲ, ಯಾವುದೇ ಸಮಸ್ಯೆಯಿಲ್ಲ. ಇದೆಲ್ಲ ಕೇವಲ ಸೋಷಿಯಲ್ ಮೀಡಿಯಾಗಳಲ್ಲಿ ಸೃಷ್ಟಿ ಆಗಿದೆ ಅಷ್ಟೇ ಎಂದು ಹೇಳಿದ್ದರು.












Click it and Unblock the Notifications