ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮಧ್ಯರಾತ್ರಿ ಸಿಎಂ ಬೊಮ್ಮಾಯಿ ಧ್ವಜಾರೋಹಣ
ಬೆಂಗಳೂರು, ಆಗಸ್ಟ್ 15: ವೇದಿಕೆಯ ಮೇಲೆಲ್ಲ ತಿರಂಗದ ಝಗಮಗ ಬಣ್ಣಗಳ ಬಳುಕು, ಸಭಾಂಗಣದಲ್ಲಿ ನೆರೆದಿದ್ದವರ ಕೈಯಲ್ಲಿ ಅರಳಿದ್ದ ರಾಷ್ಟ್ರಧ್ವಜಗಳು, ಶಾಸ್ತ್ರೀಯ ನೃತ್ಯ ಮತ್ತು ಸಂಗೀತಗಳ ಮಧ್ಯೆ ತಾಯಿ ಭಾರತಾಂಬೆಯ ಸ್ಮರಣೆ ಮಾಡಲಾಯಿತು. ಸಮಕಾಲೀನ ಚಿತ್ರಗೀತೆಗಳ ಮೂಲಕ ಜನರಲ್ಲಿ ಉತ್ಸಾಹದ ಅಲೆ ಎಬ್ಬಿಸಿದ ಹೆಸರಾಂತ ಗಾಯಕಿ ಮಂಗ್ಲಿ (ಸತ್ಯವತಿ) ಮತ್ತು ಅವರ ತಂಗಿ ಇಂದಿರಾವತಿ ಸಂಗೀತ ಸುಧೆ ಹರಿಸಿದರು. ಇದರ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಜೊತೆಗಿದ್ದರು.
ಬೆಂಗಳೂರಿನ ಮಲ್ಲೇಶ್ವಂನಲ್ಲಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಪ್ರತಿಷ್ಠಾನದ ವತಿಯಿಂದ ಮಲ್ಲೇಶ್ವರಂ 18ನೇ ಅಡ್ಡ ರಸ್ತೆಯ ಸರ್ಕಾರಿ ಕಾಲೇಜು ಮೈದಾನದಲ್ಲಿ ಭಾನುವಾರ ರಾತ್ರಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮಲ್ಲೇಶ್ವರಂ ಶಾಸಕ ಹಾಗೂ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಭಾನುವಾರ ರಾತ್ರಿ ಒಂಬತ್ತು ಗಂಟೆಯ ಹೊತ್ತಿಗೆಲ್ಲ ಗಂಧರ್ವಲೋಕ ಅನಾವರಣಗೊಂಡಿತು. ಕ್ಷಣಗಳು ಉರುಳುತ್ತಿದ್ದಂತೆ ವೇದಿಕೆಯ ಮೇಲೆ ಪ್ರತ್ಯಕ್ಷರಾದ ನಾನಾ ತಂಡಗಳ ನೃತ್ಯಪಟುಗಳು ಭಾರತಾಂಬೆಯನ್ನು ವಿವಿಧ ಭಾವಗಳಲ್ಲಿ ಗ್ರಹಿಸಿ, ಅಭಿವ್ಯಕ್ತಿಸಿದರು. ಭಾರತ ಮಾತೆಯನ್ನು 'ಸೂರ್ಯ ಚಂದ್ರ ಕರ್ಣಾವತಂಸಂ ತಾರಾಗಣ' ಎಂದು ದಿವ್ಯವಾದ ಪ್ರಭಾವಳಿಯಲ್ಲಿ ಬೆಳಗಿಸಿದರು. ಇದಕ್ಕೆ ಭರತನಾಟ್ಯ, ಒಡಿಸ್ಸಿ, ಕಥಕ್ ಮುಂತಾದ ನೃತ್ಯ ಪ್ರಕಾರಗಳು ಆಸರೆಯಾಗಿದ್ದವು.

ಮೋಡಿ ಮಾಡಿದ ಮಂಗ್ಲಿ, ಚಿತ್ತಾಕರ್ಷಕ ಬಾಣ-ಬಿರುಸು
ದೇಶಾಭಿಮಾನದಿಂದ ಜಮಾಯಿಸಿದ್ದ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಗಾಯಕಿ ಮಂಗ್ಲಿ ಮತ್ತು ಅವರ ತಂಡ ಬೇರೊಂದು ಲೋಕಕ್ಕೆ ಕರೆದೊಯ್ದಿತು. 'ಕಣ್ಣು ಹೊಡಿಯಾಕ ಕಲಿತಾನ' ಎಂದುಕೊಂಡು ಜನಪದ ಲಯದಿಂದ ಆರಂಭಿಸಿದ ಮಂಗ್ಲಿ, ಬಳಿಕ 'ಏಳು ಬೆಟ್ಟಾದ ಒಡೆಯನೇ...' ಎನ್ನುತ್ತ ಮಲೆ ಮಾದಪ್ಪನಿಂದ ಹಿಡಿದು ಕಾಶಿ ವಿಶ್ವನಾಥನವರೆಗೂ ಭಾರತದ ವಿಹಾರ ಮಾಡಿಸಿದರು. ನಂತರ ಮತ್ತೊಮ್ಮೆ ಸಮಕಾಲೀನ ಸ್ಪರ್ಶದ ಗೀತೆಗಳೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡ ಅವರು, ಕಾರ್ಯಕ್ರಮದಲ್ಲಿ ಸಂಚಲನದ ಅಲೆ ಸೃಷ್ಟಿಸಿದರು.

ದೇಶಕ್ಕೆ 75 ವರ್ಷಗಳ ಹಿಂದೆ ನಟ್ಟ ನಡುರಾತ್ರಿ ಸ್ವಾತಂತ್ರ್ಯ ಬಂತಷ್ಟೆ. ಆ ದಿವ್ಯ ಘಳಿಗೆಯನ್ನು ಕಾರ್ಯಕ್ರಮದಲ್ಲಿ ಭರ್ಜರಿ ಪಟಾಕಿ, ಬಾಣ-ಬಿರುಸು ಮತ್ತು ಸಿಡಿಮದ್ದುಗಳ ನಯನ ಮನೋಹರ ಪ್ರದರ್ಶನದ ಮೂಲಕ ಮರುಸೃಷ್ಟಿ ಮಾಡಲಾಯಿತು. ಮುಕ್ಕಾಲು ಗಂಟೆ ಕಾಲ ನಡೆದ ಈ ಚಿತ್ತಾಕರ್ಷಕ ಪ್ರದರ್ಶನದಲ್ಲಿ ನವಭಾರತದ ಶಿಲ್ಪಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಅಶ್ವಥ್ ನಾರಾಯಣ ಸೇರಿದಂತೆ ಹಲವರ ಚಿತ್ತಾರಗಳ ಬೆಡಗಿನ ಲೋಕವು ನೆರೆದಿದ್ದವರನ್ನೆಲ್ಲ ಸಮ್ಮೋಹನಗೊಳಿಸಿತು.












Click it and Unblock the Notifications