ಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 4: ಫಲಪುಷ್ಪಗಳಲ್ಲಿ ಅರಳಿದ ಭಾರತದ ಸೇನೆ ಸಾಮರ್ಥ್ಯ. ಅಮರ್ ಜವಾನ್ ಪ್ರತಿಕೃತಿ, ಭಾರತದ ರಕ್ಷಣಾ ಪಡೆಗಳು ಇದೆಲ್ಲವೂ ಒಂದೆಡೆ ನಿರ್ಮಿಸಲಾಗಿದ್ದ ಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಶನಿವಾರ ಚಾಲನೆ ನೀಡಿದರು.
ಲಾಲ್ ಬಾಗ್ ನಲ್ಲಿ ಶನಿವಾರ ತೋಟಗಾರಿಕೆ ಇಲಾಖೆ ಸ್ವಾತಂತ್ರ್ಯ ದಿನದ ಅಂಗವಾಗಿ ಏರ್ಪಡಿಸಿರುವ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಯೋಧರ ಗೌರವಾರ್ಥ ಪುಷ್ಪ ಪ್ರದರ್ಶನ ಏರ್ಪಡಿಸಿರುವುದು ಹೆಮ್ಮೆಯ ಸಂಗತಿ.
ಭಾರತೀಯ ಸೇನೆ: ಈ ಬಾರಿ ಲಾಲ್ ಬಾಗ್ ಫ್ಲವರ್ ಶೋ ಥೀಮ್
ಸಿಯಾಚಿನ್ ಸೇರಿದಂತೆ ನಾನಾ ರೆಜಿಮೆಂಟ್ ಗಳ ವೈಶಿಷ್ಟ್ಯ ಸಾರುವ ಪುಷ್ಪ ಪ್ರದರ್ಶನವನ್ನು ಯೋಧರಿಗೆ ಸಮರ್ಪಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ಲ್ಯಾಘಿಸಿದರು. ನಾಡಿನ ಜನತೆ ಪುಷ್ಪ ಪ್ರದರ್ಶನ ವೀಕ್ಷಿಸಿದರೆ ಹೆಚ್ಚು ಅರ್ಥಪೂರ್ಣ ಎಂದರು.
ಲಾಲ್ಬಾಗ್ನಲ್ಲಿ ಶನಿವಾರ ಆರಂಭವಾಗಿರುವ ಫಲಪುಷ್ಪ ಪ್ರದರ್ಶನ ಆಗಸ್ಟ್ 15ರವರೆಗೂ ನಡೆಯಲಿದೆ. ಪ್ರತಿ ವರ್ಷದಂತೆ ಈವರ್ಷವೂ ಲಾಲ್ ಬಾಗ್ ನಲ್ಲಿ ಹಲವಾರು ವಿಧ ವಿಧವಾದ ಪುಷ್ಟಗಳಿಂದ ಗ್ಲಾಸ್ ಹೌಸ್ ಅನ್ನು ಅಲಂಕರಿಸಲಾಗಿದೆ.
ವಾಯುಸೇನೆ, ಭೂ ಸೇನೆ, ನೌಕಾಸೇನೆಯನ್ನು ಗುಲಾಬಿ ಹೂವುಗಳಿಂದ ಸಿದ್ದಪಡಿಸಲಾಗಿದೆ. ಸಿಯಾಚಿನ್ ಪ್ರದೇಶದಲ್ಲಿ 30 ಡಿಗ್ರಿ ಸೆಲ್ಸಿಯಸ್ನಲ್ಲಿ ನಮ್ಮ ಯೋಧರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬ ಬಗ್ಗೆ ಹೂಗಳಿಂದಲೇ ಚಿತ್ರಿಸಿರುವುದು ವಿಶೇಷವಾಗಿದೆ.
ಪ್ರದರ್ಶನದ 15 ದಿನಗಳ ವೇಳೆಯೂ ಮೂರರಿಂದ ನಾಲ್ಕು ಬಾರಿ ಪುಷ್ಪಗಳನ್ನು ಬದಲಾಯಿಸಲಾಗುತ್ತದೆ. ಈ ಬದಲಾವಣೆಗೆ ಒಂದು ಸಲಕ್ಕೆ 40 ಸಾವಿರ ರೂ. ವೆಚ್ಚವಾಗುತ್ತದೆ. 1.20 ಲಕ್ಷ ಹೂಗಳನ್ನು ಈ ರೀತಿ ಬದಲಾವಣೆ ಮಾಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ವೈ.ಎಸ್ ಪಾಟಿಲ್ ತಿಳಿಸಿದ್ದಾರೆ.