ಬೆಂಗಳೂರು ವಿಷನ್-2022 ಕುರಿತು ಸಿಎಂ ಯಡಿಯೂರಪ್ಪ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 17: ವಿವಿಧ ಕ್ಷೇತ್ರಗಳ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನಗರವು 2022 ರಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಬೆಂಗಳೂರು ವಿಷನ್-2022 ಕಾರ್ಯಕ್ರಮ ಉದ್ದೇಶಿಸಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ""ಬೆಂಗಳೂರು ನಗರ ಯೋಜನೆ ಹಾಗೂ ಬಿಬಿಎಂಪಿ ಪ್ರಗತಿ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಸಲಹೆ ನೀಡಿದ್ದಾರೆ'' ಎಂದು ತಿಳಿಸಿದರು.
ಸಿಲಿಕಾನ್ ಸಿಟಿಯಲ್ಲಿ ಹೊರ ರಾಜ್ಯದಿಂದ ವಿಧ್ಯಾಭ್ಯಾಸಕ್ಕಾಗಿ ಬಂದಿದ್ದ ಯುವತಿಯ ಅತ್ಯಾಚಾರ, ಕೊಲೆ!
ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ಉದ್ಯಮ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನದ ಬಗ್ಗೆ ವಿಶೇಷ ಕಾಳಜಿ ಪ್ರದರ್ಶಿಸುತ್ತಾರೆ. ನಾನೂ ಸಹ ಅವರಿಂದ ಪ್ರಭಾವಿತನಾಗಿ ಅಭಿವೃದ್ದಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ ಎಂದರು.
ನಗರದಲ್ಲಿ ಸುಗಮ ಸಂಚಾರ ರೂಪಿಸುವುದು, ಹಸಿರು ಬೆಂಗಳೂರು ಮಾಡುವುದು, ಮೂಲ ಸೌಕರ್ಯ, ಜನಜೀವನಕ್ಕೆ ಅನುಕೂಲ ಮಾಡಿಕೊಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಜಾಗತಿಕವಾಗಿ ಬೆಂಗಳೂರು ಸುವರ್ಣ ನಗರವಾಗಿದೆ ಎಂದು ಅಭಿಪ್ರಾಯಪಟ್ಟರು.
ಆರ್ಥಿಕ ರಾಜಧಾನಿಯೂ ಆಗಿರುವ ಬೆಂಗಳೂರಿನಲ್ಲಿ ರಾಜ್ಯದ ಆರನೇ ಒಂದರಷ್ಟು ಜನಸಂಖ್ಯೆ ಹೊಂದಿದೆ. ವಿಶ್ವದ ತಂತ್ರಜ್ಞಾನ ಪ್ರಸಿದ್ಧ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ ಎಂದ ಸಿಎಂ ಯಡಿಯೂರಪ್ಪ, ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ನಗರ ಬೆಳವಣಿಗೆಯಲ್ಲಿನ ಸವಾಲು, ಸಮಸ್ಯೆಗಳನ್ನು ಕೇಂದ್ರೀಕರಿಸಿ ಈ ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ. ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುವ ಇಚ್ಛೆ ಇದೆ. ವಾಹನಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದ್ದು, ಸಂಚಾರ ದಟ್ಟಣೆ, ವಾಯುವಾಲಿನ್ಯಕ್ಕೂ ಕಾರಣವಾಗಿದೆ ಎಂದೂ ಹೇಳಿದರು.
ನಮ್ಮ ಮೆಟ್ರೋ 7 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದು, ಮುಂದಿನ ಎರಡು ವರ್ಷದಲ್ಲಿ ಹತ್ತು ಲಕ್ಷ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಿಎಸ್ವೈ ತಿಳಿಸಿದರು.
ಸ್ವಚ್ಛ ಬೆಂಗಳೂರು, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಕಡೆ ಗಮನ ಹರಿಸಲಾಗುತ್ತಿದ್ದು, "ನನ್ನ ಕಸ ನನ್ನ ಜವಾಬ್ದಾರಿ' ಎನ್ನುವ ಅರಿವು ಮೂಡಿಸಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಕೆರೆಗಳ ಅಭಿವೃದ್ದಿ, ಕೃತಕ ನೆರೆ ತಪ್ಪಿಸಲು ರಾಜಕಾಲುವೆ ಅಭಿವೃದ್ಧಿ, ತ್ಯಾಜ್ಯ ನೀರು ಸಂಸ್ಕರಣೆಗೆ ಅಗತ್ಯ ಯೋಜನೆ ರೂಪಿಸಲಾಗುವುದು. ಎರಡು ಬೃಹತ್ ವೃಕ್ಷೋಧ್ಯಾನಗಳ ನಿರ್ಮಾಣಕ್ಕೆ ಮುಂದಾಗಿದ್ದು, ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಶುದ್ಧ ನೀರು, ಗಾಳಿ ಇದ್ದು ವಾಸಕ್ಕೆ ಯೋಗ್ಯ ಮಾಡಬೇಕು. ಬಿಬಿಎಂಪಿ ಸೇರಿ ಇತರ ಇಲಾಖೆಗಳು ಜನರ ಸಮಸ್ಯೆ ಬಗ್ಗೆ ತ್ವರಿತವಾಗಿ ಬಗೆಹರಿಸಬೇಕು. ಸಹಾಯ ತಂತ್ರಾಂಶಗಳನ್ನುಬಳಸಿಕೊಳ್ಳಬೇಕು. ಈಗಾಗಲೇ ಆಸ್ತಿ ನೋಂದಣಿಗೆ ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ವಲಸಿಗರೇ ಹೆಚ್ಚಾಗಿರುವ ಹಿನ್ನೆಲೆ ನಮ್ಮ ಸಂಸ್ಕೃತಿ ಪರಿಚಯಿಸಲು ಕೆಲಸ ಮಾಡಲಾಗುವುದು, ಬೆಂಗಳೂರು ಒನ್ ಕೇಂದ್ರಗಳ ವ್ಯಾಪ್ತಿ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮಗಳೆಲ್ಲಾ ಎರಡು ವರ್ಷಗಳಲ್ಲಿ ಪೂರ್ತಿ ಆಗಬೇಕು. ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆ ಆಗಬಾರದು ಎಂದು ಬೆಂಗಳೂರು ಉಸ್ತುವಾರಿಯೂ ಆಗಿರುವ ಸಿಎಂ ಯಡಿಯೂರಪ್ಪ ಹೇಳಿದರು.
Recommended Video
ಬೆಂಗಳೂರು ವಿಷನ್-2022 ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಆರ್.ಅಶೋಕ್, ಗೋಪಾಲಯ್ಯ, ಸುರೇಶ್ ಕುಮಾರ್, ಭೈರತಿ ಬಸವರಾಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಉಪಸ್ಥಿತಿ ವಹಿಸಿದ್ದರು.