ಸದ್ಯಕ್ಕೆ ಜೈಲು ಶಿಕ್ಷೆ ತಪ್ಪಿಸಿಕೊಂಡ ಸಚಿವ ಸಂತೋಷ್ ಲಾಡ್!
ಬೆಂಗಳೂರು, ಜೂನ್ 20: 'ಇನ್ನು ಸ್ವಲ್ಪ ತಡವಾಗಿದ್ರೂ ಸಿದ್ದರಾಮಯ್ಯ ಸಚಿವ ಸಂಪುಟದ ಕಾರ್ಮಿಕ ಖಾತೆ ಸಚಿವ ಸಂತೋಷ್ ಲಾಡ್ ಅವರು ಜೈಲು ಪಾಲಾಗುತ್ತಿದ್ದರು'. ಆದರೆ, ಚೆಕ್ ಬೌನ್ಸ್ ಪ್ರಕರಣದಲ್ಲಿ ಕೊನೆಕ್ಷಣದಲ್ಲಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿ ಸದ್ಯಕ್ಕೆ ಜೈಲುವಾಸ ತಪ್ಪಿಸಿಕೊಂಡಿದ್ದಾರೆ.
ರಾಕ್ ಲೈನ್ ವೆಂಕಟೇಶ್ ಒಡೆತನದ ರಾಕ್ ಲೈನ್ ಎಂಟರ್ ಟೈನ್ಮೆಂಟ್ ಸಂಸ್ಥೆ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನಗರದ 42ನೇ ಎಸಿಎಂಎಂ ನ್ಯಾಯಾಲಯವು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ 5 ತಿಂಗಳ ಸಾಧಾರಣ ಜೈಲು ಶಿಕ್ಷೆ ವಿಧಿಸಿತ್ತು.

'ಶಿಕ್ಷೆ ಅನುಭವಿಸುವುದರೊಂದಿಗೆ 7.25 ಕೋಟಿ ರು ದಂಡ ಪಾವತಿ ಮಾಡಬೇಕು. ಪಾವತಿಸದಿದ್ದರೆ ಪ್ರತ್ಯೇಕವಾಗಿ 6 ತಿಂಗಳು ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು' ಎಂದು ನ್ಯಾ. ನ್ಯಾಯಾಧೀಶರಾದ ಅನ್ನುಗೌಡ ಪಾಟೀಲ ಅವರು ಸೋಮವಾರ(ಜೂನ್ 19) ತಮ್ಮ ಅದೇಶದಲ್ಲಿ ಹೇಳಿದರು.
ರಾಕ್ ಲೈನ್ ವೆಂಕಟೇಶ್ ಅವರ ಬಳಿ 2014ರಲ್ಲಿ 6.20 ಕೋಟಿ ರು ಪಡೆದಿದ್ ಸಂತೋಷ್ ಅವರು ಹಣ ಹಿಂತಿರುಗಿಸಿಲ್ಲ. 'ಶೀತಲ್ ಡೆವಲಪರ್ಸ್' ಕಂಪೆನಿಯಹೆಸರಿಗೆ ಡಿ.ಡಿ ತೆಗೆಸಿ ಈ ಹಣವನ್ನು 'ರಾಕ್ಲೈನ್ ಎಂಟರ್ಟೈನ್ಮೆಂಟ್' ಕಂಪೆನಿಯ ಮೂಲಕ ನೀಡಲಾಗಿತ್ತು.
ಎರಡೂ ಬಾರಿ ಸಮನ್ಸ್ ಸಹ ಜಾರಿಯಾದರೂ, ಸಂತೋಷ್ ಲಾಡ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ, ಲಾಡ್ ಅವರ ಬಂಧನಕ್ಕೆ ಜಾಮೀನುರಹಿತ ವಾರೆಂಟ್ ಸಹ ಜಾರಿಯಾಗಿತ್ತು.
ಮಧ್ಯಾಹ್ನ 3 ಗಂಟೆಯೊಳಗಾಗಿ ಲಾಡ್ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಅವರು ಇರುವ ಸ್ಥಳದಲ್ಲೇ ಬಂಧಿಸಲು ಸೂಚನೆ ನೀಡುವುದಾಗಿ ನ್ಯಾಯಾಧೀಶರು ಹೇಳಿದರು.
ಮಧ್ಯಾಹ್ನ 3 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾದ ಲಾಡ್, 'ಪ್ರಕರಣ ಸಂಬಂಧ ಮೇಲ್ಮನವಿ ಸಲ್ಲಿಸುತ್ತೇನೆ. ಅದಕ್ಕೆ ಕಾಲಾವಕಾಶ ನೀಡಬೇಕು' ಎಂದು ಕೋರಿದ್ದಲ್ಲದೆ 2 ಲಕ್ಷ ರು ಮೌಲ್ಯದ ಬಾಂಡ್ ಹಾಗೂ ವ್ಯಕ್ತಿಯೊಬ್ಬರ ಶ್ಯೂರಿಟಿ ಕೊಟ್ಟು ಜಾಮೀನು ಪಡೆದರು. ಸದ್ಯ ನ್ಯಾಯಾಲಯವು ಶಿಕ್ಷೆಯನ್ನು ಒಂದು ತಿಂಗಳು ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ.












Click it and Unblock the Notifications