ಸಿಡಿ ಲೇಡಿಗೆ ಮತ್ತೊಮ್ಮೆ ನೋಟಿಸ್ ನೀಡಿದ ಕಬ್ಬನ್ ಪಾರ್ಕ್ ಪೊಲೀಸರು
ಬೆಂಗಳೂರು, ಮಾರ್ಚ್ 26: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತೆ ಎನ್ನಲಾದ ಸಿಡಿ ಗರ್ಲ್ ಪರವಾಗಿ ವಕೀಲ ಜಗದೀಶ್ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಮಿಷ ಒಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಐಪಿಸಿ 376 ಸಿ, 354, 506, 504, 417 ಅಡಿ ಕೇಸು ದಾಖಲಾಗಿದೆ.
ಅಶ್ಲೀಲ ಸಿಡಿ ಬಿಡುಗಡೆಯಾಗಿ 24 ದಿನ ಕಳೆದಿವೆ. ಇಲ್ಲಿಯವರೆಗೂ ಸಿಡಿ ಪ್ರಕರಣದಲ್ಲಿ ನಾನಾ ಬೆಳವಣಿಗೆ ಆಗಿವೆ. ಎರಡು ವಿಡಿಯೋ ಬಿಡುಗಡೆ ಮಾಡಿದ್ದ ಯುವತಿ ಮೂರನೇ ವಿಡಿಯೋ ಬಿಡುಗಡೆ ಮಾಡುವ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವ ಬಗ್ಗೆ ಹೇಳಿದ್ದರು. ಸಂತ್ರಸ್ತೆ ಪರ ದೂರು ನೀಡಿದ ವಕೀಲ ಜಗದೀಶ್ ಕುಮಾರ್ ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆ ನಡೆಸಿ ಕೆಲವು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಈಗಾಗಲೇ ಆಕೆ ವಿರುದ್ಧ ದೂರು ದಾಖಲಾಗಿದೆ. ಐದು ನೋಟಿಸ್ ಬಂದರೂ ವಿಚಾರಣೆಗೆ ಬಂದಿಲ್ಲ. ನಿಮಗೆ ಅವರ ಸಂಪರ್ಕ ಹೇಗೆ ಸಿಕ್ಕಿತು ? ಅವರು ನಿಜವಾಗಿಯೂ ಲಿಖಿತವಾಗಿ ಬರೆದುಕೊಟ್ಟಿರುವ ದೂರಾ ? ಆಕೆ ಬರದಿರಲು ಕಾರಣವೇನು ? ಇಡೀ ಇಲಾಖೆ ಭದ್ರತೆ ಒದಗಿಸುವ ಭರವಸೆ ನೀಡಿದರೂ ಆಕೆ ತಲೆ ಮರೆಸಿಕೊಂಡಿರುವ ಬಗ್ಗೆ ದೂರುದಾರ ವಕೀಲನನ್ನು ಪೊಲೀಸರು ಪ್ರಶ್ನೆ ಮಾಡಿದ್ದಾರೆ.

ಇನ್ನೂ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ, ಅತ್ತ ಜಾರಕಿಹೊಳಿ ಸಹೋದರರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ನಮ್ಮ ವಕೀಲರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದ್ದಾರೆ. ಐಪಿಸಿ 376ಸಿ ಗಂಭೀರ ಸ್ವರೂಪದ ಆರೋಪ. ಹೀಗಾಗಿ ಹಿರಿಯ ವಕೀಲರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲಿದ್ದಾರೆ. ರಮೇಶ್ ಜಾರಕಿಹೊಳಿ ಈ ಮೊದಲೇ ದೂರು ನೀಡಿದ್ದರಿಂದ ಬಂಧನದ ಭೀತಿಯಿಂದ ನಿರಾಳ ಆಗಿದ್ದಾರೆ. ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಮೊದಲು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಯುವತಿ ಆ ವಿಡಿಯೋಗೂ ನನಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಳು.

ಆನಂತರ ಎರಡನೇ ವಿಡಿಯೋದಲ್ಲಿ ಗೃಹ ಸಚಿವರಿಂದ ಭದ್ರತೆ ಕೋರಿದ್ದಳು. ಇದೀಗ ಮೂರನೇ ವಿಡಿಯೋದಲ್ಲಿ ಜಾರಕಿಹೊಳಿ ನನ್ನನ್ನು ಅಶ್ಲೀಲವಾಗಿ ಬಳಿಸಿಕೊಂಡಿದ್ದಾರೆ. ಕೆಲಸ ಕೊಡಿಸುವುದಾಗಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಜತೆಗೆ ದೂರಿನ ಸಂಬಂಧ ಹೇಳಿಕೆ ನೀಡಲು ಐದು ನೋಟಿಸ್ ಕೊಟ್ಟರೂ ಬಂದಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಜರುಗಿಸುವ ಮುನ್ನ ಸಂತ್ರಸ್ತೆ ಎನ್ನಲಾದ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.

ಡೋಂಟ್ ಕೇರ್ : ಸಿಡಿ ಬಿಡುಗಡೆಯಾಗಿ ಇಪ್ಪತ್ತು ದಿನ ಕಳೆದರೂ ಆಕೆ ದೂರು ನೀಡಿಲ್ಲ. ಇದೊಂದು ಷಡ್ಯಂತ್ರ. ಇದರ ಹಿಂದೆ ಇರುವ ಸೂತ್ರಧಾರ, ಪಾತ್ರಧಾರಿ ಮಹಾ ನಾಯಕ ಎಲ್ಲಾ ಹೊರಗೆ ಬರುತ್ತಾರೆ. ರಮೇಶ್ ಜಾರಕಿಹೊಳಿ ಮೊದಲೇ ದೂರು ನೀಡಬೇಕಿತ್ತು. ದೂರು ಕೊಡುವುದರಲ್ಲಿ ತಡವಾಯಿತು. ಮೊದಲೇ ದೂರು ನೀಡಿದ್ದರೆ, ಸಿಡಿ ಗ್ಯಾಂಗ್ ಜೈಲಿನಲ್ಲಿ ಇರುತ್ತಿತ್ತು. ಈ ಕುರಿತು ಹೆದರುವ ಅಗತ್ಯವೇ ಇಲ್ಲ. ಇನ್ನು ನಿರೀಕ್ಷಣಾ ಜಾಮೀನು ಪಡೆಯುವ ವಿಚಾರದ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ಮೊದಲು ರಮೇಶ್ ದೂರು ಕೊಟ್ಟಿದ್ದಾರೆ. ಎರಡೂ ದೂರನ್ನು ಸತ್ಯಾಸತ್ಯತೆಯಿಂದ ತನಿಖೆ ನಡೆಸಿ ಕ್ರಮ ಜರುಗಿಸಲಿ ಎಂದು ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications