ರಮೇಶ್ ಜಾರಕಿಹೊಳಿಗೆ ಕೊರೋನಾ, ಶಾಸಕ ಭೈರತಿ ಬಸವರಾಜ್ ಹೇಳಿದ್ದು ನಿಜಾನಾ ?
ಬೆಂಗಳೂರು, ಏಪ್ರಿಲ್ 05: ಸಿಡಿ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳ ವಿಚಾರಣೆಗೆ ಸೋಮವಾರ ಹಾಜರಾಗಬೇಕಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೋನಾ ಸೋಂಕು ತಗುಲಿತೇ ? ಈ ಸಂಗತಿಯನ್ನು ಶಾಸಕ ಭೈರತಿ ಬಸವರಾಜ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅನಾರೋಗ್ಯ ನೆಪದಲ್ಲಿ ರಮೇಶ್ ಜಾರಕಿಹೊಳಿ ವಿಚಾರಣೆಗೆ ಗೈರು ಹಾಜರಾಗುವ ಸಾಧ್ಯತೆಯಿದೆ.
Recommended Video
ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ಎಫ್ಐಆರ್ ಆದ ಬಳಿಕ ಎಸ್ಐಟಿ ವಿಚಾರಣೆ ಎದುರಿಸಿದ್ದ ರಮೇಶ್ ಜಾರಕಿಹೊಳಿ ಈ ಸಿಡಿ ನಕಲಿ ಎಂದು ಹೇಳಿದ್ದರು. ಆನಂತರ ನಾಲ್ಕು ದಿನಗಳ ಕಾಲಾವಕಾಶ ಕೋರಿದ್ದರು. ಆ ಬಳಿಕ ಸಾರ್ವಜನಿಕವಾಗಿ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿರಲಿಲ್ಲ.
ಆ ನಂತರ ಸಿಡಿ ಸಂತ್ರಸ್ತ ಯುವತಿಯನ್ನು ಐದು ದಿನಗಳ ಕಾಲ ಎಸ್ಐಟಿ ಅಧಿಕಾರಿಗಳ ವಿಚಾರಣೆ ನಡೆಸಿದ್ದರು. ಸೋಮವಾರ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗುತ್ತಾರೆ ಎಂದೇ ಹೇಳಲಾಗಿತ್ತು. ಇದೀಗ ರಮೇಶ್ ಜಾರಕಿಹೊಳಿ ಅನಾರೋಗ್ಯ ವಿಚಾರ ಮುನ್ನೆಲೆಗೆ ಬಂದಿದೆ.
ರಮೇಶ್ ಜಾರಕಿಹೊಳಿ ಅವರ ಯೋಗಕ್ಷೇಮ ವಿಚಾರಿಸಲು ಕರೆ ಮಾಡಿದ್ದೆ. ಅವರಿಗೆ ಕೊರೋನಾ ಪಾಸಿಟೀವ್ ಇರುವ ವಿಚಾರ ತಿಳಿಸಿದರು. ಎಸ್ಐಟಿ ವಿಚಾರಣೆಗೆ ಅವರು ಹಾಜರಾಗಲಿದ್ದಾರೆ. ಆದರೆ ಸದ್ಯದ ಮಟ್ಟಿಗೆ ಅವರ ಅರೋಗ್ಯದಲ್ಲಿ ಏರುಪೇರಾಗಿದೆ ಎಂದು ಶಾಸಕ ಭೈರತಿ ಬಸವರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್, ರಮೇಶ್ ಅವರು ಅನಾರೋಗ್ಯದಿಂದ ಬಳಲುತ್ತಿರುವುದು ನಿಜ. ಕೊರೊನಾ ಇರುವ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ. ಕರೋನಾ ಇದ್ದರೆ ಎಲ್ಲಾ ವರದಿ ನೀಡುವಂತೆ ಕೂಡ ಕೇಳಿದ್ದೇನೆ. ಇನ್ನು ಜಾರಕಿಹೊಳಿ ವಿಚಾರಣೆ ಸಂಬಂಧ ಈವರೆಗೂ ಯಾವುದೇ ನೋಟಿಸ್ ನೀಡಿಲ್ಲ. ಎಸ್ಐಟಿ ಅಧಿಕಾರಿಗಳು ಕರೆದಾಗಲೆಲ್ಲಾ ರಮೇಶ್ ವಿಚಾರಣೆಗೆ ಹಾಜರಾಗಿದ್ದಾರೆ. ಈಗಲೂ ಕರೆದರೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಸಿಡಿಲೇಡಿ ವಿಚಾರಣೆ ವೇಳೆ ಕೆಲವು ಸ್ಫೋಟಕ ಸಂಗತಿಗಳನ್ನು ಹೇಳಿದ್ದರು. ರಮೇಶ್ ಜಾರಕಿಹೊಳಿ ನನಗೆ ಮೋಸ ಮಾಡಿದ್ದಾರೆ. ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದರ ನಡುವೆ ಇಬ್ಬರ ನಡುವೆ ನಡೆದಿರುವ ಕರೆಗಳ ಮಾಹಿತಿ, ಚಾಟಿಂಗ್ ವಿವರಗಳನ್ನು ಕೂಡ ಎಸ್ಐಟಿಗೆ ನೀಡಿದ್ದರು. ಆಕೆ ಹೇಳಿಕೆ ದಾಖಲಿಸಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಅಜ್ಞಾತವಾಸಕ್ಕೆ ತೆರಳಿದ್ದರು. ಇದೀಗ ರಮೇಶ್ ಜಾರಕಿಹೊಳಿ ಎಸ್ಐಟಿ ಎದುರು ಹಾಜರಾಗುತ್ತಾರಾ ? ಇಲ್ಲವೇ ಅನಾರೋಗ್ಯ ಕಾರಣ ನೀಡಿ ವಿಚಾರಣೆಗೆ ಕಾಲಾವಕಾಶ ಪಡೆಯುತ್ತಾರೆ. ಅನಾರೋಗ್ಯ ನೆಪದಲ್ಲಿ ವಿಚಾರಣೆಯಿಂದ ಕೆಲವು ದಿನ ಕಾಲಾವಕಾಶ ಪಡೆಯಲು ಮುಂದಾಗಿದ್ದಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.