ಗಣೇಶ ಮೂರ್ತಿ ಕೂರಿಸಿದರೆ ಸಿಸಿಟಿವಿ ಕ್ಯಾಮರಾ ಅಳವಡಿಸಲೇಬೇಕು
ಬೆಂಗಳೂರು, ಸೆಪ್ಟೆಂಬರ್ 12: ಗಣೇಶ ಚತುರ್ಥಿ ಶಾಂತಿಯುತವಾಗಿ ನಡೆಯಬೇಕು ಎಂಬ ಕಳಕಳಿಯಿಂದ ಪ್ರತಿ ಗಣೇಶ ಪೆಂಡಾಲ್ ನಲ್ಲಿಯೂ ಸಿಸಿಟಿವಿ ಕ್ಯಾಮರಾ ಗಳನ್ನು ಅಳವಡಿಸಲು ನಗರ ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ.
ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಧ್ವನಿವರ್ಧಕಗಳನ್ನು ಮಾತ್ರ ಬಳಕೆ ಮಾಡಬೇಕು, ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ಆಗುವವರೆಗೂ ಪ್ರತಿಷ್ಠಾಪನೆ ಸ್ಥಳದಲ್ಲಿ ಆಯೋಜಕರ ಪರವಾದ ಕಾರ್ಯಕರ್ತರು ಇರಬೇಕು. ಪೆಂಡಾಲ್ ನ್ನು ಮತ್ತು ಗಣೇಶ ವಿಗ್ರಹವನ್ನು ಖಾಳಿ ಬಿಟ್ಟು ಹೋಗಬಾರದು ಎಂದು ತಿಳಿಸಿದ್ದಾರೆ.
ದಿನದ 24 ಗಂಟೆಯೂ ಆಯೋಜಕರು ಸ್ಥಳದಲ್ಲಿಯೇ ಇದ್ದು ಏನು ಅಪಾಯವಾಗದಂತೆ ಎಚ್ಚರವಹಿಸಬೇಕು, ವಿವಾದಿತ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಬಾರದು, ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆದು ಅದನ್ನು ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಿದ್ದಾರೆ.

ಗಣೇಶ ವಿಸರ್ಜನೆ ಸಮಯದಲ್ಲಿ ಸಿಡಿಮದ್ದು ಸಿಡಿಸಬಾರದು
ಗಣೇಶ ವಿಸರ್ಜನಾ ಮೆರವಣಿಗೆಯು ಸೂಕ್ಷ್ಮ ಸ್ಥಳ, ಅತೀ ಸೂಕ್ಷ್ಮ ಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಮುಂಭಾಗದಲ್ಲಿ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನು ಸಿಡಿಸದಂತೆ ನೋಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಲವಂತವಾಗಿ ವಂತಿಗೆ ಸ್ವೀಕರಿಸಿದರೆ ಕಠಿಣ ಕ್ರಮ
ಗಣೇಶ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗಾಗಿ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ವಂತಿಗೆ ಸ್ವೀಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಪ್ಪರ ಬೆಂಕಿ ನಂದಿಸುವ ಸಾಮಗ್ರಿ ಇರಬೇಕು
ಚಪ್ಪರದಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳನ್ನು ಇಟ್ಟುಕೊಂಡಿರಬೇಕು, ಯಾವುದೇ ಕಾರಣಕ್ಕೂ ಪೆಂಡಾಲ್ ನಲ್ಲಿ ಅಡುಗೆ ಮಾಡಬಾರದು, ಸಂಭ್ರಮದ ಆಚರಣೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು.

ಆಯೋಜಕರು ಪಾಲಿಸಬೇಕಾದಂತೆ ಕೆಲವು ಸೂಚನೆಗಳು
-ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ 24 ಗಂಟೆಯೂ ಸಮರ್ಪಕ ಬೆಳಕು ಇರುವಂತೆ ನೋಡಿಕೊಳ್ಳಬೇಕು
-ವಿದ್ಯುತ್ ಸಂಪರ್ಕ ಹಾಗೂ ವಿದ್ಯುತ್ ಅಲಂಕಾರಕ್ಕೆ ಸಂಬಂಧಿಸಿದಂತೆ ಬೆಸ್ಕಾಂನಿಂದ ಅನುಮತಿ ಪಡೆಯಬೇಕು
-ಗಣೇಶ ವಿಸರ್ಜನಾ ಸಮಯ ವೇಳೆ ಯಾವುದೇ ರೀತಿಯ ಅಪರಾಧ ನಡೆಯದಂತೆ, ಕಾನೂನು ಸುವ್ಯವಸ್ಥೆಗೆ ಭಂಗ ಆಗದಂತೆ ಎಚ್ಚರವಹಿಸಬೇಕು
-ವಿಸರ್ಜನಾ ಮೆರವಣಿಗೆಯಲ್ಲಿ ಸ್ವಯಂಸೇವಕರಿಗೆ ಗುರುತಿನ ಚೀಟಿ, ಬ್ಯಾಡ್ಜ್, ಟೀ-ಶರ್ಟ್, ಕ್ಯಾಪ್ ಗಳನ್ನು ನೀಡಿ ಶಾಂತರೀತಿಯಿಂದ ಮೆರವಣಿಗೆ ವಿಸರ್ಜನಾ ಸ್ಥಳ ತಲುಪುವಂತೆ ಸಹಕರಿಸಬೇಕು
-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸ್ಥಳದಲ್ಲಿ ಮೊದಲೇ ಪೊಲೀಸರಿಗೆ ತಿಳಿಸಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳಬೇಕು












Click it and Unblock the Notifications