ಬೆಂಗಳೂರಿನ 3 ಹುಕ್ಕಾಬಾರ್ ಗಳ ಮೇಲೆ ದಾಳಿ, 15 ಜನರ ಸೆರೆ
ಬೆಂಗಳೂರು, ಜನವರಿ 23: ಬೆಂಗಳೂರಿನ ಸುದ್ದಗುಂಟೇಪಾಳ್ಯ, ಹನುಮಂತನಗರ ಮತ್ತು ಕಲಾಸಿಪಾಳ್ಯ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದ 3 ಹುಕ್ಕಾಬಾರ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 15 ಮಂದಿಯನ್ನು ಬಂಧಿಸಿದ್ದಾರೆ. ಬಂದಿತರಲ್ಲಿ ಹೊರ ರಾಜ್ಯದವರೂ ಇದ್ದಾರೆ.
ಅಸ್ಸಾಂನ ಇಸ್ಲಾಂವುದ್ದೀನ್, ಹೈದರಾಬಾದಿನ ಮೋಹನ್ ಕೃಷ್ಣ, ತಮಿಳುನಾಡಿನ ಪಂಕಜ್ ಅಗರವಾಲ್, ಮಣಿಪುರದ ಹುಂಗಾನಿಂಗ್, ಪಿಟೋಕಾ, ಅವೋಟೋ, ವಿಟೋಪು, ಮಶಾನ್ ಗ್ಯಾಮ್, ಬೆಂಗಳೂರಿನ ದೀಪಕ್, ಅನಿಕೇತ್, ಮೆಹುಲ್ ದುರ್ಗಾನಿ, ಸುಭಾಷ್ ಸಿಂಗ್, ಸುಹಾನ್ ಲಾಮ್ ತಂಗ್ ಮಾನ್ಲೂನ್, ಕುಬೇರ್ ದೋಸ್ ಸುಬ್ಬಾ, ತೋಕ್ ಚೋಮ್ ಸುನೀಲ್ ಕುಮಾರ್ ಸಿಂಗ್ ಬಂಧಿತರು.[ಬೆಂಗಳೂರಿನ ಬಾರ್ ಟೆರೇಸ್ ಮೇಲೆ ಹುಕ್ಕಾದಂಧೆ]

ಹನುಮಂತನಗರ ವ್ಯಾಪ್ತಿಯ ಬುಲ್ ಟೆಂಪಲ್ ರಸ್ತೆಯಲ್ಲಿನ ಹುಕ್ಕಾಬಾರ್ ಮೇಲೆ ದಾಳಿ ಮಾಡಿದ ಸಿಸಿಬಿ ಆರಕ್ಷಕರು ಇಬ್ಬರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಸುಮಾರು 22 ಮಂದಿ ಯುವಕರು, ಕಾಲೇಜು ವಿದ್ಯಾರ್ಥಿಗಳು ಹುಕ್ಕಾ ಸೇದಲು ಗ್ರಾಹಕರಾಗಿ ಬಂದಿದ್ದರು ಎನ್ನಲಾಗಿದೆ. ದಾಳಿ ವೇಳೆ ಹುಕ್ಕಾಗೆ ಬಳಸುವ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಸುದ್ದಗುಂಟೇಪಾಳ್ಯ ಕ್ರೈಸ್ಟ್ ಕಾಲೇಜು ಸಮೀಪದ ಕೃಷ್ಣಾ ನಗರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಅಕ್ರಮ ಹುಕ್ಕಾಬಾರ್ ತೆರೆದು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಮಾದಕ ವ್ಯಸನಿಗಳಾಗಲು ಪ್ರಚೋದನೆ ಏಳು ಮಂದಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.[ಹುಕ್ಕಾ ಪಾರ್ಲರಲ್ಲಿ ಸಿಕ್ಕಿಬಿದ್ದ ಬೆಂಗಳೂರು ಶಾಲಾ ಮಕ್ಕಳು]

ಕಲಾಸಿಪಾಳ್ಯ ವ್ಯಾಪ್ತಿಯ ಮಿನರ್ವ ಸರ್ಕಲ್ ಬಳಿ ಯಾವುದೇ ನಿಯಮಾವಳಿ ಪಾಲಿಸದೇ ಹುಕ್ಕಾಬಾರ್ ನಡೆಸುತ್ತಿದ್ದ ಆರು ಮಂದಿಯನ್ನು ಬಂಧಿಸಿ ವಿವಿಧ ಪರಿಕರಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪ್ರಾಥಮಿಕ ವಿಚಾರಣೆಯಲ್ಲಿ ಅಂತರರಾಜ್ಯಗಳಿಂದ ಅಕ್ರಮವಾಗಿ ಮಾಲನ್ನ ತರಿಸಿ ದಂಧೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಮದ್ಯ, ಧೂಮಪಾನದ ಬಲೆಗೆ ಸಿಲುಕುತ್ತಿದ್ದು, ಯುವಜನತೆ ದುಷ್ಟಗಳಿಗೆ ಬಲಿಯಾಗುತ್ತಿರುವುದು ಶೋಚನೀಯ. ಸಿಸಿಬಿಯ ಎಸಿಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಶ್ರೀನಿವಾಸ್, ಸಿಬ್ಬಂದಿ ಶಿವಹುಚ್ಚಯ್ಯ ಮತ್ತಿತರರು ದಾಳಿಯಲ್ಲಿದ್ದರು.












Click it and Unblock the Notifications