ಸಿಸಿಬಿ ಪೊಲೀಸರ ಬಳಿ 150 ಕೋಟಿ ಕೇಳಿ ಸಿಕ್ಕಿಬಿದ್ದರು!
ಬೆಂಗಳೂರು, ಜ. 2 : ಅಲ್ಯೂಮಿನಿಯಂ ಅನ್ನು ರೆಡ್ ಮರ್ಕ್ಯೂರಿ ಎಂದು ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿ ತಲೆ ಮರಿಸಿಕೊಂಡಿದ್ದು ಹುಡುಕಾಟ ನಡೆಯುತ್ತಿದೆ.
ಬಂಧಿತರನ್ನು ತಮಿಳುನಾಡಿನ ಹೊಸೂರು ಮೂಲದ ಮಣಿಕಂಠನ್, ಎಂ.ಡಿ.ಹನೀಫ್ ಹಾಗೂ ಹೊಸಕೋಟೆ ತಾಲೂಕಿನ ನಾಗರಾಜ್ ಎಂದು ಗುರುತಿಸಲಾಗಿದೆ. ಜೈಸಿಂಗ್ ಎನ್ನುವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತರಿಂದ 7,500 ರೂ. ಮೌಲ್ಯದ ಅಲ್ಯುಮಿನಿಯಂ ಬ್ಲಾಕ್ ಹಾಗೂ ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದೆ.

ಎಲ್ಟಿಟಿಇ ಹೆಸರು : ಬಂಧಿತರು ಶ್ರೀಲಂಕಾದ ಎಲ್ಟಿಟಿಇಗೆ ಸೇರಿದ ಬಾಂಬ್ ತಯಾರಿಕೆಗೆ ಬಳುಸುವ ರೆಡ್ ಮರ್ಕ್ಯೂರಿ ಅನ್ನು ನಾವು ಖರೀದಿ ಮಾಡಿದ್ದೇವೆ. ಇದರ ಬೆಲೆ 150 ಕೋಟಿ ರೂ.ಗಳಾಗಿದ್ದು, ಅದನ್ನು ಮಾರಾಟ ಮಾಡುತ್ತೇವೆ ಎಂದು ವಂಚಿಸುತ್ತಿದ್ದರು. ಆದರೆ, ಅವರ ಬಳಿ 8 ಕೆಜಿ ಅಲ್ಯೂಮಿನಿಯಂ ಬ್ಲಾಕ್ ಮಾತ್ರವಿತ್ತು. [ಪುರಾತನ ವಿಗ್ರಹ ಕಳ್ಳಸಾಗಣೆ ಜಾಲ ಪತ್ತೆ ಹಚ್ಚಿದ ಸಿಸಿಬಿ]
ಅಲ್ಯೂಮಿನಿಯಂ ಬ್ಲಾಕ್ : ಆರೋಪಿಗಳು ಸುಲಭವಾಗಿ ಹಣ ಸಂಪಾದಿಸಲು ವಂಚಿಸಲು ನಿರ್ಧರಿಸಿದ್ದರು. 7,500 ರೂ. ಮೌಲ್ಯದ 8 ಕೆ.ಜಿ. ತೂಕದ ಅಲ್ಯುಮಿನಿಯಂ ಬ್ಲಾಕ್ನಲ್ಲಿ ಸ್ಫೋಟವಿದೆ ಎಂದು ನಂಬಿಸಿದ್ದ ಇವರು, ಇದನ್ನು ಅಣು ಬಾಂಬ್ ತಯಾರಿಕೆಗೆ ಬಳಸಬಹುದು ಎಂದು ಹೇಳಿದ್ದರು. ಇದರ ಬಗ್ಗೆ 10 ನಿಮಿಷದ ವಿಡಿಯೋವೊಂದನ್ನು ಮಾಡಿಕೊಂಡು ಪ್ರಾತ್ಯಕ್ಷಿಕೆ ನೀಡುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬಂಧಿತ ಆರೋಪಿ ನಾಗರಾಜ್ಗೆ ಕರೆ ಮಾಡಿ, ನಾವು ಮುಂಬೈನಿಂದ ಆಗಮಿಸಿರುವ ಒಂದು ಗ್ಯಾಂಗ್ನವರು ಸ್ಫೋಟಕವನ್ನು ಖರೀದಿಸುತ್ತೇವೆ ಎಂದು ನಂಬಿಸಿದ್ದರು. ಮೆಜೆಸ್ಟಿಕ್ ಸಮೀಪದ ಹೋಟೆಲ್ನಲ್ಲಿ ಪೊಲೀಸರಿಗೆ ವಿಡಿಯೋ ತೋರಿಸಿದ್ದ ಬಂಧಿತರು 150 ಕೋಟಿ ರೂ. ನೀಡಬೇಕು ಎಂದು ತಿಳಿಸಿದ್ದರು. [ಸಿಸಿಬಿ ಪೊಲೀಸರೇ ಅಪರಹರಣಕಾರರಾದಾಗ!]
ಮೊದಲು 5 ಲಕ್ಷ ನೀಡಿದ ಪೊಲೀಸರು ಸ್ಫೋಟಕ ತೆಗೆದುಕೊಂಡು ಹೋಗುವಾಗ ಉಳಿದ ಹಣ ನೀಡುತ್ತೇವೆ ಎಂದು ಹೇಳಿದ್ದರು. ನಂತರ ಹೆಚ್ಚಿನ ಸಿಬ್ಬಂದಿ ಜೊತೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೈಸಿಂಗ್ ಎನ್ನುವ ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.












Click it and Unblock the Notifications