ತುರ್ತು ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಮಾಹಿತಿ ನೀಡಿದ ಡಿಕೆ ಬ್ರದರ್ಸ್ !
ಬೆಂಗಳೂರು, ಮೇ 31: ಕರ್ನಾಟಕದ ಕಾಂಗ್ರೆಸ್ಸಿನ ಆಪದ್ಬಾಂಧವರಾದ ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ಅವರ ಮೇಲೆ ಸಿಬಿಐ ಕಣ್ಣು ಬಿದ್ದಿದೆಯಾ? ರಾಜಕೀಯವಾಗಿ ಅವರ ವರ್ಚಸ್ಸನ್ನು ಕಡಿಮೆ ಮಾಡಲು ಕೇಂದ್ರ ಬಿಜೆಪಿ ನಾಯಕರು ಷಡ್ಯಂತ್ರ ರಚಿಸಿದ್ದಾರಾ? ಅದಕ್ಕೆಂದೇ ಡಿಕೆ ಬ್ರದರ್ಸ್ ಮನೆಗಳ ಮೇಲೆ ED ದಾಳಿ ನಡೆಯುವ ಸಾಧ್ಯತೆ ಇದೆಯಾ?
ಹೌದು ಎನ್ನುತ್ತಿದ್ದಾರೆ ಡಿಕೆ ಬ್ರದರ್ಸ್. ಇದಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಸಹೋದರರಿಬ್ಬರೂ ತುರ್ತು ಸುದ್ದಿ ಗೋಷ್ಠಿ ನಡೆಸಿದರು.
"ಕೇಂದ್ರದ ಕೆಲವು ಬಿಜೆಪಿ ನಾಯಕರ ಷಡ್ಯಂತ್ರದಿಂದಾಗಿ 3- 4 ದಿನಗಳಲ್ಲಿ ನನ್ನ ಮೇಲೆ ಮತ್ತು ಡಿ ಕೆ ಶಿವಕುಮಾರ್ ಅವರ ಮೇಲೆ ED(ಜಾರಿ ನಿರ್ದೇಶಾಲಯ) ದಾಳಿ ನಡೆಸಲು ಸಿಬಿಐ ಸರ್ಚ್ ವಾರೆಂಟ್ ನೀಡಿದೆ ಎಂಬ ಮಾಹಿತಿಗಳು ಬಲ್ಲ ಮೂಲಗಳಿಂದ ನಮಗೆ ಲಭ್ಯವಾಗಿದೆ" ಎಂದು ಈ ಸಂದರ್ಭದಲ್ಲಿ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಒಟ್ಟು 11 ನಾಯಕರ ಮೇಲೆ ದಾಳಿ ನಡೆಸಲು ಕುತಂತ್ರ ನಡೆಯುತ್ತಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದ್ದು ಇಂಥ ಬೆದರಿಕೆಗಳಿಗೆಲ್ಲ ನಾವು ಬಗ್ಗೋದಿಲ್ಲ ಎಂದು ಅವರು ಹೇಳಿದ್ದಾರೆ.

ಷಡ್ಯಂತ್ರಕ್ಕೆ ನಾವು ಬಗ್ಗೋಲ್ಲ!
"ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ನರೇಂದ್ರ ಮೋದಿ ಮುಂತಾದವರು ತಮ್ಮ ವಿರುದ್ಧ ಷಡ್ಯಂತ್ರ್ ನಡೆಸುತ್ತಿದ್ದು, 11 ಕ್ಕೂ ಹೆಚ್ಚು ನಮ್ಮ ಸಂಬಂಧಿಗಳ ಮೇಲೆ ED ದಾಳಿ ನಡೆಸಲು ಸಿಬಿಐ ಕಡೆಯಿಂದ ವಾರೆಂಟ್ ಕೊಡಿಸಿದ್ದಾರೆ ಎಂಬ ಖಚಿತ ಮಾಹಿತಿ ನಮಗೆ ಲಭ್ಯವಾಗಿದೆ. ಈ ವಿಷಯಗಳನ್ನು ಮಾಧ್ಯಮಗಳ ಗಮನಕ್ಕೆ ತರಲು ಸುದ್ದಿಗೋಷ್ಠಿ ಕರೆದಿದ್ದೇವೆ. ನಾವು ಯಾವುದೇ ತಪ್ಪೂ ಮಾಡಿಲ್ಲ. ನಮ್ಮ ವಿರುದ್ಧ ಆರೋಪ ಮಾಡಿದರೆ ನಾವು ಬಗ್ಗೋಲ್ಲ"- ಡಿ ಕೆ ಸುರೇಶ್

ಬಾಲಗಳ ಮೂಲಕ ಹತ್ತಿಕ್ಕಲು ಪ್ರಯತ್ನ!
"ನಮ್ಮ ಜೊತೆಯಲ್ಲೇ ಇರುವ ಕೆಲವು ಬಾಲಗಳನ್ನು ಬಳಸಿಕೊಂಡು ನಮ್ಮ ಮೇಲೆಯೇ ಪಿತೂರಿ ಮಾಡಲಾಗುತ್ತಿದೆ. ನಾವು ರಾಜಕಾರಣದಲ್ಲಿ ಒಳ್ಳೆಯ ಹೆಸರು ಪಡೆದಿದ್ದೇವೆ, ಕುಟುಂಬದಲ್ಲೂ ಒಳ್ಳೆಯ ಹೆಸರಿದೆ. ನಾವು ಯಾರ ವಿಷಯಕ್ಕೂ ಹೋಗಲ್ಲ. ಆದರೆ ನಮ್ಮನ್ನು ಕೆಣಕಿದರೆ ಸುಮ್ಮನೆ ಬಿಡೋಲ್ಲ. ನಾನು, ಡಿಕೆಶಿ ಸೇರಿದಂತೆ 11 ಜನರ ಮೇಲೆ ದಾಳಿ ನಡೆಯುತ್ತದೆ ಎಂಬ ಮಾಹಿತಿ ಇದೆ. ಇನ್ನು ಮೂರ್ನಾಲ್ಕು ದಿನದಲ್ಲಿ ದಾಳಿ ನಡೆಯಬಹುದು. ನಾವು ಇವಕ್ಕೆಲ್ಲ ಹೆದರೋಲ್ಲ. ಡಿಕೆಶಿ ಅವರ ಮನೆಯ ಮೇಲೆ ಕಳೆದ ವರ್ಷವೇ ಐಟಿ ದಾಳಿ ನಡೆದಿದ್ದು ನಿಮಗೆ ನೆನಪಿರಬಹುದು. ಇವೆಲ್ಲವೂ ವ್ಯವಸ್ಥಿತ ಕುತಂತ್ರ" - ಡಿ ಕೆ ಸುರೇಶ್

ಬಿಜೆಪಿ ವಿರುದ್ಧ ಕಿಡಿಕಾರಿದ ಡಿಕೆಶಿ
"ಅಧಿಕಾರ ಇದೆ ಎಂದು ಪ್ರಜಾಪ್ರಭುತ್ವದ ಅಂಗಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಅಧಿಕಾರ ಶಾಶ್ವತವಲ್ಲ. ಚಕ್ರ ತಿರುಗುತ್ತದೆ. ದ್ವೇಷದ ರಾಜಕಾರಣಕ್ಕೆ ಇಳಿದರೆ ನಾವೂ ಅದೇ ರೀತಿ ಉತ್ತರಿಸಬೇಕಾಗುತ್ತದೆ. ನಾವು ಹಳ್ಳಿಯಿಂದ ಬಂದು ರಾಜಕಾರಣದಲ್ಲಿ ಒಳ್ಳೆಯ ಹೆಸರು ಮಾಡಿದ್ದೇವೆ. ಜನಸೇವೆ ಮಾಡುತ್ತಿದ್ದೇವೆ. ನಮ್ಮನ್ನು ಈ ರೀತಿ ಬೆದರಿಸಿದರೆ ಇಂಥದಕ್ಕೆಲ್ಲ ನಾವೆಂದಿಗೂ ಜಗ್ಗೋಲ್ಲ"
-ಡಿ ಕೆ ಶಿವಕುಮಾರ್

ಕಾನೂನಾತ್ಮಕ ಹೋರಾಟ ನಡೆಸುತ್ತೇವೆ!
"ಬಿಜೆಪಿ ನಾಯಕರು ದ್ವೇಷದ ರಾಜಕಾರಣ ಮಾಡಿದರೆ ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ನಾವು ಯಾವ ತಪ್ಪನ್ನೂ ಮಾಡಿಲ್ಲ. ಪಕ್ಷದಲ್ಲಾಗಲೀ, ರಾಜ್ಯದ ಜನತೆಯ ಮನಸ್ಸಿನಲ್ಲಾಗಲೀ ನಮ್ಮ ಬಗ್ಗೆ ಗೌರವವಿದೆ. ಅದನ್ನು ಉಳಿಸಿಕೊಳ್ಳುವ ಹಾಗೆಯೇ ನಡೆದುಕೊಳ್ಳುತ್ತಿದ್ದೇವೆ. ಯಾವಾಗಲೂ ಹಾಸಿ ಇದ್ದಷ್ಟೇ ಕಾಲುಚಾಚುತ್ತ ಬಂದವರು ನಾವು. ನಮ್ಮನ್ನು ಕೆಣಕುವ ಯತ್ನ ಮಾಡಬೇಡಿ. ಅಧಿಕಾರ ಇಂದು ಇರುತ್ತದೆ, ನಾಳೆ ಇರೋಲ್ಲ ಅನ್ನೋದು ನೆನಪಿರಲಿ." - ಡಿ ಕೆ ಶಿವಕುಮಾರ್












Click it and Unblock the Notifications