ರೈಲ್ವೆ ಪ್ರಶ್ನೆ ಪತ್ರಿಕೆ ಬಯಲು, ಸಿಬಿಐನಿಂದ ದಾಳಿ
ಬೆಂಗಳೂರು, ಜೂ. 30 : ಸಹಾಯಕ ರೈಲ್ವೆ ಅಧಿಕಾರಿ ನೇಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಬಯಲುಗೊಳಿಸಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ 15 ಜನರನ್ನು ಬಂಧಿಸಿದ್ದಾರೆ. ನಗರದ ಎರಡು ಪ್ರದೇಶಗಳಲ್ಲಿ ನಡೆಸಿದ ದಾಳಿಯ ವೇಳೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಭಾನುವಾರ ಸಹಾಯಕ ರೈಲ್ವೆ ಅಧಿಕಾರಿ ಹುದ್ದೆಗೆ ರೈಲ್ವೆ ನೇಮಕ ಮಂಡಳಿ (ಆರ್ಆರ್ಬಿ) ಪರೀಕ್ಷೆ ನಿಗದಿಪಡಿಸಿತ್ತು. ಬೆಂಗಳೂರಿನಲ್ಲೂ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆಗೆ ಮುನ್ನವೇ ಆರ್.ಟಿ.ನಗರ ಮತ್ತು ದಿಣ್ಣೂರಿನ ಕೆಲವು ವಸತಿ ಸಮುಚ್ಛಯಗಳ ಮೇಲೆ ದಾಳಿ ನಡೆಸಿದ ಸಿಬಿಐ ದೆಹಲಿಯ ಸಿಬಿಐ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಬಯಲುಗೊಳಿಸುವ ಜಾಲವನ್ನು ಭೇದಿಸಿದ್ದಾರೆ.

ಬಂಧಿತ 15 ಆರೋಪಿಗಳಿಂದ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ಕೆಲವು ದಾಖಲೆಗಳು ಹಾಗೂ 1.20 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಪಿಗಳೆಲ್ಲರೂ ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಭಾರತದ ಉದ್ಯೋಗಾಕಾಂಕ್ಷಿಗಳೆಂದು ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. [ಮಳೆಗಾಲದ ಅವಧಿಯ ಕೊಂಕಣ್ ರೈಲ್ವೆ ವೇಳಾಪಟ್ಟಿ]
ಪ್ರಶ್ನೆ ಪತ್ರಿಕೆ ಬಯಲು ಹಗರಣದಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂಬುದು ಸಿಬಿಐ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ ಹಾಜರಾಗುತ್ತಿದ್ದ ಪ್ರತಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ಲಂಚ ಪಡೆದು ಪ್ರಶ್ನೆ ಪತ್ರಿಕೆ ಬಯಲು ಮಾಡಲಾಗಿತ್ತು ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಲಂಚ ಪಡೆದವರು ಉದ್ಯೋಗಾಕಾಂಕ್ಷಿಗಳಿಗೆ ವಸತಿ ಸಮುಚ್ಛಯದಲ್ಲಿಯೇ ನೆಲಸಲು ಅವಕಾಶ ಮಾಡಿಕೊಟ್ಟಿದ್ದರು. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸಿಬಿಐ ಅಧಿಕಾರಿಗಳು ವಿಭಾಗೀಯ ರೈಲ್ವೆ ಅಧಿಕಾರಿ ಶಿವಣ್ಣ ಎಂಬವರ ಮನೆಯ ಮೇಲೂ ದಾಳಿ ನಡೆಸಿ ಶೋಧ ನಡೆಸಿದ್ದಾರೆ.












Click it and Unblock the Notifications