ತಮಿಳುನಾಡಿಗೆ ಕಾವೇರಿ ಒಂದು ರಾಜಕೀಯ ದಾಳ; ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾರ್ಚ್ 22: "ತಮಿಳುನಾಡಿಗೆ ಕಾವೇರಿ ಒಂದು ರಾಜಕೀಯ ದಾಳ. ಸ್ವಾತಂತ್ರ್ಯ ದೊರೆತಾಗಿನಿಂದ ಕಾವೇರಿ ಹೆಸರಿನಲ್ಲಿಯೇ ಅವರು ರಾಜಕಾರಣ ಮಾಡುತ್ತಿದ್ದಾರೆ," ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಮಂಗಳವಾರ ಬೆಳಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, "ಕಾವೇರಿ ಜಲವಿವಾದ ನ್ಯಾಯಮಂಡಳಿ ತೀರ್ಪು ನೀಡಿ ನೀರಿನ ಹಂಚಿಕೆಯಾಗಿದೆ. ನೀರನ್ನು ನೀಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇದೆ. ನಮ್ಮ ರಾಜ್ಯದಲ್ಲಿ ಹುಟ್ಟಿರುವ ಕಾವೇರಿ, ಇಲ್ಲಿ ಬಿದ್ದ ಮಳೆಯ ಆಧಾರದ ಮೇಲೆ ನಾವು ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ. ಇಷ್ಟೆಲ್ಲಾ ಇದ್ದರೂ ತಮಿಳುನಾಡು ತಕರಾರು ಮಾಡುತ್ತಿದ್ದು, ವಿವಿಧ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ," ಎಂದು ಹರಿಹಾಯ್ದರು.
Recommended Video

"ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಮ್ಮ ಪರವಾಗಿ ಆದೇಶ ನೀಡಿದ್ದಾರೆ, ಅದರ ತಮಿಳುನಾಡು ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಸರ್ವ ಪಕ್ಷ ಸಭೆ ನಡೆಸಿ ಒಗ್ಗಟ್ಟಿನಿಂದ ಇದನ್ನು ಎದುರಿಸಲು ತೀರ್ಮಾನ ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಣಯ ಮಾಡಿದ್ದಾರೆ. ಇದಕ್ಕೆ ಯಾವುದೇ ಬೆಲೆ ಇಲ್ಲ ಹಾಗೂ ಕಾನೂನಿನ ಪ್ರಕಾರವೂ ಇಲ್ಲ. ರಾಜಕೀಯ ತಂತ್ರವಷ್ಟೇ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಈ ರೀತಿಯ ಹತ್ತು ಹಲವಾರು ನಿರ್ಣಯಗಳಾಗಿವೆ, ಅದಕ್ಕೆ ಬೆಲೆ ಇಲ್ಲ," ಎಂದು ತಿಳಿಸಿದರು.

ಸರ್ವ ಪಕ್ಷ ಸಭೆಯಲ್ಲಿ ನಿರ್ಣಯಿಸಿದಂತೆ ಡಿಪಿಆರ್ ಪಡೆದು ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆದು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಎಲ್ಲ ಕ್ರಮವನ್ನು ಸರ್ಕಾರ ತೆಗೆದುಗೊಳ್ಳಲಿದೆ ಎಂದು ಹೇಳಿದರು.
ಬೆಳಗಾವಿ ಸಮಸ್ಯೆಗಳ ದಿಕ್ಕು ಬದಲಾಯಿಸಲು ಹೇಳಿಕೆ
ಶಿವಸೇನೆ ನಾಯಕ ಸಂಜಯ ರಾವತ್ ಅವರು ಬೆಳಗಾವಿ ಫೈಲ್ಸ್ ಬರಬೇಕು, ಅಲ್ಲಿಯೂ ಅನೇಕ ಘಟನೆಗಳು ನಡೆದಿವೆ ಎಂದು ಆರೋಪಿಸಿರುವ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಳಗಾವಿ ವಿಷಯದ ಬಗ್ಗೆ ಈಗಾಗಲೇ ತೀರ್ಪು ನೀಡಲಾಗಿದೆ. 1956ರಲ್ಲಿ ರಾಜ್ಯ ಪುನರ್ ವಿಂಗಡಣೆ ಆಯೋಗದ ಅನುಗುಣವಾಗಿ ಆಗಿದೆ ಎಂದರು.

ಕನ್ನಡ ಮಾತನಾಡುವ ಸೊಲ್ಲಾಪುರ, ಅಕ್ಕಲ್ ಕೋಟೆ ಭಾಗಗಳು ಮಹಾರಾಷ್ಟ್ರದಲ್ಲಿ ಉಳಿದಿವೆ. ಈ ರೀತಿ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಬೆಳಗಾವಿ ಹೆಸರಿನಲ್ಲಿ ಅಲ್ಲಿರುವ ಸಮಸ್ಯೆಗಳ ದಿಕ್ಕು ಬದಲಾಯಿಸಲು ಈ ಕೆಲಸವನ್ನು ಮಾತನಾಡುತ್ತಾರೆ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು.












Click it and Unblock the Notifications