ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ ಸಾಧ್ಯತೆ : ಕಾರಣವೇನು?
ಬೆಂಗಳೂರು, ಜನವರಿ 6: ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳಿವೆ.
ಮುಖ್ಯಮಂತ್ರಿಗಳು ವಾಪಸಾದ ಬಳಿಕ ನಡೆಯುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಹುನಿರೀಕ್ಷಿತ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ತಡವಾಗುತ್ತಿರುವುದು ಮೂಲ ಬಿಜೆಪಿಗರು ಹಾಗೂ ವಲಸಿಗರಿಗೆ ಇನ್ನಷ್ಟು ತಲೆನೋವು ಉಂಟು ಮಾಡಿದೆ.
ಒಂದು ವೇಳೆ ಮುಖ್ಯಮಂತ್ರಿಗಳ ವಿದೇಶ ಪ್ರವಾಸಕ್ಕೂ ಮುನ್ನ ತರಾತುರಿಯಲ್ಲಿ ವಿಸ್ತರಣ ಕೈಗೊಂಡಲ್ಲಿ ಅದರಿಂದ ಪಕ್ಷದಲ್ಲಿ ಭಿನ್ನಮತ ಉದ್ಭವಿಸಿದಲ್ಲಿ ಅದನ್ನು ಶಮನಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇಲ್ಲದಿದ್ದರೆ ಕಷ್ಟವಾಗಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ಯಡಿಯೂರಪ್ಪ ವಿದೇಶ ಪ್ರವಾಸ
ಜನವರಿ 21ರಿಂದ ನಾಲ್ಕೈದು ದಿನಗಳ ಕಾಲ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದರಿಂದ ಅದಕ್ಕೂ ಮೊದಲು ಸಂಪುಟ ವಿಸ್ತರಣೆ ಕೈಗೊಂಡರೆ ಉದ್ಭವಿಸಬಹುದಾದ ಅಸಮಾಧಾನ ನಿಯಂತ್ರಿಸುವುದು ಕಷ್ಟವಾಗಬಹುದು ಎನ್ನುವುದು ಪ್ರಮುಖ ವಿಷಯವಾಗಿದೆ.
ಪಕ್ಷದ ವರಿಷ್ಠರೊಂದಿಗೆ ಚರ್ಚೆ
ಮುಖ್ಯಮಂತ್ರಿ ಮುಂದಿನ ವಾರ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿದೇಶ ಪ್ರವಾಸ ಮುಗಿದ ಬಳಿಕ ಸಂಪುಟ ವಿಸ್ತರಣೆ
ಹೇಗಿದ್ದರೂ ವಿಧಾನಮಂಡಲ ಅಧಿವೇಶನ ಫೆಬ್ರವರಿ ತಿಂಗಳಿಗೆ ಮುಂದೂಡಲಾಗಿದೆ. ಹೀಗಿರುವಾಗ ಸಂಕ್ರಾಂತಿ ಮುಗಿದ ಬೆನ್ನಲ್ಲೇ ಸಂಪುಟ ವಿಸ್ತರಣೆ ಕೈಗೊಳ್ಳುವ ಬದಲು ಕೆಲ ದಿನಗಳ ವರೆಗೆ ಕಾದು ಅಂದರೆ ಮುಖ್ಯಮಂತ್ರಿಗಳ ವಿದೇಶ ಪ್ರವಾಸ ಮುಗಿದ ಬಳಿಕ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಆಡಳಿತಾರೂಢ ಬಿಜೆಪಿಯ ಹಲವು ನಾಯಕರು ಹೊರಹಾಕಿದ್ದಾರೆ.
ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಇಲ್ಲ
ಸಂಕ್ರಾಂತಿ ನಂತರ ಈ ತಿಂಗಳ 16 ಅಥವಾ 17ರಂದು ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಬಿಜೆಪಿ ಪಾಳಯದಲ್ಲಿ ಬಿರುಸಿನ ಚರ್ಚೆ ನಡೆದಿತ್ತು. ಹೆಚ್ಚು ವಿಳಂಬ ಮಾಡುವುದು ಬೇಡ ಎಂಬ ಒತ್ತಡವೂ ಕೇಳಿಬಂದಿತ್ತು. ಆದರೆ ಅಧಿವೇಶನ ಇದೇ ತಿಂಗಳಲ್ಲಿ ನಡೆಯುತ್ತಿದ್ದರೆ ಕೇವಲ ಅರ್ಹ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಿ ವಿಸ್ತರಣೆ ಮಾಡುವ ಉದ್ದೇಶವನ್ನು ಯಡಿಯೂರಪ್ಪ ಹೊಂದಿದ್ದರು.
ಇದೀಗ ಅಧಿವೇಶನವೇ ಮುಂದೂಡಲ್ಪಟ್ಟಿರುವುದರಿಂದ 11 ಅರ್ಹ ಶಾಸಕರಿಗೆ ಸಚಿವ ಸ್ಥಾನ ಕೊಟ್ಟ ನಂತರ ಉಳಿಯುವ ಐದು ಸ್ಥಾನಗಳನ್ನು ಯಾವಾಗ ಭರ್ತಿ ಮಾಡುವುದು, ಯಾರಿಗೆಲ್ಲಾ ಸಚಿವ ಸ್ಥಾನ ನೀಡುವುದು ಎಂಬುದನ್ನು ವರಿಷ್ಠರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ.