ಬೆಂಗಳೂರಿನ ಹೊರ ವಲಯದಲ್ಲಿ ಜಲಕ್ಷಾಮ: ಪಾಲಿಕೆ ಮೊರೆ ಹೋದ ಜಲಮಂಡಳಿ
ಬೆಂಗಳೂರು, ಸೆಪ್ಟೆಂಬರ್ 21: ರಾಜ್ಯದಲ್ಲಿ ಕಾವೇರಿ ವಿವಾದ ಕಾವೇರುತ್ತಿರುವ ಹೊತ್ತಲ್ಲೇ ರಾಜ್ಯ ರಾಜಧಾನಿಯ ಜನರಿಗೆ ಶಾಕ್ ಎದುರಾಗಿದೆ. ಬೆಂಗಳೂರಿನ ಹೊರ ವಲಯಗಳಲ್ಲಿರುವ ಜನರಿಗೆ ಜಲಕ್ಷಾಮ ಶುರುವಾಗುವ ಲಕ್ಷಣ ಕಂಡುಬರುತ್ತಿದ್ದು, ನೀರಿನ ಕೊರತೆ ನೀಗಿಸಲು ಜಲಮಂಡಳಿ ಇದೀಗ ಪಾಲಿಕೆ ಮೊರೆಹೋಗಿದೆ.
ರಾಜ್ಯದಲ್ಲಿ ಮಳೆ ಅಭಾವದಿಂದ ಈಗಾಗಲೇ ಹಲವೆಡೆ ಬರದ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಇದರ ಮಧ್ಯೆ ಕಾವೇರಿ ನೀರಿನ ವಿಷಯದಲ್ಲಿ ಪದೇ ಪದೇ ತಮಿಳುನಾಡು,ಕರ್ನಾಟಕದ ಮಧ್ಯೆ ಹಗ್ಗಜಗ್ಗಾಟ ನಡೀತಿದೆ. ಇಂತಹ ಹೊತ್ತಿನಲ್ಲೇ ರಾಜ್ಯ ರಾಜಧಾನಿಯ ಜನರಿಗೂ ಕಾವೇರಿಯ ವಿವಾದದ ಕಾವು ತಟ್ಟಿದೆ.

ಸದ್ಯ ಇಡೀ ಬೆಂಗಳೂರಿಗೆ ನೀರು ಪೂರೈಕೆ ಮಾಡುವ ಜಲಮಂಡಳಿ ಇದೀಗ 110 ಗ್ರಾಮಗಳ ದಾಹ ತೀರಿಸಲು ಪಾಲಿಕೆ ಮೊರೆ ಹೋಗಿದೆ. ಸುಮಾರು 20 ಕೋಟಿ ವೆಚ್ಚದಲ್ಲಿ ಬೆಂಗಳೂರಿನ 5 ಹೊರವಲಯಗಳಲ್ಲಿ ಕಾವೇರಿ ನೀರು ಸರಬರಾಜಿಗೆ ಪ್ಲಾನ್ ಮಾಡಿತ್ತು. ಅದರಲ್ಲಿ ಒಂದಷ್ಟು ಕಡೆ ಕೆಲಸ ಮುಗಿಸಿ ಜಲಮಂಡಳಿಗೆ ಹಸ್ತಾಂತರ ಮಾಡಿತ್ತು. ಆದರೆ ಇದೀಗ ಜಲಮಂಡಳಿ ಕಾವೇರಿ ನೀರು ಸಿಗುವವರೆಗೂ ಟ್ಯಾಂಕರ್ ಅಥವಾ ಬೋರ್ ವೆಲ್ ಮೂಲಕ ನೀರು ಪೂರೈಸುವಂತೆ ಪಾಲಿಕೆ ಮೊರೆಹೋಗಿದೆ.
ಇನ್ನು ಬಿಬಿಎಂಪಿ ವ್ಯಾಪ್ತಿಗೆ ಬರುವ 110 ಹಳ್ಳಿಗಳಿಗೆ ನೀರು ಪೂರೈಕೆಗೆ ಒಪ್ಪಿರುವ ಪಾಲಿಕೆ, ಆಯಾ ವಲಯಗಳ ಝೋನಲ್ ಕಮಿಷನರ್ ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಜವಾಬ್ದಾರಿ ವಹಿಸಿದೆ. ಅಲ್ಲದೇ ಇರುವ ಬೋರ್ವೆಲ್ ಬಳಸಿಕೊಂಡು ನೀರು ನೀಡಲು ಸೂಚನೆ ಕೊಟ್ಟಿದೆ.
ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಬಾರದ ಮಳೆರಾಯನಿಂದ ರಾಜ್ಯದ ಜಲಕ್ಷಾಮದ ಭೀತಿ ಎದುರಾಗಿದ್ದು, ಸದ್ಯ ಸಿಲಿಕಾನ್ ಸಿಟಿಯ ಕೆಲ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಕೂಡ ವಿಳಂಬವಾಗುತ್ತಿದೆ. ಸದ್ಯ ಇರುವ ಅಲ್ಪಸ್ವಲ್ಪ ನೀರನ್ನಾದರೂ ಉಳಿಸಿಕೊಳ್ಳದಿದ್ದರೆ ಬೆಂಗಳೂರು ನಗರದ ಇತರೆ ಏರಿಯಾಗಳಿಗೂ ನೀರಿನ ಅಭಾವ ತಲೆದೂರುವ ಸಾಧ್ಯತೆ ಬಂದರೂ ಬರಬಹುದು ಎನ್ನುವ ಚರ್ಚೆ ಆರಂಭವಾಗಿದೆ.












Click it and Unblock the Notifications