Get Updates
Get notified of breaking news, exclusive insights, and must-see stories!

ಜೂನ್ 3ಕ್ಕೆ ಬೆಂಗಳೂರು ಜಲಮಂಡಳಿ ನೌಕರರ ಸಂಘದ ಪ್ರತಿಭಟನೆ

ಬೆಂಗಳೂರು, ಏಪ್ರಿಲ್ 30: ಬೆಂಗಳೂರು ಜಲಮಂಡಳಿಯ ಆಡಳಿತ ವರ್ಗವು ನೌಕರರ ಬೇಡಿಕೆಗಳನ್ನು ಈಡೇರಿಸಲು ತಡ ಮಾಡುತ್ತಿರುವುದನ್ನು ವಿರೋಧಿಸಿ ಜೂನ್ ತಿಂಗಳ 3ನೇ ತಾರೀಕು ಮಂಡಳಿಯ ನೌಕರರ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಜೂನ್ 3ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಕಾವೇರಿ ಭವನದ ಮುಂದೆ 'ಕಪ್ಪು ಪಟ್ಟಿ' ಧರಿಸಿ, ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಜಲಮಂಡಳಿ ನೌಕರರ ಸಂಘಟನೆಗಳ ಬೇಡಿಕೆಗಳು ಇಂತಿವೆ.

* ಆಡಳಿತ ಮಂಡಳಿ ಸಭೆಯಲ್ಲಿ ಈಗಾಗಲೇ ಕೈಗೊಂಡಿರುವ ವೇತನ ಪರಿಷ್ಕರಣೆಯನ್ನು ಶೀಘ್ರವಾಗಿ ಜಾರಿ ಮಾಡಬೇಕು.

* ಈಗಾಗಲೇ ಸೂಚಿಸಿರುವಂತೆ ಪಿಂಚಣಿ ನಿಧಿ ಯೋಜನೆ ಆರಂಭಿಸಬೇಕು.

BWSSB employees association protest on June 3rd

* ಜಲ ಮಂಡಳಿಯಲ್ಲಿ ಸದ್ಯಕ್ಕೆ ಖಾಲಿ ಇರುವ ಬಿ, ಸಿ ಮತ್ತು ಡಿ ದರ್ಜೆಯ ಸಾವಿರದೈನೂರಕ್ಕೂ ಹೆಚ್ಚು ಮತ್ತು ಇನ್ನೆರಡು ವರ್ಷಗಳಲ್ಲಿ ವಯೋ ನಿವೃತ್ತಿ ಆಗುವ ಐನೂರಕ್ಕೂ ಹೆಚ್ಚು ಹುದ್ದೆಯನ್ನು ಪರಿಗಣಿಸಿ ಶೀಘ್ರ ನೇಮಕಾತಿ ಮಾಡಬೇಕು.

* ಹೆಲ್ಪರ್ಸ್, ಸ್ಯಾನಿಟರಿ ವರ್ಕರ್ಸ್, ಚಾಲಕ ಹುದ್ದೆಗಳ ಭರ್ತಿಗೆ ಪ್ರಸ್ತಾವ ಸಲ್ಲಿಸಿದ್ದು, ನೇಮಕಾತಿಗೆ ಶೀಘ್ರ ಅನುಮೋದನೆ ಪಡೆಯಬೇಕು.

* ಆಡಳಿತ ವರ್ಗ ಹಾಗೂ ನೌಕರರ ಸಂಘದ ಮಧ್ಯೆ ಆಅಗಿರುವ ಒಪ್ಪಂದದ ಪ್ರಕಾರ: ಏಳೆಂಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರುವ 'ಡಿ' ವೃಂದದ ನೌಕರರಿಗೆ 'ಸಿ' ವೃಂದದ ವೇತನ ಶ್ರೇಣಿಯನ್ನು ವಿಸ್ತರಿಸುವ ಜತೆಗೆ ಮಾಪಕ ಓದುಗ ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು.

* ಕಿರಿಯ ಎಂಜಿನಿಯರ್ ಗಳ ಕೊರತೆಯಿಂದ ಅರೇಳು ವರ್ಷಗಳಿಂದ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಪ್ಪತ್ತೆರಡು ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ನೌಕರರಿಗೆ ಕಿರಿಯ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡಲು ಸರಕಾರದಿಂದ ಅನುಮೋದನೆ ಪಡೆಯಬೇಕು. ಸಿಬ್ಬಂದಿ ನಿಯಮಗಳ ಅನ್ವಯ ಮಹಿಳಾ ಮಾಪನ ಓದುಗರಿಗೆ ವೃಂದ ಬದಲಾವಣೆಗೆ ಅವಕಾಶ ನೀಡಬೇಕು.

* ವಿಶಾಲವಾದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಡಳಿಯ ಅಗತ್ಯಕ್ಕೆ ತಕ್ಕಂತೆ ಪರಿಷ್ಕೃತ ಸಾವಿರದ ಏಳುನೂರು ಹೆಚ್ಚುವರಿ ಹುದ್ದೆ ಮಂಜೂರಾತಿಗೆ ಮಂಡಳಿ ಈಗಾಗಲೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಇದಕ್ಕೆ ಶೀಘ್ರ ಅನುಮೋದನೆ ಪಡೆದು, ನೇಮಕಾತಿ ನಡೆಸಬೇಕು.

* ಹದಿನೈದಿಪ್ಪತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗಾಗಿ ವಿಶೇಷ ನೇಮಕಾತಿ ನಿಯಮಾವಳಿ ರೂಪಿಸಿ, ಅವರ ಸೇವೆ ಕಾಯಂಗೊಳಿಸಬೇಕು. ಇಲ್ಲದಿದ್ದರೆ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ ಅನ್ವಯದಂತೆ ಹೊರಗುತ್ತಿಗೆ ನೌಕರರನ್ನು ದಿನಗೂಲಿ ನೌಕರರಾಗಿ ಪರಿವರ್ತಿಸಿ, ಉದ್ಯೋಗ ಭದ್ರತೆ ನೀಡಬೇಕು.

* ಸಿಬ್ಬಂದಿ ಕೊರತೆ ನೆಪದಲ್ಲಿ ಮಂಡಳಿಯ ಕೆಲವು ವಿಭಾಗಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾಸಗಿ ಕಂಪೆನಿಗಳಿಗೆ ದೀರ್ಘಕಾಲಿಕ ಹೊರಗುತ್ತಿಗೆ ನೀಡುವುದನ್ನು ರದ್ದುಪಡಿಸಬೇಕು. ಮಂಡಳಿಯಿಂದಲೇ ಅಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಎಂಜಿನಿಯರ್ ಗಳು ಹಾಗೂ ಕುಶಲ ಕರ್ಮಿಗಳನ್ನು ನೇಮಿಸಿಕೊಳ್ಳಬೇಕು.

* ಮಂಡಳಿಗೆ ತನ್ನದೇ ವೇತನ ಶ್ರೇಣಿ ಹಾಗೂ ಪಿಂಚಣಿ ಯೋಜನೆ ಇದ್ದು, ಏಪ್ರಿಲ್ 2006ರ ನಂತರ ನೇಮಕವಾದವರಿಗೂ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು.

* ಕರ್ನಾಟಕ ಹೈ ಕೋರ್ಟ್ ಆದೇಶದ ರಾಜ್ಯ ಸರಕಾರವು ತನ್ನ ಕಾರ್ಯನಿರತ ನೌಕರರಿಗೆ ವಿಸ್ತರಿಸಿರುವ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯವನ್ನು ಮಂಡಳಿಯ ನಿವೃತ್ತ ನೌಕರರಿಗೂ ವಿಸ್ತರಿಸಬೇಕು. ಇಲ್ಲದಿದ್ದರೆ ಕರ್ನಾಟಕ ವಿದ್ಯುತ್ ನಿಗಮದ ನಿವೃತ್ತ ನೌಕರರಿಗೆ ವೈದ್ಯಕೀಯ ಸೌಲಭ್ಯಗಳನ್ನು ನೀಡಿರುವಂತೆ ಮಂಡಳಿಯಲ್ಲಿಯೂ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ವಿಸ್ತರಿಸಬೇಕು.

* ಜಲ ಮಂಡಳಿಯಲ್ಲಿ ಈಗ ನೌಕರರ ಮೇಲೆ ಒತ್ತಡ ಹೆಚ್ಚಿದ್ದು, ನೌಕರರು ತಮ್ಮ ಕರ್ತವ್ಯದ ವೇಳೆ ಮಾಡುವ ಸಣ್ಣ-ಪುಟ್ಟ ತಪ್ಪುಗಳಿಗೆ ದುಬಾರಿ ಪ್ರಮಾಣದ ದಂಡನೆಯನ್ನು ವಿಧಿಸುವುದು ನಿಲ್ಲಿಸಬೇಕು.

* ಜಲ ಮಂಡಳಿಯ ಆಡಳಿತ ವರ್ಗವು ಈಗಾಗಲೇ ಒಪ್ಪಿಗೆ ನೀಡಿರುವಂತೆ ನೌಕರರನ್ನು ಎ, ಬಿ, ಸಿ ಮತ್ತು ಡಿ ಎಂಬ ವಿಂಗಡಣೆ ಮಾಡದೆ ಚಾಂದ್ರಮಾನ ಯುಗಾದಿ ಹಬ್ಬಕ್ಕೆ ಒಂದು ತಿಂಗಳ ವೇತನವನ್ನು ವಿಶೇಷ ಭತ್ಯೆಯಾಗಿ ನೀಡಬೇಕು. ಇದನ್ನೇ ಹೊರಗುತ್ತಿಗೆ ನೌಕರರಿಗೂ ಅನ್ವಯಿಸಿ, ವಿತರಿಸಬೇಕು.

* ಬೆಂಗಳೂರು ಜಲಮಂಡಳಿಯ ಆಡಳಿತ ಮಂಡಳಿಗೆ ಸರಕಾರ ನೇಮಕ ಮಾಡುವ ಅಧಿಕಾರೇತರ (ನಾನ್ ಅಫಿಶಿಯಲ್) ಸದಸ್ಯರ ಸಂಖ್ಯೆಯನ್ನು ಎರಡಕ್ಕೆ ಸೀಮಿತಗೊಳಿಸಬೇಕು.

ಹೀಗೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಲು ನಿರ್ಧಾರ ಮಾಡಲಾಗಿದೆ. ನೌಕರರ ಸಂಘದ ಅಧ್ಯಕ್ಷರಾದ ರುದ್ರೇಗೌಡ ಅವರು ಒನ್ ಇಂಡಿಯಾ ಕನ್ನಡದ ಜತೆ ಮಾತನಾಡಿ, ಈಗ ನಾವು ಮುಂದಿದುತ್ತಿರುವ ಬೇಡಿಕೆಗಳು ನ್ಯಾಯಯುತವಾಗಿವೆ. ಇವುಗಳನ್ನು ಪರಾಂಬರಿಸಿ, ಶೀಘ್ರವಾಗಿ ಸ್ಪಂದಿಸಬೇಕು ಎಂದು ಹೇಳಿದರು.

ಬೆಂಗಳೂರು ಜಲಮಂಡಳಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಗೋವಿಂದರಾಜು, ಬೆಂಗಳೂರು ಜಲಮಂಡಳಿ ಸ್ಯಾನಿಟರಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಗಂಗಾದ್ರಿ, ಬೆಂಗಳೂರು ಜಲಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ನರಸಯ್ಯ ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+