ಬೆಂಗಳೂರು : ವಿದ್ಯುತ್ ತಂತಿ ಸ್ಪರ್ಶಿಸಿದ ಬಾಲಕನ ಸ್ಥಿತಿ ಗಂಭೀರ
ಬೆಂಗಳೂರು, ಮೇ 17 : ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬಿಬಿಎಂಪಿ ಮೇಯರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿಯ ಲಿಖಿತ್ (14) ಎಂಬ ಬಾಲಕ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಂಡಿದ್ದಾನೆ. ಬಾಲಕನ ದೇಹ ಶೇ 40ರಷ್ಟು ಸುಟ್ಟು ಹೋಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಗುರುವಾರ ಮಧ್ಯಾಹ್ನ ಸ್ನೇಹಿತರ ಜೊತೆ ಕ್ರಿಕೆಟ್ ಆಡುವಾಗ ಬಾಲ್ ಕಟ್ಟಡದ ಮೊದಲ ಮಹಡಿಗೆ ಹೋಗಿತ್ತು. ಅದನ್ನು ತರಲು ಹೋಗಿದ್ದ ಲಿಖಿತ್ ವಿದ್ಯುತ್ ತಂತಿ ತುಳಿದು ಕೆಳಗೆ ಬಿದ್ದಿದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮತ್ತಿಕೆರೆಯ ರಮಾದೇವಿ ಹಾಗೂ ಅಂಬರೀಶ್ ದಂಪತಿಗಳ ಒಬ್ಬನೇ ಪುತ್ರ ಲಿಖಿತ್ 9ನೇ ತರಗತಿ ಓದುತ್ತಿದ್ದನು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಅವರು ಭೇಟಿ ನೀಡಿದ ಆರೋಗ್ಯ ವಿಚಾರಿಸಿದರು.
ಕೇಬಲ್ ವೈರ್ ಜೊತೆ ವಿದ್ಯುತ್ ತಂತಿ ಸಹ ತುಂಡಾಗಿ ಕೆಳಗೆ ಬಿದ್ದಿತ್ತು. ಇದನ್ನು ಗಮನಿಸದ ಲಿಖಿತ್ ಅದನ್ನು ತುಳಿದು ಅವಘಡ ಸಂಭವಿಸಿದೆ. ಜನರು ಪಾಲಿಕೆ ಮತ್ತು ಬೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಿಂದಿನ ಘಟನೆಗಳು
* ಎಲ್.ಆರ್.ಬಂಡೆ ಬಳಿ ಆಟವಾಡುತ್ತಿದ್ದ ಬಾಲಕ ವಿಕ್ರಂ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದ
* ಏ.26ರಂದು ಮಹಾಲಕ್ಷ್ಮೀ ಲೇಔಟ್ನಲ್ಲಿ 9 ವರ್ಷದ ಸಾಯಿ ಚರಣ್ ವಿದ್ಯುತ್ ತಂತಿ ತುಳಿದು ಗಾಯಗೊಂಡಿದ್ದ.












Click it and Unblock the Notifications