Bommasandra-Hosur Metro Project: ಹೊಸೂರಿಗೆ ಮೆಟ್ರೋ ವಿಸ್ತರಣೆಗೆ ಕರ್ನಾಟಕದಿಂದ ವಿರೋಧ?
ಬೆಂಗಳೂರು, ಆಗಸ್ಟ್ 30: ದಕ್ಷಿಣ ಭಾರತದ ಎರಡು ರಾಜ್ಯಗಳ ಮಧ್ಯೆ ಮೆಟ್ರೋ ಸಂಪರ್ಕ ಸಾಧ್ಯವಾಗುವ ನಿರೀಕ್ಷೆ ಇತ್ತು. ಈ ಸಂಬಂಧ ಚೆನ್ನೈ ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (CMRL) ಬಹುಕೋಟಿ ವೆಚ್ಚದ ಬೊಮ್ಮಸಂದ್ರ-ಹೊಸೂರು ಮೆಟ್ರೋ ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ಬೆಂಗಳೂರು ನಮ್ಮ ಮೆಟ್ರೋ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಹಲವು ಕಾರಣಾಂತರಗಳಿಂದ ಈ ಯೋಜನೆಗೆ ಕರ್ನಾಟಕದಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BRMCL) ಈಗಾಗಲೇ ಬೆಂಗಳೂರಿನ ಆರ್ವಿ ರಸ್ತೆ ಯಿಂದ ಬೊಮ್ಮಸಂದ್ರವರೆಗೆ ಮೆಟ್ರೋ ಹಳದಿ ಮಾರ್ಗ ನಿರ್ಮಿಸಿದೆ. ಇದೀಗ ಇದೇ ಬೊಮ್ಮಸಂದ್ರದಿಂದ ಹೊಸೂರುವರೆಗೆ ಮೆಟ್ರೋ ವಿಸ್ತರಣೆಗೆ ಚೆನ್ನೈ ಮೆಟ್ರೋ ಆಸಕ್ತಿ ವಹಿಸಿದೆ. ಯೋಜನೆ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿ 23ಕಿ.ಮೀ ಉದ್ದದ ಮಾರ್ಗ ತಯಾರಿಸಲು 6,900 ಕೋಟಿ ರೂ.ಬೇಕಾಗಬಹುದು ಎಂದು ತಿಳಿಸಿದೆ.

ತಮಿಳುನಾಡಿನ ಹೊಸೂರು ವರೆಗೆ ಮೆಟ್ರೋ ವಿಸ್ತರಣೆ ಮಾಡಿದರೆ ಬೆಂಗಳೂರು ಹಾಗೂ ಹೊಸೂರು ಭಾಗದ ಜನರಿಗೆ ಅಲ್ಲದೇ ಎರಡು ರಾಜ್ಯಗಳ ಜನರಿಗೆ ಅನುಕೂಲವಾಗುವ ಬಗ್ಗೆ ಚೆನ್ನೈ ಮೆಟ್ರೋ ಅಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (BRMCL) ಒಪ್ಪಿ ನಿರ್ಮಾಣಕ್ಕೆ ಮನಸ್ಸು ಮಾಡಿದ್ದಾರೆ. ಆದರೆ ಯೋಜನೆ ಡಿಪಿಆರ್ ಹಂತದಲ್ಲಿಯೇ ಇದಕ್ಕೆ ವಿರೋಧ ವ್ಯಕ್ತವಾಗುವ ನಿರೀಕ್ಷೆ ಇದೆ.
ಕರ್ನಾಟಕ ಮೆಟ್ರೋ ಯೋಜನೆ ವಿರೋಧಿಸಲು ಕಾರಣಗಳು?
ಏಕೆಂದರೆ ಈಗಾಗಲೇ ತಮಿಳುನಾಡು ಸರ್ಕಾರ ಹೊಸೂರು ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಘೋಷಿಸಿದೆ. ಅಲ್ಲದೇ ಮೆಟ್ರೋ ಮೇಲೆ ಅವಲಂಬಿತರಾಗಿರುವ ದಕ್ಷಿಣ ಬೆಂಗಳೂರಿನ ಜನರನ್ನು ತಮಿಳುನಾಡು ಆಕರ್ಷಿಸುವ ನಿರೀಕ್ಷೆ ಇದೆ. ಬೆಂಗಳೂರಿನ ವ್ಯಾಪಾರ ಹಿತಾಸಕ್ತಿಗೂ ಹೊಸೂರು ಪ್ರತಿಸ್ಪರ್ಧಿ ಆದರೆ ಭವಿಷ್ಯದಲ್ಲಿ ಆರ್ಥಿಕ ತೊಂದರೆ ಆಗಬಹುದು. ಇಂತಹ ಒಂದಷ್ಟು ಸಾರಿಗೆ ಸಂಪರ್ಕ, ಆರ್ಥಿಕತೆ ಕಾರಣಗಳು ಹಾಗೂ ದೂರದೃಷ್ಟಿ ಆಲೋಚನೆಯಿಂದ ಕರ್ನಾಟಕ ಈ ಯೋಜನೆಯನ್ನು ವಿರೋಧಿಸಬಹುದು ಎಂದು 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಸದ್ಯ ಯೋಜನೆಗೆ ನಮ್ಮ ಮೆಟ್ರೋ ಅಧಿಕಾರಿಗಳು ನೀಡಿದ ಒಪ್ಪಿಗೆ ಹಿಂಪಡೆಯುವ ಸಾಧ್ಯತೆ. ಈ ಯೋಜನೆಯನ್ನು ಕೈ ಬಿಟ್ಟು ಈ ಮೊದಲೇ ಉದ್ದೇಶಿಸಿದಂತೆ ಬೊಮ್ಮಸಂದ್ರವರೆಗೆ ಮಾತ್ರ ಮೆಟ್ರೋ ಮಾರ್ಗ ಇರಲಿದೆ.

ಯೋಜನೆಯ ಸಂಪೂರ್ಣ ಮಾಹಿತಿ
* 6,900 ಕೋಟಿ ರೂ. ವೆಚ್ಚದ ಬೊಮ್ಮಸಂದ್ರ-ಹೊಸೂರು ಮೆಟ್ರೊ ಯೋಜನೆ ಇದಾಗಿದೆ.
* ಒಟ್ಟು 23 ಕಿಮೀ ಎತ್ತರದ ಮೆಟ್ರೋ ಕಾರಿಡಾರ್ ನಿರ್ಮಿಸಲು ಯೋಜಿಸಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ 12 ಕಿಮೀ ಮತ್ತು ತಮಿಳುನಾಡಿನ ವ್ಯಾಪ್ತಿಗೆ 11 ಕಿ.ಮೀ. ಮಾರ್ಗ ನಿರ್ಮಾಣಗೊಳ್ಳಲಿದೆ.
* ಈ ಮೆಟ್ರೋ ಮಾರ್ಗದಲ್ಲಿ ಕರ್ನಾಟಕದಲ್ಲಿ ಐದು ಮೆಟ್ರೋ ನಿಲ್ದಾಣ ಮತ್ತು ತಮಿಳುನಾಡಿನಲ್ಲಿ ಏಳು ನಿಲ್ದಾಣ ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿದೆ.
* ಯೋಜನೆ ಸಂಬಂಧ ಚೆನ್ನೈ ಮೆಟ್ರೋ ಅಧಿಕಾರಿಗಳು ಯೋಜನೆ ಕಾರ್ಯಸಾಧ್ಯತೆ ವರದಿ ಸಹಿತ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಅಧಿಕಾರಿಗಳನ್ನು ಭೇಟಿ ಮಾಡಿ, ಸಲ್ಲಿಸಿದ್ದಾರೆ.
* ನಮ್ಮ ಮೆಟ್ರೋ ಆರ್ವಿರಸ್ತೆ-ಬೊಮ್ಮಸಂದ್ರದ ಹಳದಿ ಮಾರ್ಗ ಇದೇ ಡಿಸೆಂಬರ್ಗೆ ಮುಕ್ತವಾಗಲಿದೆ. ಈ ಹಳಿದ ಮಾರ್ಗವು ಸಿಲ್ಕ್ಬೋರ್ಡ್ ನಲ್ಲಿ ನೀಲಿ ಮಾರ್ಗವನ್ನು (ಸೆಂಟ್ರಲ್ ಸಿಲ್ಕಬೋರ್ಡ್-ಕೆಆರ್ ಪುರಂ-ಏರ್ಪೋರ್ಟ್ ಮಾರ್ಗ) ಸಂಧಿಸಲಿದೆ.












Click it and Unblock the Notifications