''ಯುವ ಕಾರ್ಯಕರ್ತರಿಗೆ ಯಡಿಯೂರಪ್ಪ ಬೆಲೆ ಕೊಡುತ್ತಿಲ್ಲವೇಕೆ?"
ಬೆಂಗಳೂರು, ಜನವರಿ 13: ಯಡಿಯೂರಪ್ಪ ನೇತೃತ್ವ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ/ಪುನಾರಚನೆಗೆ ಮುಹೂರ್ತ ನಿಗದಿಯಾಗಿದ್ದು, ಬುಧವಾರ ಪ್ರಮಾಣವಚನ ಸ್ವೀಕರಿಸಲು ಏಳು ಮಂದಿ ಶಾಸಕರು ಸಜ್ಜಾಗುತ್ತಿದ್ದಾರೆ.
ಈ ನಡುವೆ ಸಚಿವರಾಗಲು ಆಯ್ಕೆಯಾಗಿರುವ ಶಾಸಕರ ಪಟ್ಟಿಗಳು ಮಾಧ್ಯಮಗಳಲ್ಲಿ ಓಡಾಡುತ್ತಿರುವ ವೇಳೆಗೆ ಅಧಿಕೃತವಾಗಿ ಪಟ್ಟಿಯನ್ನು ಖುದ್ದು ಸಿಎಂ ಯಡಿಯೂರಪ್ಪ ಅವರೇ ಸುದ್ದಿಗಾರರ ಮುಂದೆ ಓದಿ ಹೇಳಿದ್ದು ಈ ದಿನದ ವಿಶೇಷ. ಸಹಜವಾಗಿ ಈ ಪಟ್ಟಿ ಹೊರ ಬರುತ್ತಿದ್ದಂತೆ ಸಚಿವಸ್ಥಾನ ಸಿಗದ ಹಿನ್ನೆಲೆ ಹಲವಾರು ಶಾಸಕರಲ್ಲಿ ಅಸಮಾಧಾನದ ಹೊಗೆ ಎದ್ದು ಕಾಣಿಸಿದೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅಸಮಾಧಾನ:
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯುವ ಕಾರ್ಯಕರ್ತರನ್ನು ಕಡೆಗಣಿಸಿರುವುದನ್ನು ಖಂಡಿಸಿ, ಅಸಮಾಧಾನ ವ್ಯಕ್ತಪಡಿಸಿರುವ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಟ್ವೀಟ್ ಮಾಡಿದ್ದಾರೆ
''ರೀ ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯ ಮಾನದಂಡವೇನು? ನಿಮಗೆ ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೇ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ರೀ ಎಂದು ಕನ್ನಡಿಗರು ಬಳಸುವ ಸಂಬೋಧನೆ ಬಳಸಿರುವ ರೆಡ್ಡಿ ಅವರು ಅನಂತಕುಮಾರ್ ಅವರಿಗೆ ಜಿ ಎಂದು ಉತ್ತರ ಭಾರತೀಯರು ಬಳಸುವ ಗೌರವ ಸೂಚಕ ಅಕ್ಷರ ಹಾಕಿರುವುದು ಎದ್ದು ಕಾಣುತ್ತಿದೆ.












Click it and Unblock the Notifications