ಬೆಂಗಳೂರು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ, ಬರ್ತೀರಾ?
ಬೆಂಗಳೂರು, ಜ. 13: ನಮ್ಮ ವ್ಯವಸ್ಥೆಯಲ್ಲಿರುವ ಅಸಂಖ್ಯಾತ ಲೋಪದೋಷಗಳನ್ನು ದೂರುತ್ತ ಕುಳಿತರೆ ಪ್ರಯೋಜನ ಇಲ್ಲ. ಬೆಂಗಳೂರು ಮಹಾನಗರದ ಓರೆಕೋರೆಗಳನ್ನು ಸರಿಪಡಿಸಲು ನನ್ನ ಪಾತ್ರ ಏನು, ನಾನೇನು ಮಾಡಬಲ್ಲೆ ಎನ್ನುವುದು ಮುಖ್ಯ. ಸುಮ್ನೆ ಬೆಂಗಳೂರನ್ನು ಬಯ್ದರೆ ಏನು ಬಂತು ಭಾಗ್ಯ?
ಮುಖ್ಯವಾಗಿ ಬೆಂಗಳೂರು ಕೊಳೆತು ನಾರುತ್ತಿದೆ. ಅಂದರೆ, ಸಕಾಲಕ್ಕೆ ವಿಲೇವಾರಿಯಾಗದ ಕಸ ಮಾತ್ರವಲ್ಲ, ಹೆಜ್ಜೆಹೆಜ್ಜೆಗೂ ನಾಗರಿಕರಿಗೆ ತೊಂದರೆ ಉಂಟುಮಾಡುತ್ತಿರುವ ತಾಪತ್ರಯಗಳು ಬೆಟ್ಟದಷ್ಟಿವೆ. ಅವುಗಳನ್ನು ನಾವು ಮೆಟ್ಟಿ ನಿಲ್ಲಬೇಕು ಎಂದು ನಂಬಿದವರಲ್ಲಿ ಪ್ರೊ. ಎಂ. ವಿ. ರಾಜೀವ್ ಗೌಡ ಒಬ್ಬರು.
ಅವರು ಹುಟ್ಟುಹಾಕಿದ ಸಾಮಾಜಿಕ ಸಂವೇದನೆಯ ಒಂದು ಪ್ರಮುಖ ಅಂಗ 'ಬೆಂಗಳೂರು ನೀಡ್ಸ್ ಯು'. ಈ ಸಂಸ್ಥೆಯ ಮೂಲಕ ಅವರು ನಗರದ ಅನೇಕ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು ಹಾಗೂ ಅವುಗಳಿಗೆ ಪರಿಹಾರ ರೂಪಿಸಲು ಶ್ರಮಿಸುತ್ತಿದ್ದಾರೆ. [ರಾಜೀವ್ ಗೌಡ ಯಾರು?]
ನಗರದ ಪ್ರತಿಯೊಬ್ಬರನ್ನೂ ಒಳಗೊಳ್ಳುವ ವಿಶಾಲ ಮನೋಭಾವದ ನಾಗರಿಕ ಗುಂಪುಗಳ ಮೂಲಕ ಜಡತ್ವಕ್ಕೆ ಒಗ್ಗಿಕೊಂಡಿರುವ ನಾಗರಿಕ ಸೇವಾಸಂಸ್ಥೆಗಳನ್ನು ಬಡಿದೆಬ್ಬಿಸುವುದು ಹೇಗೆ ಮತ್ತು ಆ ಸಂಸ್ಥೆಗಳ ಜತೆ ಒಡನಾಟ ಬೆಳೆಸಿಕೊಳ್ಳುತ್ತಲೇ ಬೆಂಗಳೂರನ್ನು ಸಮಸ್ಯೆ ಮುಕ್ತ ಮಾಡುವುದು ಹೇಗೆ ಎನ್ನುವುದೇ ಬೆಂಗಳೂರು ನೀಡ್ಸ್ ಯು ಸಂಸ್ಥೆಯ ಧ್ಯೇಯ ಮತ್ತು ಉದ್ದೇಶ.
ಕಳೆದ ವರ್ಷ ರಾಜೀವ್ ಗೌಡ ಅವರು ಬೆಂಗಳೂರಿಗರಿಗಾಗಿ ಎರಡು ಪ್ರಮುಖ ಚಳವಳಿಗಳನ್ನು ಹಮ್ಮಿಕೊಂಡಿದ್ದರು. ಸಿವಿಕ್ ಆಕ್ಷನ್ ಮತ್ತು ಪೊಲಿಟಿಕಲ್ ಆಕ್ಷನ್. ಯುವಕ ಯುವತಿಯರ ಪುಟ್ಟ ಸೇನೆ ಕಟ್ಟಿಕೊಂಡು ನಗರದ ನಾನಾ ಬಡಾವಣೆಗಳಲ್ಲಿ ಕಸ ಎತ್ತುವುದು ಮತ್ತು ಪ್ರದೇಶವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದು ಹಾಗೂ ರಾಜಕೀಯ ಕ್ಷೇತ್ರದ ಮೂಲಕ ಪ್ರಜೆಗಳಿಗೆ ನಿಜಕ್ಕೂ ಸಿಗುವ ಫಲಗಳೇನು ಎಂಬ ಬಗ್ಗೆ ಶಿಬಿರಗಳನ್ನು ನಡೆಸಿದ್ದು ನಿಮಗೆ ನೆನಪಿರಬಹುದು.
ಈ ವರ್ಷ ರಾಜೀವ್ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ನಗರ ಜಾಗೃತಿಗಾಗಿ ಯುವ ತಂಡಗಳಿಂದ ಬೆಂಗಳೂರಿನ ಸಮಸ್ಯೆಗಳ ಅಧ್ಯಯನ ಕೈಗೊಳ್ಳುವುದು ಉದ್ದೇಶ. ಯುವಕ ಯುವತಿಯರನ್ನು, ಮುಖ್ಯವಾಗಿ ವಿದ್ಯಾರ್ಥಿಗಳನ್ನು ಮೂರು ವಾರಗಳ ಶಿಬಿರದ ಮೂಲಕ ಸಜ್ಜುಗೊಳಿಸುವುದು. ಈ ಶಿಬಿರ ಭಾನುವಾರ ಬೆಂಗಳೂರಿನಲ್ಲಿ ಚಾಲನೆಗೊಂಡಿತು. ಭಾನುವಾರ ರಾಷ್ಟ್ರೀಯ ಯುವ ದಿನಾಚರಣೆಯ ದಿನವೇ ಈ ಶಿಬಿರಕ್ಕೆ ಚಾಲನೆ ದೊರೆತದ್ದು ಅರ್ಥಪೂರ್ಣವಾಗಿತ್ತು.
ನಗರದ ನಾನಾ ಇಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 100 ವಿದ್ಯಾರ್ಥಿಗಳು ಈ ಶಿಬಿರಕ್ಕೆ ನೊಂದಾಯಿಸಿಕೊಂಡಿದ್ದಾರೆ. ಜನವರಿಯಲ್ಲಿ ಕಾಲೇಜುಗಳಿಗೆ ರಜಾ ಇರುತ್ತದೆ. ಈ ಸಂದರ್ಭವನ್ನು ಉಪಯೋಗಿಸಿಕೊಳ್ಳುವುದಕ್ಕೆ ಯುವ ಜನತೆ ಸ್ವಪ್ರೇರಣೆಯಿಂದ ಮುಂದಾಗಿದ್ದಾರೆ. ಶಿಬಿರದಲ್ಲಿ ಉದ್ಯೋಗಿಗಳೂ ಇದ್ದಾರೆ. ಅವರು ವಾರಾಂತ್ಯದ ತಮ್ಮ ಸಮಯವನ್ನು ಬೆಂಗಳೂರಿಗಾಗಿ ಬಳಸುತ್ತಾರೆ. ಈ ಗುಂಪನ್ನು 'ವೀಕ್ ಎಂಡ್ ವಾರಿಯರ್ಸ್' ಎನ್ನುತ್ತಾರೆ ಪ್ರೊ. ರಾಜೀವ್ ಗೌಡ.
ಶಿಬಿರದ ಉದ್ಘಾಟನೆ ನಗರದ ಡಬ್ಬಲ್ ರೋಡಿನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಬೆಳಗ್ಗೆ ನೆರವೇರಿತು. ಇಡೀ ದಿನ ತಜ್ಞರಿಂದ ಭಾಷಣಗಳು, ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉಪನ್ಯಾಸಗಳು ಇದ್ದವು. ನಾನೂ ಬೆಂಗಳೂರಿಗಾಗಿ ಏನಾದರೂ ಮಾಡುತ್ತೇನೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನಗರ ಸುತ್ತುತ್ತೇನೆ ಎಂಬ ಧೃಡ ನಿರ್ಧಾರ ಶಿಬಿರಾರ್ಥಿಗಳ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು. ಫೋಟೋ ನೋಡಿ.
ಶಿಬಿರದಲ್ಲಿ ಮಾತನಾಡಿದ Urban Action ತಜ್ಞರ ಕೆಲವು ಅನಿಸಿಕೆಗಳನ್ನು ಇಲ್ಲಿ ಸೆರೆಹಿಡಿಯಲಾಗಿದೆ. ನೋಡ್ಕೊಂಡ್ ಬನ್ನಿ.

ಬೆಂಗಳೂರು ನೀಡ್ಸ್ ಯು : ನಿತಿನ್ ಪೈ
ತಕ್ಷಶಿಲ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ನಿತಿನ್ ಪೈ ಹೇಳಿದರು : ಬೆಂಗಳೂರಿನ ಸಮಸ್ಯೆಗಳ ಆಳ ಮತ್ತು ಅಗಲವನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಅನೇಕರು ಅಂದುಕೊಂಡಿರುವಂತೆ ಬೆಂಗಳೂರಿನ ಸಮಸ್ಯೆ ಜನಸಾಂದ್ರತೆ ಅಲ್ಲ. ನಮ್ಮನ್ನು ಆಳುತ್ತಿರುವ ಜನ ಸೇವಕರು ತಮ್ಮ ಜವಾಬ್ದಾರಿಗಳನ್ನು ಸಮಂಜಸವಾಗಿ ನಿರ್ವಹಿಸುತ್ತಿಲ್ಲ, ಅಷ್ಟೆ.

ಬೆಂಗಳೂರು ನೀಡ್ಸ್ ಯು : ಬಿಪ್ಯಾಕ್ ಕಾರ್ಯದರ್ಶಿ ಜಯರಾಜ್
ನಿವೃತ್ತ ಐಎಎಸ್ ಅಧಿಕಾರಿ B-PAC ಸಂಸ್ಥೆಯ ಕಾರ್ಯದರ್ಶಿ ಕೆ. ಜಯರಾಜ್ ಬೆಂಗಳೂರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ವಿಶ್ಲೇಷಿಸಿದರು. ನಮ್ಮಲ್ಲಿ ನೂರಾಯೆಂಟು ಸರಕಾರಿ ಸಂಸ್ಥಗಳಿವೆ. ಅವುಗಳ ನಡುವೆ ಸಾಮರಸ್ಯ ಸುತರಾಂ ಇಲ್ಲ. ಒಬ್ಬೊಬ್ಬರದು ಒಂದೊಂದು ಮಾತು. ಒಬ್ಬೊಬ್ಬರಿಗೆ ಒಂದೊಂದು ಅಧಿಕಾರ. ಅಧಿಕಾರಶಾಯಿ ಮತ್ತು ರಾಜಕೀಯ ಹಿತಾಸಕ್ತಿಗಳ ಗೊಂದಲದ ಗೂಡಾಗಿದೆ ಬೆಂಗಳೂರು. ನಮಗೆ ಬೇಕಾಗಿರುವುದು ಈ ಸಂಸ್ಥೆಗಳ ನಡುವೆ ಹೊಂದಾಣಿಕೆ ಮತ್ತು ಸಾಮರಸ್ಯ. ನವ ಬೆಂಗಳೂರಿಗಾಗಿ ಹೊಸ ಕಾನೂನುಗಳನ್ನು ರೂಪಿಸುವ ಅಗತ್ಯ ಇಲ್ಲ.

ಬೆಂಗಳೂರು ನೀಡ್ಸ್ ಯು : ಸಿಟಿ ಕನೆಕ್ಟ್ ರವಿಚಂದರ್
ನಮ್ಮನ್ನು ಅಂದರೆ ಬೆಂಗಳೂರನ್ನು ಆಳುತ್ತಿರುವ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ವಂಶಾವಳಿಗಳನ್ನು (DNA) ತುಂಬುವುದು ಹೇಗೆ? ಎನ್ನುವತ್ತ ನಮ್ಮ ಚಿಂತನೆ ಸಾಗಬೇಕು ಎಂದವರು ಸಿಟಿ ಕನೆಕ್ಟ್ ಫೌಂಡೇಶನ್ನಿನ ವಿ ರವಿಚಂದರ್. ಅಧಿಕಾರ ವಿಕೇಂದ್ರೀಕರಣ ಮತ್ತು ನಾಗರಿಕರ ಪಾಲುದಾರಿಕೆ ತೀರ ಅವಶ್ಯ. ಯೋಜನೆ ಮತ್ತು ಅವುಗಳ ಸಮಗ್ರ ಅನುಷ್ಠಾನದತ್ತ ನಮ್ಮ ಗಮನ ಹರಿಯಬೇಕು. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವದಲ್ಲ ಎಂದರು. ಸಖತ್ ಆಗಿ ಹೇಳಿದ್ರು.

ಬೆಂಗಳೂರು ನೀಡ್ಸ್ ಯು : ನರೇಶ್ ನರಸಿಂಹನ್
ನಗರಗಳನ್ನು ಕಾಡುವ ಸಮಸ್ಯೆಗಳನ್ನು ಅಧ್ಯಯನ ಮಾಡುವ ಪರಿಣತ, ಆರ್ಕಿಟೆಕ್ಟ್ ನರೇಶ್ ನರಸಿಂಹನ್ ಹೇಳಿದ್ದೇನೆಂದರೆ, ಪ್ರತಿಯೊಂದು ಪ್ರದೇಶ, ಬಡಾವಣೆಗೆ ತನ್ನದೇ ಆದ ಗುಣ-ಸ್ವಭಾವ-ಸತ್ವ ಇರ್ತದೆ. ಅವನ್ನು ಹಾಳುಗೆಡವದೆ ಬೆಳವಣಿಗೆಗೆ ಇಂಬು ಕೊಡುವ ಒಳನೋಟ ನಾಗರಿಕರಿಗೆ ಮತ್ತು ಅಧಿಕಾರ ವರ್ಗಕ್ಕೆ ಇರಬೇಕು. ಬಡಾವಣೆಗಳಲ್ಲಿ ಬದುಕು ಸಹನೀಯವಾಗಿರಬೇಕು ಎನ್ನುವ ಮಂತ್ರ ಜಪಿಸಬೇಕು. ಕೊಳ್ಳುಬಾಕ ಸಂಸ್ಕೃತಿಯಲ್ಲಿ ಬದುಕುತ್ತಿರುವ ನಾವು , ನೆರೆಹೊರೆಯನ್ನು ಚೆನ್ನಾಗಿಟ್ಟುಕೊಳ್ಳುವ ದಿಕ್ಕಿನಲ್ಲಿ ಚಿಂತಿಸಬೇಕು.

ಬೆಂಗಳೂರು ನೀಡ್ಸ್ ಯು : ಪ್ರೊ. ರಾಜೀವ್ ಗೌಡ
ಶಿಬಿರದ ಸಮಾರೋಪ ಭಾಷಣ ಮತ್ತು ಮೂರು ವಾರಗಳ ಕಾಲ ಶಿಬಿರಾರ್ಥಿಗಳು ಏನು ಮಾಡಬೇಕು ಎನ್ನುವುದರ ಸಾರ ಸಂಗ್ರಹವನ್ನು ಚಿತ್ರಿಸಿದವರು ಪ್ರೊ. ರಾಜೀವ್ ಗೌಡ. ಬೆಂಗಳೂರಿನಲ್ಲಿ ಬದುಕು ಬಂಗಾರವಾಗಬೇಕಾದರೆ ನಾಗರಿಕರಲ್ಲಿ ನಾಗರಿಕ ಪ್ರಜ್ಞೆ ವೃದ್ಧಿಯಾಗಬೇಕು. ಮನೆಯಿಂದ ಆಚೆಬಂದು ನಾಗರಿಕ ಸಂಘ ಸಂಸ್ಥೆಗಳು ರೂಪಿಸುವ ಕಾರ್ಯ ಸೂಚಿಯಲ್ಲಿ ಸಕ್ರಿಯವಾಗಿ ಭಾಗಿ ಆಗಬೇಕು. ಆಗ ಮಾತ್ರ ಬೆಂಗಳೂರು " ಬೃಹತ್ ಬೆಂಗಳೂರು ಆಗ್ತದೆ" ಇಲ್ಲದಿದ್ದರೆ ಅದೇ ಬೆಂಗ್ಳೂರು ಅದೇ ಪ್ರಾಬ್ಲ್ಂ ಪರಮನೆಂಟ್ ಆಗಿರುತ್ತದೆ! [ಫೇಸ್ ಬುಕ್ ಪುಟ]

ಯುವಕ ಯುವತಿಯರ ತಂಡ ಏನು ಮಾಡಲಿದೆ?
ನೀವು ಬೆಂಗಳೂರಿಗೆ ಬೇಕು - ಚಳವಳಿಗೆ ಧುಮುಕಿರುವ ಸುಮಾರು 120 ಯುವಕ ಯುವತಿಯರ ತಂಡ ಗುಂಪುಗುಂಪಾಗಿ ನಗರ ಸುತ್ತುತ್ತದೆ. ಪ್ರಮುಖವಾಗಿ ಹೆಬ್ಬಾಳದ ಮೇಲು ಸೇತುವೆ ಮತ್ತು ಕೆ ಆರ್ ಪುರಂ ಮೇಲು ಸೇತುವೆ ಬಳಿ ಕಗ್ಗಂಟಾಗಿರುವ ಸಮಸ್ಯೆಗಳ ಅಧ್ಯಯನವನ್ನು ಕೈಗೆತ್ತಿಕೊಳ್ಳುತ್ತದೆ. ಸಮಸ್ಯೆಯ ಮೂಲ ಹುಡುಕಿ ಪರಿಹಾರ ಯಾರು ಕೊಡುತ್ತಾರೆ? ಈ mega mess ಯಾವಾಗ ಸರಿ ಹೋಗ್ತದೆ ಎನ್ನುವತ್ತ ಗಮನ ಹರಿಸುತ್ತಾರೆ. All the best to UAI internees and BNY.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications