ಬೈಯಪ್ಪನಹಳ್ಳಿ ಎಸ್ಎಂವಿಬಿ ಲೋಕಾರ್ಪಣೆ, ನಿಲ್ದಾಣಕ್ಕೆ ಬಸ್ಗಳ ವಿವರ
ಬೆಂಗಳೂರು, ಜೂನ್ 05; ನೈಋತ್ಯ ರೈಲ್ವೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಜೂನ್ 6ರಂದು ಲೋಕಾರ್ಪಣೆಯಾಗಲಿದೆ. ಸುಮಾರು 50 ರೈಲುಗಳನ್ನು ಟರ್ಮಿನಲ್ನಿಂದ ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸುಮಾರು 314 ಕೋಟಿ ವೆಚ್ಚದಲ್ಲಿ ಬೈಯಪ್ಪನಹಳ್ಳಿಯಲ್ಲಿ ವಿಮಾನ ನಿಲ್ದಾಣ ಮಾದರಿಯ ಅತ್ಯಾಧುನಿಕ ರೈಲು ನಿಲ್ದಾಣ ನಿರ್ಮಾಣ ಮಾಡಲಾಗಿದೆ.
ಈ ರೈಲು ನಿಲ್ದಾಣಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಎಂದು ನಾಮಕರಣ ಮಾಡಲಾಗಿದೆ. ಈ ಟರ್ಮಿನಲ್ ಕಾಮಗಾರಿ ಪೂರ್ಣಗೊಂಡು ಸುಮಾರು ಒಂದು ವರ್ಷದ ಬಳಿಕ ಜನರ ಸಂಚಾರಕ್ಕೆ ಮುಕ್ತವಾಗುತ್ತಿದೆ. ಈ ಮೂಲಕ ಮೆಜೆಸ್ಟಿಕ್ ರೈಲು ನಿಲ್ದಾಣದ ಜನಸಂದಣಿ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ.
ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಜೂನ್ 6ರಂದು ಲೋಕಾರ್ಪಣೆಯಾಗಲಿದೆ. ಇಲ್ಲಿಗೆ ಜನರು ಸಂಚಾರ ನಡೆಸಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಂಪರ್ಕ ಬಸ್ಗಳನ್ನು ಓಡಿಸಲಿದೆ. ಈ ಕುರಿತ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಅಧಿಕೃತವಾಗಿ ಉದ್ಘಾಟನೆ ಆಗಲ್ಲ
ಜೂನ್ 6ರಿಂದ ನೈಋತ್ಯ ರೈಲ್ವೆ ಮೂರು ಜೋಡಿ ರೈಲುಗಳನ್ನು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಓಡಿಸಲಿದೆ. ಈ ಮೂಲಕ ಜನರ ಸಂಚಾರ ಆರಂಭವಾಗಲಿದೆ. ಆದರೆ ಟರ್ಮಿನಲ್ ಅಧಿಕೃತವಾಗಿ ಉದ್ಘಾಟನೆ ಆಗುವುದಿಲ್ಲ. ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಬೇಕಿದೆ. ಆದರೆ ಕಾರ್ಯಕ್ರಮಕ್ಕೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಪ್ರಾಯೋಗಿಕವಾಗಿ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಬಣಸವಾಡಿಯಿಂದ ಬೈಯಪ್ಪನಹಳ್ಳಿ
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ 50 ಜೋಡಿ ರೈಲುಗಳನ್ನು ಸಂಚಾರ ನಡೆಸುವ ಉದ್ದೇಶ ಹೊಂದಿದೆ. ಇದರ ಮೊದಲ ಭಾಗವಾಗಿ ಪ್ರಾಯೋಗಿಕವಾಗಿ ಜೂನ್ 6ರ ಸೋಮವಾರ 3 ಜೋಡಿ ರೈಲುಗಳನ್ನು ಬಣಸವಾಡಿ ರೈಲು ನಿಲ್ದಾಣದಿಂದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಗೆ ಸ್ಥಳಾಂತರ ಮಾಡಲಾಗಿದೆ. ಈ ರೈಲುಗಳಲ್ಲಿ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಬಿಎಂಟಿಸಿ ಸಂಪರ್ಕ ಸೇವೆ ಬಸ್ ಸೌಲಭ್ಯ ಒದಗಿಸಲಿದೆ.

ಯಾವ-ಯಾವ ರೈಲುಗಳು
ನೈಋತ್ಯ ರೈಲ್ವೆ ಎರ್ನಾಕುಲಂ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (12683/ 12684), ಕೊಚ್ಚುವೆಲಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್ಪ್ರೆಸ್ (16319/ 16320) ಮತ್ತು ಪಾಟ್ನಾ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (22353/ 22354) ರೈಲುಗಳನ್ನು ಜೂನ್ 6ರಿಂದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಓಡಿಸಲಿದೆ ಎಂದು ಈಗಾಗಲೇ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ದೇಶದ ಮೊದಲ ಸಂಪೂರ್ಣ ಎಸಿ ನಿಲ್ದಾಣ
ನೈಋತ್ಯ ರೈಲ್ವೆ ಸುಮಾರು 314 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲು ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಈ ಮೂಲಕ ಬೆಂಗಳೂರಿನ ಭವ್ಯ ಕಟ್ಟಡಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಲಿದೆ. 4,200 ಚದರ ಮೀಟರ್ ವಿಸ್ತೀರ್ಣದ ಈ ರೈಲು ನಿಲ್ದಾಣದಲ್ಲಿ ಡಿಜಿಟಲ್ ಮೂಲಕ ರೈಲು ಸಂಚಾರದ ರಿಯಲ್ ಟೈಂ ಮಾಹಿತಿ ಪ್ರಯಾಣಿಕರಿಗೆ ಸಿಗಲಿದೆ. 4 ಲಕ್ಷ ಲೀಟರ್ ನೀರಿನ ಮರುಬಳಕೆ ಘಟಕ, ವಿಐಪಿ ಲಾಂಜ್, ಫುಡ್ಕೋರ್ಟ್, 250 ನಾಲ್ಕು ಚಕ್ರ, 900 ಬೈಕ್ಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ. 7 ಫ್ಲಾಟ್ಫಾರಂಗಳನ್ನು ನಿಲ್ದಾಣ ಹೊಂದಿದೆ. ನಿಲ್ದಾಣದಿಂದ 50 ಜೋಡಿ ರೈಲುಗಳನ್ನು ಓಡಿಸಲು ಇಲಾಖೆ ಗುರಿ ಹೊಂದಿದೆ.
|
ಬಿಎಂಟಿಸಿ ಬಸ್ಗಳ ಸಂಚಾರ
ಬೆಂಗಳೂರು ನಗರದ ವಿವಿಧ ಪ್ರದೇಶಗಳಿಂದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಗೆ ಜನರು ಸಂಚಾರ ನಡೆಸಲು ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಂಪರ್ಕ ಬಸ್ಗಳನ್ನು ಓಡಿಸಲಿದೆ. ಸ್ಥಳ, ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಟ್ವೀಟ್ ಮಾಡಿದೆ. ರೈಲು ನಿಲ್ದಾಣಕ್ಕೆ ಹೋಗುವ ಜನರು ಈ ಬಸ್ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications