ಗುಜರಿ ಬಸ್ಗಳನ್ನು ಮಾರಲು ಮುಂದಾದ ಬಿಎಂಟಿಸಿ: 1 ಲಕ್ಷ ರುಪಾಯಿ ಬೆಲೆ ನಿಗದಿ
ಬೆಂಗಳೂರು, ಜೂನ್ 22: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳನ್ನು ಮಾರಾಟ ಮಾಡಲು ಮುಂದಾಗಿದೆ. 7 ಲಕ್ಷ ಕಿಲೋ ಮೀಟರ್ ಗಿಂತ ಹೆಚ್ಚು ಸಂಚರಿಸಿರುವ ಬಸ್ಗಳನ್ನು ಮಾರಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ.
ಬಿಎಂಟಿಸಿ ತಾನು ಮಾರಾಟ ಮಾಡಲಿರುವ ಬಸ್ಗಳಿಗೆ ಒಂದು ಲಕ್ಷ ರುಪಾಯಿ ಬೆಲೆ ನಿಗದಿಪಡಿಸಿದೆ. ಅರೆ! ಬೆಲೆ ಕೇವಲ ಒಂದು ಲಕ್ಷ ಅಷ್ಟೆನಾ? ನಾನು ಒಂದು ತೆಗೆದುಕೊಳ್ಳಬಹುದಾ ಎನ್ನುವ ಆಲೋಚನೆ ಏನಾದ್ರು ನಿಮಗೆ ಬಂದ್ರೆ, ಖಂಡಿತ ಈ ಬಸ್ ನಿಮಗೆ ಸಿಗಲ್ಲ, ಈ ಆಫರ್ ಇರೋದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ.
ಹೌದು, ಹೆಚ್ಚುವರಿ ಬಿಎಂಟಿಸಿ ಹೆಚ್ಚುವರಿ ಬಸ್ಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ನೀಡಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ನಿಗಮಕ್ಕೆ ಪ್ರಸ್ತಾವನೆ ಕೂಡ ನೀಡಿದೆ. ಬಿಎಂಟಿಸಿ ನೀಡುತ್ತಿರುವ ಹೆಚ್ಚುವರಿ ಬಸ್ಗಳಿಗೆ ಕನಿಷ್ಠ ಬೆಲೆ ಒಂದು ಬಸ್ಗೆ 1 ಲಕ್ಷ ರುಪಾಯಿ ನಿಗದಿಪಡಿಸಿದೆ.
ಖಾಸಗಿ ವ್ಯಕ್ತಿಗಳಿಗೆ ಈ ಬಸ್ಗಳು ದೊರೆಯುದಿಲ್ಲ. ನಮ್ಮದೇ ಸಹೋದರ ಸಂಸ್ಥೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ ಈ ಅವಕಾಶ ನೀಡಿದ್ದೇವೆ, ನಮ್ಮಲ್ಲಿ ಕಾರ್ಯಾಚರಣೆ ಮಾಡದೆ ನಿಂತಿರುವ ಬಸ್ಗಳನ್ನು ನೀಡಲಿದ್ದೇವೆ, ಇದರಿಂದ ಸಹೋದರ ಸಂಸ್ಥೆಗೆ ಅನುಕೂಲವಾಗಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿದೆ.

ಪ್ರಸ್ತಾವನೆಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ
ಬಿಎಂಟಿಸಿ ಪ್ರಸ್ತಾವನೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಇನ್ನೂ ಯಾವುದೇ ರೀತಿಯ ಪೂರಕ ಸ್ಪಂದನೆ ದೊರೆತಿಲ್ಲ, ಹೀಗಾಗಿ ಇನ್ನೂ ಪ್ರಕ್ರಿಯೆಯಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ ಈ ಅವಕಾಶ ನೀಡಲಾಗಿದ್ದು, ಇನ್ನುಳಿದ ಸಾರಿಗೆ ಸಂಸ್ಥೆಗಳ ಬಳಿ ಈ ಕುರಿತು ಯಾವುದೇ ಪ್ರಸ್ತಾವನೆ ಮಾಡಿಲ್ಲ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದದಲ್ಲಿ ತೀವ್ರ ವಿರೋಧ
ಉತ್ತರ ಕರ್ನಾಟದ ಅಭಿವೃದ್ಧಿಯಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎನ್ನುವ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಇನ್ನೂ ಬಿಎಂಟಿಸಿ ಪ್ರಸ್ತಾವನೆಗೆ ಉತ್ತರ ಕರ್ನಾಟಕದ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅದರಲ್ಲೂ ಕನ್ನಡ ಪರ ಸಂಘಟನೆಗಳು ಈಗಾಗಲೇ ಪ್ರತಿಭಟನೆಯನ್ನೂ ಕೂಡ ನಡೆಸಿವೆ.
ಬಿಎಂಟಿಸಿ ಗುಜರಿ ಬಸ್ಗಳನ್ನ ಖರೀದಿಸಿ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಿಎಂ ಬೊಮ್ಮಾಯಿ ತವರು ಜಿಲ್ಲೆ ಹಾವೇರಿ ಸೇರಿದಂತೆ ಕಿತ್ತೂರು ಕರ್ನಾಟಕದ 7 ಜಿಲ್ಲೆಗಳಲ್ಲಿ ಈ ಬಸ್ಗಳನ್ನ ಸಂಚಾರಕ್ಕೆ ಮುಂದಾಗಿರೋದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗುಜರಿಗೆ ಹಾಕುವಂತ ಬಸ್ಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ನೀಡುವ ಮೂಲಕ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಜನರನ್ನು ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿವೆ.

ಬೆಂಗಳೂರಿನಲ್ಲೇ ಸಂಚರಿಸದ ಬಸ್ ಇಲ್ಲಿಗ್ಯಾಕೆ
ಅತ್ಯುತ್ತಮ ರಸ್ತೆ ಸೌಲಭ್ಯ ಹೊಂದಿರುವ ಬೆಂಗಳೂರಿನಲ್ಲೇ ಸಂಚರಿಸಲು ಅನರ್ಹವಾಗಿರುವ ಬಸ್ಗಳು ಉತ್ತರ ಕರ್ನಾಟಕದ ಗ್ರಾಮೀಣ ರಸ್ತೆಗಳಲ್ಲಿ ಇನ್ಯಾವ ರೀತಿ ಸಂಚರಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ಹೊಸ ಬಸ್ಗಳನ್ನು ಪಡೆಯಬೇಕಾದ ಜನತೆಗೆ ಈ ರೀತಿ ಗುಜರಿ ಬಸ್ಗಳಲ್ಲಿ ಸಂಚರಿಸುವ ಕರ್ಮ ಏಕೆ ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಎಚ್ಚರಿಕೆ
ಈಗಾಗಲೇ ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಗುಜರಿ ಬಸ್ಗಳನ್ನ ಖರೀದಿಸದಂತೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.
ಬಾಗಲಕೋಟೆಯಲ್ಲಿ ಕೂಡ ಕನ್ನಡಪರ ಸಂಘಟನೆಗಳು ಸಭೆ ಸೇರಿ ಸಾರಿಗೆ ಸಂಸ್ಥೆಗಳ ಅಧಿಕಾರಿಗಳ ನಿಲುವನ್ನು ಖಂಡಿಸಿದ್ದಾರೆ ಅಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿಗೂ ಕೂಡ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದ್ದರು. ಮುಖ್ಯಮಂತ್ರಿಗಳೂ ಕೂಡ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದರು.












Click it and Unblock the Notifications