ಬಿಜೆಪಿಯಿಂದ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ: ಕುಮಾರಸ್ವಾಮಿ
ಬೆಂಗಳೂರು, ಡಿಸೆಂಬರ್ 19: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ರಾಜ್ಯ ಹಾಗೂ ದೇಶದಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಪ್ರತಿಭಟನೆಗಳನ್ನು ಹತ್ತಿಕ್ಕಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಎರಡೂ ಸರ್ಕಾರಗಳೂ ದೇಶದಲ್ಲಿ ದಮನಕಾರಿ ನೀತಿಗಳನ್ನು ಅನುಸರಿಸುತ್ತಿವೆ, ಶಾಂತಿಯುತವಾಗಿ ಬದುಕುವ ಹಕ್ಕನ್ನೂ ಜನ ಕಳೆದುಕೊಂಡಿಕೊಂಡಿದ್ದಾರೆ, ದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪೌರತ್ವ ಕಾಯ್ದೆ; ಮಂಗಳೂರಿನಲ್ಲಿ ಭುಗಿಲೆದ್ದ ಪ್ರತಿಭಟನೆ, ಕರ್ಫ್ಯೂ ಜಾರಿ
ನಿಷೇಧಾಜ್ಞೆಗಳ ಮೂಲಕ ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಲಾಗುತ್ತದೆ, ಜನಸಾಮಾನ್ಯರಿಗೆ ಭಯ ಭೀತಿಯ ವಾತಾವರಣ ಕಾಡುತ್ತಿದೆ. ಮಂಗಳೂರು, ಬೆಂಗಳೂರು, ಕಲಬುರ್ಗಿಗಳಲ್ಲಿ ಪ್ರತಿಭಟನಾಕಾರರಿಗೆ ಗುಂಡಿಕ್ಕುವ ಮೂಲಕ ಜನತೆ ಕಂಗಾಲಾಗಿದ್ದಾರೆ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಹಿಂಸಾತ್ಮಕ ಪ್ರತಿಭಟನೆ ಜನರ ಅಸ್ತ್ರ, ಶಾಂತಿಯುತ ಪ್ರತಿಭಟನೆಯನ್ನೂ ಅರಗಿಸಿಕೊಳ್ಳಲಾಗದ ಕೇಂದ್ರ-ರಾಜ್ಯ ಸರ್ಕಾರಗಳು ಪೊಲೀಸ್ ಬಲವನ್ನು ಪ್ರಯೋಗಿಸುವ ಮೂಲಕ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸುತ್ತಿದೆ, ಇದು ದೇಶದ ದೊಡ್ಡ ದುರಂತ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರದಿಂದ ಜನವಿರೋಧಿ ಕಾಯಿದೆ ಜಾರಿಗೆ
ಪೌರತ್ವ ಕಾಯ್ದೆಯ ವಿರುದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಭಟಿಸಲು ನಿರ್ಭಂಧ ಹೇರಿರುವುದು, ತುರ್ತುಪರಿಸ್ಥಿತಿಯ ಮುನ್ಸೂಚನೆ ಎಂದು ವ್ಯಂಗ್ಯವಾಡಿದ್ದಾರೆ. ನಮ್ಮ ಪಕ್ಷ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತದೆ ಎಂದು ಹೇಳಿದ್ದಾರೆ.