ಬೆಂಗಳೂರು ಉತ್ತರದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ!
ಬೆಂಗಳೂರು, ಮಾ.11 : ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡರು ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಸೋಮವಾರ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ಕ್ಷೇತ್ರದ ನೂತನ ಕಚೇರಿ ತೆರೆಯಲಾಗಿದ್ದು, ಕಾರ್ಯಕರ್ತರ ಮೊದಲ ಸಭೆ ನಡೆಸಿ ಗೌಡರು ಚುನಾವಣಾ ಆಖಾಡಕ್ಕೆ ಇಳಿದಿದ್ದಾರೆ.
ಮೊದಲು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಆರ್.ಅಶೋಕ್, ಹಾಲಿ ಉತ್ತರ ಕ್ಷೇತ್ರದ ಸಂಸದ ಡಿಬಿ ಚಂದ್ರೇಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮುಂತಾದವರು ಡಿವಿ ಸದಾನಂದ ಗೌಡರ ಜೊತೆಗಿದ್ದು, ಒಗ್ಗಟ್ಟು ಪ್ರದರ್ಶಿಸಿದರು. [ಡಿವಿಎಸ್ ಗೆ ಕೊನೆಗೂ ಉತ್ತರ ಸಿಕ್ಕಿತು]

ಸೋಮವಾರ ಬೆಳಗ್ಗೆ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನೂತನ ಕಚೇರಿಯನ್ನು ಸಂಸದ ಡಿ.ಬಿ. ಚಂದ್ರೇಗೌಡ ಉದ್ಘಾಟಿಸಿದರು. ಕ್ಷೇತ್ರದ ಅಭ್ಯರ್ಥಿ ಸದಾನಂದಗೌಡ, ಮಾಜಿ ಡಿಸಿಎಂ ಆರ್ ಅಶೋಕ್, ಶಾಸಕ ಅಶ್ವತ್ಥನಾರಾಯಣ ಹಾಗೂ ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.[ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿ]
ಸೋಮವಾರ ಮಧ್ಯಾಹ್ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಉತ್ತರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ಮಾತನಾಡಿದ ಡಿವಿ ಸದಾನಂದ ಗೌಡ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಖ್ಯಮಂತ್ರಿ ಹುದ್ದೆಗೆ ಏರಿದೆ, ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.[ಲೋಕಸಭೆ ಚುನಾವಣೆ ವೇಳಾಪಟ್ಟಿ]
ನಾನು ಶಾಸಕ, ಸಂಸದ ಹಾಗೂ ಸಚಿವನಾಗುವ ಕನಸು ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೆ. ಆದರೆ, ಮುಖ್ಯಮಂತ್ರಿಯಾಗುವ ಕನಸು ಕಂಡಿರಲಿಲ್ಲ. ಬಿಜೆಪಿ ಪಕ್ಷ ನನಗೆ ಮುಖ್ಯಮಂತ್ರಿ ಹುದ್ದೆ ನೀಡಿತು. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಜನರ ವಿಶ್ವಾಸ ಉಳಿಸಿಕೊಂಡಿದ್ದೇನೆ. ಈಗ ಸಂಸದನಾಗಿ ಬೆಂಗಳೂರಿಗರ ವಿಶ್ವಾಸ ಗೆಲ್ಲುತ್ತೇನೆ ಎಂದರು.
ವೈಯಕ್ತಿಕವಾಗಿ ಕ್ಷೇತ್ರದ ಎಲ್ಲಾ ಮತದಾರರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ತಾವು ಸದಾನಂದ ಗೌಡರ ಪ್ರತಿನಿಧಿ ಎಂದು ಜನರ ಬಳಿಗೆ ಹೋಗಿ, ನನ್ನ ಗೆಲುವಿಗೆ ಶ್ರಮಿಸಬೇಕು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ನಾನು ಜನರ ಸೇವಕರಾಗಿ ದುಡಿಯಲು ತಯಾರಿದ್ದೇವೆ ಎಂದು ಗೌಡರು ಘೋಷಿಸಿದರು.
ಚಂದ್ರೇಗೌಡರ ಸ್ಪಷ್ಟನೆ : ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಡಿಬಿ ಚಂದ್ರೇಗೌಡ, ನಾನು ಯಾವುದೇ ಕ್ಷೇತ್ರದಿಂದ ಟಿಕೆಟ್ ಕೇಳಿರಲಿಲ್ಲ. ಆದರೆ 'ಚಂದ್ರೇಗೌಡಗೆ ಕೊಕ್, ಟಿಕೆಟ್ ಕೈ ತಪ್ಪಿತು' ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಆಶ್ಚರ್ಯ ತಂದಿದೆ. ರಾಜಕೀಯ ಜೀವನದಲ್ಲಿ ನಾನಾ ಹುದ್ದೆ ಅಲಂಕರಿಸಿದ್ದೇನೆ. ನಾನು ಟಿಕೆಟ್ ಕೇಳದಿರುವಾಗ ಕಸಿದುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications