'ಬುದ್ಧಿವಂತ' ಉಪೇಂದ್ರ ಬಿಜೆಪಿಗೆ ಬಂದರೆ ಸ್ವಾಗತ: ಸುರೇಶ್
ಬೆಂಗಳೂರು, ಆಗಸ್ಟ್ 11: ರಿಯಲ್ ಸ್ಟಾರ್, ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರ ಅವರು ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ ಎಂಬ ಸುದ್ದಿಯ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.
ಉಪೇಂದ್ರ ಅವರು ಚಿಂತನಾಶೀಲ ವ್ಯಕ್ತಿ, ಅವರು ಬಿಜೆಪಿ ಸೇರಿದರೆ ಸ್ವಾಗತಿಸುವೆ, ಉಪೇಂದ್ರ ಅವರ ಕನಸುಗಳಿಗೂ ಮೋದಿ ಅವರ ಯೋಜನೆಗಳಿಗೂ ಸಾಮ್ಯತೆ ಇದೆ ಎಂದು ಸುರೇಶ್ ಕುಮಾರ್ ಹೇಳಿದರು.

ಈ ಪ್ರತಿಕ್ರಿಯೆಗೆ ಇಂಬು ನೀಡುವಂತೆ, ಮತ್ತೊಂದು ಸುದ್ದಿ ಹೊರಬಂದಿದ್ದು, ರಿಯಲ್ ಸ್ಟಾರ್ ಉಪೇಂದ್ರರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಾಳೆ ಬೆಂಗಳೂರಿನ ಐಟಿಸಿ ಗಾರ್ಡನಿಯಾ ಹೋಟೆಲ್ ನಲ್ಲಿ ನಡೆಯುವ ಚಿಂತಕರ ಸಭೆಯಲ್ಲಿ ಪಾಲ್ಗೊಳ್ಳುವಂತೆ ನಟ ಉಪೇಂದ್ರ ಅವರಿಗೂ ಅಧಿಕೃತ ಆಹ್ವಾನ ಸಿಕ್ಕಿದೆ ಎನ್ನಲಾಗಿದೆ.
'ನಾನ್ಯಾಕೆ ರಾಜಕೀಯ ಪ್ರವೇಶಿಸಬಾರದು. ನಾನು ಕೂಡಾ ಭವಿಷ್ಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ. ಆದರೆ, ನಾನು ಯಾವುದೇ ಪಕ್ಷವನ್ನು ಸೇರುವುದಿಲ್ಲ. ಕಾರಣ, ಯಾವ ಪಕ್ಷದವರೂ ನನಗೆ ಆಹ್ವಾನ ನೀಡಿಲ್'ಲ ಎಂದು ಈ ಹಿಂದೆ ಹೇಳಿದ್ದ ಉಪೇಂದ್ರ ಅವರಿಗೆ ಆಹ್ವಾನ ಸಿಕ್ಕಿದ್ದು ನಿಜವಾದರೆ, ಸುದ್ದಿಗೋಷ್ಠಿ, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎನ್ನಬಹುದು.












Click it and Unblock the Notifications