ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಬದಲು ಮತ್ತೊಬ್ಬ ಮಹಿಳೆ ಸ್ಪರ್ಧೆ?
ಬೆಂಗಳೂರು, ಫೆಬ್ರವರಿ 25 : ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು?. ತೇಜಸ್ವಿನಿ ಅನಂತ ಕುಮಾರ್ ಕಣಕ್ಕಿಳಿಯಲು ಬಿಜೆಪಿಯ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಭ್ಯರ್ಥಿ ಯಾರಾಗಬೇಕು? ಎಂಬ ವಿಚಾರ ಆರ್ಎಸ್ಎಸ್ ಕಚೇರಿಯನ್ನು ತಲುಪಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕ್ರಮ ಆಯೋಜನೆ ಮಾಡಿತ್ತು. ತೇಜಸ್ವಿನಿ ಅನಂತ ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲು ಅವರು ತಯಾರಿ ನಡೆಸುತ್ತಿದ್ದಾರೆ. ಆದ್ದರಿಂದ, ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಹಲವು ಬಿಜೆಪಿ ನಾಯಕರು ತೇಜಸ್ವಿನಿ ಅವರು ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಸೋಮವಾರ ಮತ್ತೊಂದು ಬೆಳವಣಿಗೆ ನಡೆದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರಭಾವಿ ಶಾಸಕರೊಬ್ಬರು ನಿಯೋಗದೊಂದಿಗೆ ಆರ್ಎಸ್ಎಸ್ ನಾಯಕರನ್ನು ಭೇಟಿಯಾಗಿದ್ದಾರೆ. ತೇಜಸ್ವಿನಿ ಅವರು ಅಭ್ಯರ್ಥಿಯಾಗುವುದು ಬೇಡ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ....

ಆರ್ಎಸ್ಎಸ್ ನಾಯಕರ ಭೇಟಿ
ಬೆಂಗಳೂರಿನ ಪ್ರಭಾವಿ ಶಾಸಕರೊಬ್ಬರು ಪಕ್ಷದ ನಾಯಕರ ನಿಯೋಗದ ಜೊತೆ ಆರ್ಎಸ್ಎಸ್ ನಾಯಕರನ್ನು ಭೇಟಿಯಾಗಿದ್ದಾರೆ. ತೇಜಸ್ವಿನಿ ಅನಂತ ಕುಮಾರ್ ಅವರು ಅಭ್ಯರ್ಥಿಯಾಗುವುದು ಬೇಡ, ನಾವು ಸುಮಲತಾ ಅಂಬರೀಶ್ ಅವರನ್ನು ಪಕ್ಷಕ್ಕೆ ಕರೆತರುತ್ತೇವೆ. ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸೋಣ ಎಂದು ಮಾತುಕತೆ ನಡೆಸಿದ್ದಾರೆ.

ಬಿಜೆಪಿಗೆ ಬರ್ತಾರಾ ಸುಮಲತಾ
ಸುಮಲತಾ ಅಂಬರೀಶ್ ಅವರು ರಾಜಕೀಯಕ್ಕೆ ಬರುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಮಂಡ್ಯದಿಂದ ಕಣಕ್ಕಿಳಿಯಲು ಅವರು ಬಯಸಿದ್ದಾರೆ. ಆದರೆ, ಯಾವ ಪಕ್ಷದಿಂದ ಎನ್ನುವುದು ಇನ್ನೂ ಖಚಿತವಾಗಿಲ್ಲ. ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ಜೆಡಿಎಸ್ಗೆ ಕ್ಷೇತ್ರವನ್ನು ಬಿಟ್ಟುಕೊಡಲಿದೆ. ಆದ್ದರಿಂದ, ಸುಮಲತಾ ಸ್ಪರ್ಧೆ ಬಗ್ಗೆ ಇನ್ನೂ ಖಚಿತವಾದ ನಿರ್ಧಾರವಾಗಿಲ್ಲ.

ತೇಜಸ್ವಿನಿ ಅನಂತ ಕುಮಾರ್ ಸ್ಪರ್ಧೆಗೆ ಒತ್ತಡ
ಕೇಂದ್ರ ಸಚಿವ ಅನಂತ ಕುಮಾರ ನಿಧನದ ಬಳಿಕ ತೇಜಸ್ವಿನಿ ಅನಂತ ಕುಮಾರ್ ಅವರು ಬೆಂಗಳೂರು ಕೇಂದ್ರದಿಂದ ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯ ಬಿಜೆಪಿಯಲ್ಲಿ ವ್ಯಕ್ತವಾಯಿತು. ಅನಂತ ಕುಮಾರ್ ಅವರ ಅಭಿಮಾನಿಗಳು ಸಹ ತೇಜಸ್ವಿನಿ ಅವರು ಕಣಕ್ಕಿಳಿಯಬೇಕು ಎಂದು ಒತ್ತಡ ಹಾಕಲು ಆರಂಭಿಸಿದರು. ಹಲವು ಬಿಜೆಪಿ ನಾಯಕರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ನಿಂದ ಯಾರು ಕಣಕ್ಕೆ?
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎನ್ನುವುದು ಇನ್ನೂ ಖಚಿತವಾಗಿಲ್ಲ. ಕಳೆದ ಬಾರಿ ಕಣಕ್ಕಿಳಿದಿದ್ದ ನಂದನ್ ನಿಲೇಕಣಿ ಅಥವ ಮೋಹನದಾಸ್ ಪೈ ಅವರನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ ಮಾಜಿ ಶಾಸಕ ಪ್ರಿಯಕೃಷ್ಣ ಹೆಸರು ಸಹ ಚಾಲ್ತಿಯಲ್ಲಿದೆ.

ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು
1996ರಿಂದ 2014ರ ತನಕ ಅನಂತ ಕುಮಾರ್ ಅವರು ಸತತವಾಗಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಬೆಂಗಳೂರು ದಕ್ಷಿಣ ಎಂದರೆ ಬಿಜೆಪಿಯ ಭದ್ರಕೋಟೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಹೊಣೆ ಬಿಜೆಪಿ ನಾಯಕರ ಮೇಲಿದೆ. ಆದ್ದರಿಂದ, ತೇಜಸ್ವಿನಿ ಅನಂತ ಕುಮಾರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಬಯಸಿದ್ದಾರೆ.












Click it and Unblock the Notifications