ಅಧಿಕಾರಕ್ಕಾಗಿ ಬಿಜೆಪಿಯಿಂದ ನಿರ್ಲಜ್ಜ ನಡೆ : ಸಿಪಿಐಎಂ ಖಂಡನೆ
ಬೆಂಗಳೂರು, ಜುಲೈ 07: ಕರ್ನಾಟಕ ಭೀಕರ ಬರಗಾಲವನ್ನು ಎದುರಿಸುತ್ತಿರುವಾಗ ಮತ್ತು ರೈತರ ಆತ್ಮಹತ್ಯೆಗಳು ಬೆಳೆಯುತ್ತಿರುವಾಗ, ಬೆಲೆ ಏರಿಕೆಗಳ ಮತ್ತಷ್ಟು ದಾಳಿಗಳು ಸಂಕಷ್ಟದಲ್ಲಿರುವ ಜನಗಳ ಮೇಲೆ ಮುಂದುವರೆದಿದೆ.
ಜನಪ್ರತಿನಿಧಿಗಳಾದ ರಾಜ್ಯದ ಶಾಸಕರು ಮತ್ತು ವಿರೋಧ ಪಕ್ಷವಾದ ಬಿಜೆಪಿ, ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ರಚನಾತ್ಮಕ ಚರ್ಚೆಯಲ್ಲಿ ತೊಡಗಿ ಜನತೆಗೆ ಸರಿಯಾದ ಪರಿಹಾರ ಹುಡುಕಬೇಕಾದ ಈ ಸಂದರ್ಭದಲ್ಲಿ, ಜನಪರವಾದ ಈ ಕೆಲಸವನ್ನು ತೀವ್ರವಾಗಿ ಕಡೆಗಣಿಸಿ, ಕೇವಲ ಅಧಿಕಾರದಾಹಿ ಮನೋಭಾವದಿಂದ ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು, ರಾಜ್ಯಪಾಲರಿಗೆ ರಾಜಿನಾಮೆ ನೀಡುವ ಮೂಲಕ ರಾಜ್ಯದ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನಕ್ಕೆ ಕುಮ್ಮಕ್ಕು ನೀಡಿದೆ. ರಾಜ್ಯದ ರಾಜಕಿಯ ಬೆಳವಣಿಗೆ ತೀವ್ರ ನಾಚಿಕೆಗೇಡಿನದಾಗಿದೆ ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ಇದು ರಾಜ್ಯದ ಮತದಾರರು ಮತನೀಡಿ ಇವರನ್ನು ಆಯ್ಕೆ ಮಾಡಿದುದರ ಕರ್ತವ್ಯದ ತೀವ್ರ ದುರುಪಯೋಗವಾಗಿದೆ. ಮತದಾರರು ಇದನ್ನು ಗಮನಿಸಲಿದ್ದಾರೆಂಬ ಕನಿಷ್ಟ ಭಯವು ಇಲ್ಲದ ನಿರ್ಲಜ್ಜ ನಡೆಯಾಗಿದೆ.

ನಿರಂತರವಾಗಿ ರಾಜ್ಯ ಮೈತ್ರಿ ಸರಕಾರಕ್ಕೆ ಅಗತ್ಯ ಮತದಾರರ ಬೆಂಬಲವಿಲ್ಲವೆಂದು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿರುವ ಮತ್ತು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಮತ್ತು ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಪ್ರಚೋದನೆ ನೀಡುವುದನ್ನೇ ಕಾಯಕ ಮಾಡಿಕೊಂಡಿರುವ ವಿರೋಧ ಪಕ್ಷವಾದ ಬಿಜೆಪಿ ಮತ್ತು ಅದರ ಮುಖಂಡತ್ವಕ್ಕೆ ಹಾಗೂ ಇಂತಹ ಅಧಿಕಾರದಾಹಿ ಮನೋಭಾವದ ಮತ್ತು ತಮ್ಮನ್ನೇ ಮಾರಾಟಕ್ಕಿಟ್ಟುಕೊಂಡ ಶಾಸಕರಿಗೆ ಸರಿಯಾದ ಪಾಠವನ್ನು ಕಲಿಸಬೇಕೆಂದು ಜನತೆಗೆ ಸಿಪಿಐಎಂ ರಾಜ್ಯ ಸಮಿತಿ ಕಾರ್ಯದರ್ಶಿ ಯು. ಬಸವರಾಜ ಅವರು ಕರೆ ನೀಡಿದ್ದಾರೆ.












Click it and Unblock the Notifications