ಬೆಂಗಳೂರಿನ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಬಿಜೆಪಿ ಸರ್ಕಾರದ ತಾರತಮ್ಯ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಮಾ.12: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನಿರಂತರವಾಗಿ ತಾರತಮ್ಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಮುಖ್ಯಮಂತ್ರಿಗಳು ಈ ತಾರತಮ್ಯವನ್ನು ಸರಿಪಡಿಸಬೇಕು ಅಥವಾ ಸಮಗ್ರ ಬೆಂಗಳೂರು ಅಭಿವೃದ್ಧಿ ಎಂದು ಹೇಳಿಕೊಳ್ಳುವ ಬದಲು, ಬಿಜೆಪಿ ಶಾಸಕರ ಕ್ಷೇತ್ರದ ಅಭಿವೃದ್ಧಿ ಎಂದು ಹೇಳಬೇಕು' ಎಂದು ಆಗ್ರಹಿಸಿದರು.
'ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಶಾಸಕರ 15 ಕ್ಷೇತ್ರಗಳಿಗೆ ಒಟ್ಟು 9,888 ಕೋಟಿ ರೂಪಾಯಿಗಳಷ್ಟು ಅನುದಾನ ನೀಡಿದ್ದು, ಕಾಂಗ್ರೆಸ್ ಶಾಸಕರ 12 ಕ್ಷೇತ್ರಗಳಿಗೆ 2,186.48 ಕೋಟಿ ರೂಪಾಯಿ ನೀಡಿದೆ. ಇನ್ನು ಜೆಡಿಎಸ್ ಶಾಸಕರಿರುವ ದಾಸರಹಳ್ಳಿಗೆ 288.5 ಕೋಟಿ ಕೊಟ್ಟಿದ್ದಾರೆ. ಆ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗಿಂತ 5 ಪಟ್ಟು ಹೆಚ್ಚಿನ ಅನುದಾನವನ್ನು ಬಿಜೆಪಿಯವರಿಗೆ ನೀಡಲಾಗಿದೆ' ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬೆಂಗಳೂರಿಗೆ 7,200 ಕೋಟಿ, ಸಮ್ಮಿಶ್ರ ಸರ್ಕಾರದಲ್ಲಿ 1 ಸಾವಿರ ಕೋಟಿ ಹಣವನ್ನು ವಿವಿಧ ಕ್ಷೇತ್ರಗಳಿಗೆ ಅನುದಾನವಾಗಿ ನೀಡಿತ್ತು. ಈ ಹಣವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂಪಡೆದು ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಮರುಹಂಚಿಕೆ ಮಾಡಲಾಗಿದೆ. ಇತ್ತೀಚೆಗೆ ಅಮೃತ್ ನಗರ ಯೋಜನೆ ಅಡಿಯಲ್ಲಿ 3600 ಕೋಟಿ ಕೊಟ್ಟಿದ್ದಾರೆ. 1500 ಕೋಟಿಯನ್ನು ಮಳೆ ನೀರುಗಾಲುವೆಗಾಗಿ ನೀಡಲಾಗಿದೆ ಎಂದು ವಿವರಿಸಿದರು.
'ಮುಖ್ಯಮಂತ್ರಿಗಳ ನಗರೋತ್ಥಾನ, ಅಮೃತ್ ನಗರ ಯೋಜನೆ ಹಾಗೂ ಬೃಹತ್ ಮಳೆ ನೀರುಗಾಲುವೆಗೆ ನೀಡಲಾಗಿರುವ ಅನುದಾನ ಎಲ್ಲದರಲ್ಲೂ ಬಿಜೆಪಿ ಶಾಸಕರಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಮಳೆ ನೀರುಗಾಲುವೆಗೆ ನೀಡಲಾಗಿರುವ ಅನುದಾನದಲ್ಲಿ ಬಿಟಿಎಂ ಹಾಗೂ ಜಯನಗರ ಕ್ಷೇತ್ರಗಳಿಗೆ ಶೂನ್ಯ ಅನುದಾನ ಕೊಟ್ಟಿದ್ದಾರೆ' ಎಂದು ಕಿಡಿಕಾರಿದರು.
ಬೆಂಗಳೂರು: ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ
ಈ ಮೂರು ಯೋಜನೆಗಳು ಸೇರಿದಂತೆ ಬಿಜೆಪಿ ಶಾಸಕರ ಕ್ಷೇತ್ರಗಳಾದ ಬೆಂಗಳೂರು ದಕ್ಷಿಣ 821.75 ಕೋಟಿ, ಬಸವನಗುಡಿ 377.5, ಬೊಮ್ಮನಹಳ್ಳಿ 915.83, ಸಿವಿ ರಾಮನ್ ನಗರ 485.93, ಚಿಕ್ಕಪೇಟೆ 380.4, ಗೋವಿಂದರಾಜನಗರ 630.5, ಮಹದೇವಪುರ 752.85, ಮಲ್ಲೇಶ್ವರಂ 403.6, ಪದ್ಮನಾಭನಗರ 415.24, ರಾಜಾಜಿನಗರ 335.2, ಯಲಹಂಕ, 665.56, ಕೆ.ಆರ್ ಪುರಂ 926.7, ಮಹಾಲಕ್ಷ್ಮಿ ಬಡಾವಣೆ 527.25, ರಾಜರಾಜೇಶ್ವರಿ ನಗರ 1253.35, ಯಶವಂತಪುರ 1046.48 ಕೋಟಿ ಅನುದಾನ ನೀಡಲಾಗಿದೆ.
ಉಳಿದಂತೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಾದ ಬಿಟಿಎಂ ಬಡಾವಣೆ 232.84, ಬ್ಯಾಟರಾಯನಪುರ 253.39, ಚಾಮರಾಜಪೇಟೆ 136, ಗಾಂಧಿನಗರ 202.41, ಹೆಬ್ಬಾಶ 196.84, ಜಯನಗರ 182, ಪುಲಕೇಶಿನಗರ 140.95, ಸರ್ವಜ್ಞನಗರ 225.52, ಶಾಂತಿನಗರ 159.75, ವಿಜಯನಗರ 198.26, ಆನೇಕಲ್ 10, ಶಿವಾಜಿ ನಗರಕ್ಕೆ 248.52 ಕೋಟಿ ನೀಡಲಾಗಿದೆ. ಇನ್ನು ಜೆಡಿಎಶ್ ಶಾಸಕರಿರುವ ದಾಸರಹಳ್ಳಿ ಕ್ಷೇತ್ರಕ್ಕೆ 288.5 ಕೋಟಿ ಅನುದಾನ ನೀಡಲಾಗಿದೆ. ಹೀಗೆ ಬಿಜೆಪಿಯ ಇಂದಿನ ಹಾಗೂ ಈ ಹಿಂದೆ ಇದ್ದ ಮುಖ್ಯಮಂತ್ರಿಗಳು ಈ ರೀತಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರದ ಜನರು ಕೂಡ ತೆರಿಗೆ ಪಾವತಿಸುತ್ತಿದ್ದು, ಬಿಜೆಪಿ ಸರ್ಕಾರದಲ್ಲಿ ಇಂತಹ ತಾರತಮ್ಯ ನಿರಂತರವಾಗಿ ನಡೆಯುತ್ತಿದೆ' ಎಂದು ಆರೋಪಿಸಿದರು.
'ಬಿಜೆಪಿ ಸರ್ಕಾರ ಸಮಗ್ರ ಬೆಂಗಳೂರು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿ ಈ ರೀತಿ ಅನುದಾನದಲ್ಲಿ ತಾರತಮ್ಯ ಮಾಡಿದರೆ ಬೆಂಗಳೂರು ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ? ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದ ಸಂದರ್ಭದಲ್ಲಿ ಯಾರೂ ಕೂಡ ಅದಾನ ಕಡಿಮೆಯಾಗಿದೆ ಎಂದು ಹೇಳಿರಲಿಲ್ಲ. ಕಾಂಗ್ರೆಸ್ ಶಆಸಕರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ತಾರತಮ್ಯ ಮಾಡಿರಲಿಲ್ಲ. ಈ ವಿಚಾರವಾಗಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಹಾಗೂ ಈ ವಿಚಾರವನ್ನು ವಿಧಾನಸಭೆ ಕಲಾಪದಲ್ಲಿ ಚರ್ಚಿಸುತ್ತೇನೆ' ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.












Click it and Unblock the Notifications