Congress: ಎಲೆಕ್ಷನ್ನಲ್ಲಿ ಬಿಜೆಪಿಯವರ ನಟ್ಟು ಬೋಲ್ಟು ಜನರೇ ಟೈಟ್ ಮಾಡಿದ್ದಾರೆ
ರಾಜ್ಯ ರಾಜಕಾರಣದಲ್ಲಿ ನಟ್ಟು ಬೋಲ್ಟಿನ ಚರ್ಚೆ ಜೋರಾಗಿದೆ. ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು ಬಳಸಿದ್ದ ನಟ್ ಬೋಲ್ಟ್ ಟೈಟ್ ಡೈಲಾಗ್ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಬಿಜೆಪಿ ಕೂಡ ಟಾಂಗ್ ನೀಡಿದ್ದು, ಮೊದಲು ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ರಸ್ತೆಗಳ ನಟ್ಟು ಬೋಲ್ಟ್ ಟೈಟ್ ಮಾಡಲು ಕೈಯಲ್ಲಿ ಆಗುತ್ತಾ? ಎಂದು ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದೆ. ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ.
ಅಧಿಕಾರದುದ್ದಕ್ಕೂ ಭ್ರಷ್ಟಾಚಾರ, ಕಮಿಷನ್ ಲೂಟಿಯಲ್ಲಿ ಮುಳುಗಿದ್ದ, ಬೆಂಗಳೂರು ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಗ್ರಹಣ ಹಿಡಿಸಿದ್ದ ನಿಮ್ಮ ನಟ್ಟು ಬೋಲ್ಟನ್ನು ಚುನಾವಣೆಯಲ್ಲಿ ರಾಜ್ಯದ ಜನರೇ ಟೈಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ನಿಮ್ಮ ಅದ್ವಾನಗಳನ್ನೂ ಸರಿಪಡಿಸಿ, ಸಮಗ್ರ ಬೆಂಗಳೂರಿನ ಅಭಿವೃದ್ಧಿಯ ಸಂಕಲ್ಪದೊಂದಿಗೆ ಯೋಜನೆ ರೂಪಿಸಿ ಕಾರ್ಯಗತಗೊಳಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ನಿಮಗಿಲ್ಲ ಎಂದು ಹೇಳಿದೆ.

ಮೂರೂ ಬಿಟ್ಟವ ಊರಿಗೆ ಉಪದೇಶ ನೀಡಿದನಂತೆ ಹಾಗಿದೆ ನಿಮ್ಮ ಮಾತು. ರಸ್ತೆ ಗುಂಡಿ ಮುಚ್ಚುವಂತೆ ಸ್ವತಃ ಹೈಕೋರ್ಟ್ ಹಲವು ಬಾರಿ ಗಡುವು ನೀಡಿದರೂ ಎಚ್ಚರಗೊಳ್ಳದೆ, ಸುಳ್ಳು ಲೆಕ್ಕ ಕೊಟ್ಟು ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದು ನಿಮ್ಮದೇ ಮಾನಗೇಡಿ ಸರ್ಕಾರ. ಗುಂಡಿ ಮುಚ್ಚದೆ, ಬೆಂಗಳೂರನ್ನು ಅಪಘಾತಗಳ ನಗರವಾಗಿಸಿ, ಅಮಾಯಕ ಜನರ ಸಾವು-ನೋವಿಗೆ ಕಾರಣವಾದ ಕೊಲೆಗಡುಕ ಸರ್ಕಾರ ನಿಮ್ಮದಾಗಿತ್ತು ಎಂಬುದನ್ನು ಇಷ್ಟು ಬೇಗ ಮರೆತು ಹೋದಿರಾ? ಎಂದು ತಿರುಗೇಟು ನೀಡಿದೆ.
6,000 ಗುಂಡಿ ಮುಚ್ಚಿದ್ದೇವೆ: ಕಾಂಗ್ರೆಸ್
ನಿಮ್ಮ ಅವಧಿಯಲ್ಲಿ ರಸ್ತೆ ಗುಂಡಿಗಳಿಂದ ವರ್ಷಕ್ಕೆ ಸಾರಾಸರಿ 30 ಜನ ಜೀವ ಕಳೆದುಕೊಂಡರೂ, 2018ರಿಂದ 2021ರವರೆಗೆ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 6,768 ಕೋಟಿ ಖರ್ಚು ಮಾಡಿದ್ದೇವೆ ಎಂದು ಲೂಟಿ ಹೊಡೆದ ನಿರ್ದಯಿ ಸರ್ಕಾರ ನಿಮ್ಮದು. 2021ರ ಡಿಸೆಂಬರ್ನಲ್ಲಿ ಬೆಂಗಳೂರಿನ 11,200 ಕಿ.ಮೀ ರಸ್ತೆಯ ಪೈಕಿ 1,344 ಕಿ.ಮೀ ರಸ್ತೆಗಳು ಮಾತ್ರ ವಾಹನ ಸಂಚಾರಕ್ಕೆ ಯೋಗ್ಯವಾಗಿದೆ ಎನ್ನಿಸಿಕೊಂಡರೂ ನಾಚಿಕೆ ಬಿಟ್ಟು ಕಮಿಷನ್ ಹೊಡೆದು ಈಗ ಆ ಪಾಪವನ್ನು ಇನ್ನೊಬ್ಬರ ತಲೆಗೆ ಕಟ್ಟಲು ಹೊರಟಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡಿದೆ.

ಬಿಜೆಪಿ ಸರ್ಕಾರ ರಸ್ತೆ ಗುಂಡಿ ಮುಚ್ಚಲೆಂದೇ 2020ರ ಬಿಬಿಎಂಪಿ ಬಜೆಟ್ನಲ್ಲಿ ಮೀಸಲಿಟ್ಟಿದ್ದ ₹415.50 ಕೋಟಿ ಏನಾಯ್ತು? ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರನ್ನು ವಿಶ್ವದರ್ಜೆಗೇರಿಸುವ ಪಣ ತೊಟ್ಟಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ರಸ್ತೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಗುಂಡಿಗಳನ್ನು ಸರಿಪಡಿಸಲು 660 ಕೋಟಿ ರೂಪಾಯಿ ಯೋಜನೆಯನ್ನು ಘೋಷಿಸಿ, ಗುಂಡಿಗಳನ್ನು ವರದಿ ಮಾಡಲು "ರಸ್ತೆ ಗುಂಡಿ ಗಮನ" ಎಂಬ ಹೊಸ ಅಪ್ಲಿಕೇಷನ್ ಪರಿಚಯಿಸಿದೆ ಎಂದು ಹೇಳಿದೆ.
ಬೆಂಗಳೂರು ನಗರದಾದ್ಯಂತ ₹1,800 ಕೋಟಿ ವೆಚ್ಚದಲ್ಲಿ 157 ಕಿ.ಮೀ ರಸ್ತೆಗಳಿಗೆ ವೈಟ್ ಟಾಪಿಂಗ್ ನಡೆಸಲಾಗುತ್ತಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಗುಂಡಿಮಯವಾಗಿದ್ದ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಬಿಎಂಪಿಗೆ 15 ದಿನಗಳ ಗಡುವು ನೀಡಿ 6,000 ಗುಂಡಿಗಳನ್ನು ಮುಚ್ಚಿಸಿದ್ದರು ಎಂದು ವಾಗ್ದಾಳಿ ನಡೆಸಿದೆ.












Click it and Unblock the Notifications