ಕರ್ನಾಟಕ ಮಹಿಳಾ ಯಕ್ಷಗಾನ ತಂಡದಿಂದ 'ಭಕ್ತ ಸುಧನ್ವ' ಪ್ರದರ್ಶನ
ಬೆಂಗಳೂರು, ಜೂನ್ 8: ಬೆಂಗಳೂರಿನ ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಕಲಾವಿದೆಯರಿಂದ ಇತ್ತೀಚೆಗೆ ಭಕ್ತ ಸುಧನ್ವ ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನವು ಯಶಸ್ವಿಯಾಗಿ ಪ್ರಯೋಗವಾಗಿದೆ.
ಬೆಂಗಳೂರಿನ ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಕಲಾವಿದೆಯರು ಗಿರಿನಗರದ ಶ್ರೀ ಮಹಾಗಣಪತಿ ಹಾಗೂ ಸುಬ್ರಹ್ಮಣ್ಯ ದೇವರ ಅಷ್ಟಬಂಧ ಪುನಃಪ್ರತಿಷ್ಟೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಪ್ರದರ್ಶನ ನೀಡಿದರು.
ಯಕ್ಷಗಾನ ಪ್ರಸಂಗದ ಮುಮ್ಮೇಳದಲ್ಲಿ ಭಾಗವತರಾಗಿ ವಿನಯ್ ಶೆಟ್ಟಿ, ಮದ್ದಳೆ ಸಂಪತ್ ಕುಮಾರ್, ಚಂಡೆ ಕಾರ್ತಿಕ್ ಧಾರೇಶ್ವರ ಹಾಗೂ ಮುಮ್ಮೇಳದಲ್ಲಿ ಗೌರಿ ಕೆ, ಸದಾನಂದ ಹೆಗಡೆ, ಅನಿತಾ, ಸುಮಾ ಅನಿಲ್ ಕುಮಾರ್, ಚೈತ್ರ ರಾಜೇಶ್ ಕೋಟ, ಚೈತ್ರ ಭಟ್, ದೀಕ್ಷಾ ಭಟ್, ಸೌಜನ್ಯ ನಾವುಡ, ಧೃತಿ ಅಮ್ಮೆಂಬಳ ಪಾತ್ರ ವಹಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಕರ್ನಾಟಕ ಕಲಾ ದರ್ಶಿನಿಯ ಯಕ್ಷಗಾನ ಗುರುಗಳಾದ ಶ್ರೀನಿವಾಸ ಸಾಸ್ತಾನ.
''ಯಕ್ಷಗಾನ ಕಲೆ ಮೊದಲಿನಿಂದಲೂ ಉಳಿದು-ಬೆಳೆದು ಬಂದಿರುವುದು ದೇವಸ್ಥಾನದಿಂದ. ಗಿರಿನಗರದ ಮಹಾಗಣಪತಿ ದೇವಸ್ಥಾನ, ರಾಮಾಶ್ರಮದ ರಾಘವೇಶ್ವರ ಭಾರತೀ ಮಹಾಸ್ವಾಮಿಜಿಯವರು ಮೊದಲಿನಿಂದಲೂ ಈ ಕಲೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಇಂತಹ ಕಲಾ ಪ್ರೋತ್ಸಾಹಕರಿಂದ ಕಲೆ ಉಳಿಯಲು ಸಾಧ್ಯ,'' ಎಂದು ಹೇಳಿದರು.

ಭಕ್ತ ಸುಧನ್ವ ಯಕ್ಷಗಾನ ಪ್ರಸಂಗ:
ಹಂಸಧ್ವಜನ ಒಡ್ಡೋಲಗದ ಮೂಲಕ ಕಥೆ ಪ್ರಾರಂಭವಾಯಿತು.ಕಥೆಯ ಸಾರಾಂಶ ಹೀಗಿದೆ :
ಶ್ರೀಕೃಷ್ಣನನ್ನು ಕಾಣಬೇಕೆಂಬ ಆಸೆ ಚಂಪಕಾವತಿಯವರ ಮನೋಭಿಲಾಷೆ ಆಗಿತ್ತು.ರಾಜ ಹಂಸಧ್ವಜ, ಪರಮ ಹರಿಭಕ್ತನಾಗಿರುತ್ತಾನೆ. ಹಾಗಾಗಿ ಪಾಂಡವರ ಅಶ್ವಮೇಧ ತುರಗವನ್ನು ಕಟ್ಟಿ ಅರ್ಜುನನ್ನು ಸೋಲಿಸಿದರೆ ಸಾರಥಿಯಾಗಿ ಕೃಷ್ಣ ಬರುತ್ತಾನೆಂದು ಊಹಿಸಿ ಪಾಂಡವರ ಅಶ್ವಮೇಧ ಯಾಗದ ತುರಗವನ್ನು ಕಟ್ಟಲು ಮಗ ಸುಧನ್ವನಿಗೆ ಆದೇಶ ನೀಡುತ್ತಾನೆ.
ನಂತರ ಸುಧನ್ವ ತನ್ನ ಹೆಂಡತಿ ಪ್ರಭಾವತಿಯ ಆಸೆಯ ಈಡೇರಿಸಿ, ಯುದ್ದ ಮಾಡಲು ಮುಂದಾಗುತ್ತಾನೆ. ಬಂದ ಘಟಾನುಘಟಿ ವೀರರೊಂದಿಗೆ ಸುಧನ್ವ ಹೋರಾಡುತ್ತಾನೆ ಅವರನ್ನು ಸೋಲಿಸುತ್ತಾನೆ. ಕೊನೆಗೆ ಅರ್ಜುನನ್ನೂ ಸೋಲಿಸಿ, ಅರ್ಜುನನ ಸಾರಥಿಯನ್ನು, ರಥವನ್ನು ಹೊಡೆದುರುಳಿಸುತ್ತಾನೆ.

ಅದನ್ನು ಅರಿತ ಕೃಷ್ಣ ಚಂಪಕಾವತಿಗೆ ಬರುತ್ತಾನೆ. ತನ್ನ ಅಂತರಂಗದ ಆರಾಧ್ಯ ದೇವರಾದ ಕೃಷ್ಣನನ್ನು ಕಣ್ತುಂಬಿಕೊಂಡ ಸುಧನ್ವ, ಅರ್ಜುನನೊಂದಿಗೆ ಹೋರಾಡುವುದನ್ನು ಮುಂದುವರಿಸುತ್ತಾನೆ. ಮೋಕ್ಷ ಸುಧನ್ವನ ಆಸೆ, ಗೆಲುವು ಅರ್ಜುನನ ಆಸೆ, ಇಬ್ಬರಿಗೂ ಅವರ ಆಸೆಯಂತೆ ವರ ಕರುಣಿಸುವ ಕೃಷ್ಣನ ಮನೋಭಿಲಾಷೆ. ಕೊನೆಯಲ್ಲಿ ಅರ್ಜುನ ಬಿಟ್ಟ ಮೂರನೇಯ ಬಾಣದಿಂದ ಸುಧನ್ವ ಮೋಕ್ಷ ಹೊಂದುವ ಸನ್ನಿವೇಶ ಕರುಣಾಜನಕವಾಗಿ ಮೂಡಿಬಂತು.
ಕೊನೆಯಲ್ಲಿ ಕಥೆಯ ಸಾರಾಂಶದಲ್ಲಿ ಶಕ್ತಿಗಿಂತ ಭಕ್ತಿ ಮುಖ್ಯ, ಭಕ್ತಿಗಿಂತ ಮೋಕ್ಷ ಮುಖ್ಯ ಎಂಬ ಸುಧನ್ವ, ತನ್ನ ಪರಾಕ್ರಮಕ್ಕೆಂದು ಸೋಲು ಬರಬಾರದೆಂಬ ಅರ್ಜುನನ ಸಾಹಸದ ಸನ್ನಿವೇಶ, ಮೋಕ್ಷ ಸಾಧನೆಗಾಗಿ ಹರಿಭಕ್ತನಾಗಿ ತನ್ನೆರಡು ಮಕ್ಕಳನ್ನು ಕಳೆದುಕೊಂಡ ಹಂಸಧ್ವಜನ ಭಕ್ತಿ. ಒಟ್ಟಿನಲ್ಲಿ ಈ ಕಥೆಯ ಸಾರ ಯಕ್ಷಗಾನ ರಸಿಕರ ಮನಮುಟ್ಟಿದಂತು ಸುಳ್ಳಲ್ಲ.












Click it and Unblock the Notifications