ಜಾಬ್ ಕನ್ಸೆಲ್ಟೆನ್ಸಿ ನಂಬಿ ಬೆಂಗಳೂರಿಗೆ ಬಂದ ಬಾಲಕರು ಬೀದಿಯಲ್ಲಿ ಅಳುತ್ತಿದ್ದರು !
ಬೆಂಗಳೂರು, ಡಿಸೆಂಬರ್ 15: ಕರಪತ್ರ, ಟಿವಿ ಜಾಹೀರಾತು ನಂಬಿಕೊಂಡು ಉದ್ಯೋಗಕ್ಕಾಗಿ ಎಷ್ಟೋ ಹುಡುಗರು ಬೆಂಗಳೂರಿಗೆ ಬರುತ್ತಾರೆ. ಆದರೆ, ಇಲ್ಲಿ ಉದ್ಯೋಗ ಸಿಗಲ್ಲ, ಬದಲಿಗೆ ಇರೋ ದುಡ್ಡು ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಜಾಹೀರಾತು ನಂಬಿ ಬರುವ ಹುಡುಗರನ್ನೇ ಟಾರ್ಗೆಟ್ ಮಾಡಿ ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ತೆಗೆದುಕೊಂಡು ಮೋಸ ಮಾಡುವ ಜಾಲ ದೊಡ್ಡ ದಾಗಿ ಬೆಳೆದುಕೊಂಡಿದೆ. ಖಾಸಗಿ ವಾಹಿನಿ ಜಾಹೀರಾತು ನಂಬಿಕೊಂಡು ಬೆಳಗಾವಿಯಿಂದ ಬಂದ ಬಾಲಕರು ಏನಾದರೂ ಎಂಬ ಸ್ಟೋರಿ ಇಲ್ಲಿದೆ ನೋಡಿ..
ಉದ್ಯೋಗ ನಂಬಿ ಬೆಂಗಳೂರಿಗೆ ಆಗಮನ:
ಒಬ್ಬ ಹುಡುಗನಿಗೆ ಅಮ್ಮನೂ ಇಲ್ಲ, ಅಪ್ಪನೂ ಇಲ್ಲ. ವಯಸ್ಸು ಹದಿನೇಳು ವರ್ಷ. ಇನ್ನೊಬ್ಬ ಮಾಯಪ್ಪ, ವಯಸ್ಸು ಹದಿನೇಳು ವರ್ಷ. ಕಿತ್ತು ತಿನ್ನುವ ಬಡತನ. ಕೆಲಸ ಹುಡುಕುತ್ತಿದ್ದರು. ಖಾಸಗಿ ವಾಹಿನಿಯಲ್ಲಿ ಒಂದು ಜಾಹೀರಾತು ಪ್ರಸಾರವಾಗುತ್ತಿತ್ತು. ತಿಂಗಳಿಗೆ ಹದಿನೈದರಿಂದ ಇಪ್ಪತ್ತು ಸಾವಿರ ಸಂಬಳ. ವಸತಿ ಊಟ ಉಚಿತ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಎಂದು ಮೊಬೈಲ್ ನಂಬರ್ ನೀಡಲಾಗಿತ್ತು. ನಂಬರ್ ಗೆ ಕರೆ ಮಾಡಿದಾಗ, ನಿಮಗೆ ಬಂದ ಕೂಡಲೇ ಉದ್ಯೋಗ ಕೊಡುತ್ತೀವಿ. ಊಟ, ವಸತಿ ಉಚಿತವಿದೆ ಎಂದು ತಲೆ ಸವರಿದ್ದಾರೆ.
ಜೇಬಲ್ಲಿದ್ದ ದುಡ್ಡು ಖಾಲಿ:
ಮಲ್ಲೇಶ್ವರಂನಲ್ಲಿರುವ ಉದ್ಯೋಗ ಮಾಹಿತಿ ಕೇಂದ್ರದ ಜಾಹೀರಾತು ನಂಬಿ ಬೆಳಗಾವಿಯಿಂದ ಇಬ್ಬರು ಬಾಲಕರು ಬೆಂಗಳೂರಿಗೆ ಬಂದಿದ್ದರು. ಖರ್ಚಿಗೆ ಅಗತ್ಯ ಬೀಳಬಹುದು ಎಂದು ಸಾಲ ಮಾಡಿ ತಲಾ ಮೂರು ಸಾವಿರ ದುಡ್ಡು ತೆಗೆದುಕೊಂಡು ಬಂದಿದ್ದಾರೆ. ಮೆಜೆಸ್ಟಿಕ್ ಬಳಿ ಇಳಿದು ಕರೆ ಮಾಡಿದಾಗ, ವಿನಿಯಮ ಕೇಂದ್ರದ ವಿಳಾಸ ನೀಡಿ ಕರೆಸಿಕೊಂಡಿದ್ದಾರೆ. ನಿಮಗೆ ಕೆಲಸ ಆಗಿದೆ. ಸಂದರ್ಶನ ಇಲ್ಲದೇ ನೀವು ಆಯ್ಕೆಯಾಗಿದ್ದೀರ, ನೀವು ನೋಂದಣಿ ಮಾಡಿಸಬೇಕು ಎಂದು ಇಬ್ಬರಿಂದಲೂ ತಲಾ 2200 ರೂ. ನಂತೆ ಕಟ್ಟಿಸಿಕೊಂಡಿದ್ದಾರೆ. ಕೆಲಸ ಸಿಕ್ಕಿದೆ ಎಂಬ ಖುಷಿಯಲ್ಲಿ ಇಬ್ಬರೂ ಇದ್ದ ದುಡ್ಡು ಕೊಟ್ಟಿದ್ದಾರೆ. ಯಾವುದೇ ರಶೀದಿಯಾಗಲೀ, ಉದ್ಯೋಗ ಪತ್ರವಾಗಲೀ ನೀಡಿರಲಿಲ್ಲ.
ಮೆಜೆಸ್ಟಿಕ್ ನಲ್ಲಿ ಅಳುತ್ತಿದ್ದ ಬಾಲಕರು :
ನವ್ಯ ಎಂಬ ಯುವತಿ ಇಬ್ಬರು ಬಾಲಕರ ಜತೆ ಮಾತುಕತೆ ನಡೆಸಿ, ನೀವು ಮೆಜೆಸ್ಟಿಕ್ ಗೆ ಹೋಗಿ, ಅಲ್ಲಿಗೆ ಬಂದು ನಿಮ್ಮನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿ ವಾಪಸು ಕಳಿಸಿದ್ದಾರೆ. ಕೇವಲ ಮೂವತ್ತು ರೂಪಾಯಿ ಕೈಯಲ್ಲಿಡಿದುಕೊಂಡಿದ್ದ ಇಬ್ಬರು ಬಾಲಕರು ಮೆಜೆಸ್ಟಿಕ್ ಗೆ ಬಂದಿದ್ದಾರೆ. ಐದು ತಾಸು ಕಾದು ಕುಳಿತರೂ ಯಾರೂ ಬಂದಿಲ್ಲ. ಬಳಿಕ ಕರೆ ಮಾಡಿದರೆ ಯಾರೂ ಸ್ವೀಕರಿಸಿಲ್ಲ ಇಬ್ಬರು ಬಾಲಕರು ಅಳುತ್ತಾ ಕೂತಿದ್ದರು. ಇದೇ ವೇಳೆ ವನ್ಯ ಜೀವಿ ಸಂರಕ್ಷಕ ಕಿರಣ್ ಮತ್ತು ಸ್ನೇಹಿತರು ಕೆಲಸದ ನಿಮಿತ್ತ ಹೋಗಿದ್ದರು. ಇಬ್ಬರು ಹುಡುಗರು ಅಳುತ್ತಿದ್ದನ್ನು ಗಮನಿಸಿ ವಿಚಾರಿಸಿದಾಗ, ಕೆಲಸ ಕೊಡಿಸುವುದಾಗಿ ಕರೆಸಿ ಕೊಂಡು ದುಡ್ಟು ಕಿತ್ತುಕೊಂಡು ಹೋಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಇಬ್ಬರು ಬಾಲಕರನ್ನು ವಯ್ಯಾಲಿಕಾವಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ ಜತೆ ಉದ್ಯೋಗಿ ವಿನಿಮಯ ಕೇಂದ್ರದ ಬಳಿ ಹೋಗಿದ್ದಾರೆ. ಇಲ್ಲಿ ಮಾತಿನ ಚಕಮಕಿ ನಡೆದು, ಉದ್ಯೋಗ ವಿನಿಮಯ ಕೇಂದ್ರದಿಂದ ಅಷ್ಟೂ ಹಣ ವಾಪಸು ಕೊಡಿಸಿದ್ದಾರೆ. ಬಳಿಕ ಇಬ್ಬರು ಯುವಕರಿಗೆ ಖಾಸಗಿ ಬಸ್ ನಲ್ಲಿ ಬೆಳಗಾವಿಗೆ ಕಳುಹಿಸಿಕೊಟ್ಟಿದ್ದಾರೆ.
Recommended Video
ವಜ್ಯಜೀವಿ ಸಂರಕ್ಷಕನಿಂದ ರಕ್ಷಣೆ:
"ಅಪ್ರಾಪ್ತ ಬಾಲಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಅಪರಾಧ, ಆದರೆ ಈ ಜಾಬ್ ಕನ್ಸೆಲ್ಟೆನ್ಸಿಯವರು ಇಬ್ಬರು ಬಾಲಕರಿಗೆ ನಂಬಿಸಿ ಬೆಳಗಾವಿಯಿಂದ ಕರೆಸಿಕೊಂಡು ದುಡ್ಡು ತೆಗೆದುಕೊಂಡು ಯಾವುದೇ ರಿಶೀದಿ ನೀಡದೇ ಕಳಿಸಿಕೊಟ್ಟಿದ್ದಾರೆ. ಉದ್ಯೋಗ ಕೊಡುವುದಾದರೆ, ಮೊದಲು ಆಹ್ವಾನ ಪತ್ರ ನೀಡಬೇಕು, ಸಂದರ್ಶನ ನಡೆಸಬೇಕು. ಬಳಿಕ ಅವರಿಂದ ಶುಲ್ಕ ಪಡೆಯುವುದರಲ್ಲಿ ಅರ್ಥವಿದೆ. ಅಪ್ರಾಪ್ತರ ಬಳಿ ಹಣ ತೆಗೆದುಕೊಂಡು ಮೆಜೆಸ್ಟಿಕ್ ನಲ್ಲಿ ಬಿಟ್ಟು ಕರೆ ಸ್ವೀಕರಿಸದೇ ಮೋಸ ಮಾಡಿದ್ದರು. ಇದು ಇಬ್ಬರ ಕಥೆಯಲ್ಲ, ಸುಳ್ಳು ಜಾಹೀರಾತು ನಂಬಿ ಬರುವ ಯುಕವರಿಗೆ ಮೋಸ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದಾರೆ" ಎಂದು ವಜ್ಯ ಜೀವಿ ಸಂರಕ್ಷಕ ಕಿರಣ್ ತಿಳಿಸಿದ್ದಾರೆ. ಕಷ್ಟದಲ್ಲಿ ಸಿಲುಕಿದ್ದ ಇಬ್ಬರು ಬಾಲಕರನ್ನು ರಕ್ಷಿಸಿ ಅವರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸಿದ್ದಾರೆ.
ಒಂದು ವೇಳೆ ಅವರಿಗೆ ಯಾರೂ ನೆರುವ ನೀಡದಿದ್ದಲ್ಲಿ, ಹೋಟೆಲ್, ಬಾರ್ ನಲ್ಲಿ ಕೆಲಸ ಅಂತ ಹೋಗಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದರು. ಇ ರೀತಿಯ ಪ್ರಕರಣಗಳು ಪ್ರತಿ ನಿತ್ಯ ಬೆಂಗಳೂರಿನಲ್ಲಿ ನಡೆಯುತ್ತಲೇ ಇರುತ್ತವೆ. ಪತ್ರಿಕೆ, ಕರಪತ್ರ, ಖಾಸಗಿ ವಾಹಿನಿಗಳಲ್ಲಿ ಬರುವ ಜಾಹೀರಾತು ನಂಬಿ ಉದ್ಯೋಗ ಅಂತ ಹೋಗುವ ಮುನ್ನ ಗ್ರಾಮೀಣ ಯುವಕರು ಎಚ್ಚರಿಕೆ ವಹಿಸಬೇಕು. ಕೇವಲ ಹಣ ಕಿತ್ತುಕೊಂಡು ಕಳಿಸುವುದನ್ನೇ ಕೆಲವರು ದಂಧೆ ಮಾಡಿಕೊಂಡಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತ ಪ್ರತಿ ನಿತ್ಯ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಅನಾಥ ಬಾಲಕರ ರಕ್ಷಣೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆ ಅಧೀಕ್ಷಕ ಥಾಮಸ್ ತನ್ನ ಅನುಭವ ಹಂಚಿಕೊಂಡಿದ್ದಾರೆ.
ಯಾರೇ ಆಗಲೀ, ಈ ಜಾಹೀರಾತು ನಂಬಿ ಮೋಸ ಹೋಗುವ ಮುನ್ನ ಎಚ್ಚರಿಕೆ ವಹಿಸಬೇಕು. ಇಲ್ಲಿದ್ದರೆ ಬೆಳಗಾವಿ ಬಾಲಕರಂತೆ ಬೀದಿಗೆ ಬೀಳುವುದು ಗ್ಯಾರೆಂಟಿ.