ಜೊಮ್ಯಾಟೊ ಪ್ರಕರಣ; ಸಾಕ್ಷ್ಯ ಸಿಕ್ಕಿದ ನಂತರ ಹಿತೇಶಾಗೆ ನೋಟಿಸ್
ಬೆಂಗಳೂರು, ಮಾರ್ಚ್ 18: ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್, ತಮ್ಮ ಮೇಲೆ ಹಲ್ಲೆ ಆರೋಪ ಮಾಡಿದ್ದ ಹಿತೇಶಾ ಚಂದ್ರಾನಿ ವಿರುದ್ಧ ದೂರು ನೀಡುತ್ತಿದ್ದಂತೆ ಹಿತೇಶಾ ಬೆಂಗಳೂರು ತೊರೆದಿದ್ದಾರೆ. ಈ ದೂರಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದು, ಸಾಕ್ಷ್ಯಾಧಾರಗಳು ದೊರೆತ ನಂತರ ಮಹಿಳೆಗೆ ಸಮನ್ಸ್ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸೂಕ್ತ ದಾಖಲೆ, ಸಾಕ್ಷ್ಯಗಳು ದೊರೆತ ನಂತರ ಮಹಿಳೆಗೆ ನೋಟಿಸ್ ನೀಡಲಾಗುವುದು. ಆನಂತರ ಆಕೆಯನ್ನು ವಿಚಾರಣೆಗೆ ಕರೆಸಲು ಸಾಧ್ಯ. ನೋಟೀಸ್ ನೀಡುವವರೆಗೂ ಅವರು ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಡಿಸಿಪಿ ಜೋಶಿ ಶ್ರೀನಾಥ್ ಮಹಾದೇವ್ ತಿಳಿಸಿದ್ದಾರೆ.
ಮಾರ್ಚ್ 9ರಂದು ಹಿತೇಶಾ ಚಂದ್ರಾನಿ ಎಂಬ ಮಹಿಳೆ, ಜೊಮ್ಯಾಟೊ ಡೆಲಿವರಿ ಬಾಯ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅಂದು ಆಹಾರ ಆರ್ಡರ್ ಮಾಡಿ ತುಂಬಾ ಸಮಯವಾದರೂ ಡೆಲಿವರಿ ಆಗಿರಲಿಲ್ಲ. ಆರ್ಡರ್ ಕ್ಯಾನ್ಸಲ್ ಮಾಡುವುದಕ್ಕಾಗಿ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡುವ ವೇಳೆ ಡೆಲಿವರಿ ಬಾಯ್ ಕಾಮರಾಜ್ ಮನೆಗೆ ಬಂದಿದ್ದ. ತಡವಾಗಿದ್ದರಿಂದ ಕೋಪಗೊಂಡಿದ್ದ ನಾನು ಜೊಮ್ಯಾಟೊದಿಂದ ಕರೆ ಬರುವವರೆಗೂ ಇಲ್ಲಿಯೇ ಇರಿ ಎಂದಿದ್ದಕ್ಕೆ ಆತ ಕೋಪದಿಂದ ಹಲ್ಲೆ ನಡೆಸಿದ್ದ ಎಂದು ಹಿತೇಶಾ ಚಂದ್ರಾನಿ ಎಂಬ ಯುವತಿ ಆರೋಪಿಸಿದ್ದಳು. ಆನಂತರ ಪ್ರಕರಣ ಬೇರೆಯದ್ದೇ ಆಯಾಮ ಪಡೆದುಕೊಂಡಿತ್ತು. ಯುವತಿಯೇ ಕಾಮರಾಜ್ ಮೇಲೆ ಚಪ್ಪಲಿ ಎಸೆದು ಹಲ್ಲೆ ನಡೆಸಿದ್ದಳು ಎಂಬ ಆರೋಪ ಕೇಳಿಬಂದಿತ್ತು.

ಇದಾದ ನಂತರ ಸೋಮವಾರ ಕಾಮರಾಜ್ ಕೂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಿತೇಶಾ ವಿರುದ್ಧ ದೂರು ದಾಖಲಿಸಿದ್ದರು.
ಬೆಂಗಳೂರಿನ ತಮ್ಮ ಮನೆ ವಿಳಾಸ ಆನ್ಲೈನ್ನಲ್ಲಿ ಲೀಕ್ ಆದ ನಂತರ ಚಂದ್ರಾನಿ ಬೆಂಗಳೂರು ತೊರೆದಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬುಧವಾರ ಆಕೆ ಮನೆಗೆ ಭೇಟಿ ನೀಡಿದ್ದು, ಅಲ್ಲಿ ಹಿತೇಶಾ ಇರಲಿಲ್ಲ ಎಂದು ತಿಳಿಸಿದ್ದರು.












Click it and Unblock the Notifications