Namma Metro: ನೇರಳೆ ಮಾರ್ಗದಲ್ಲಿ ಸಂಪೂರ್ಣ ಸಂಚಾರ ಆರಂಭಿಸಿದ ಮೆಟ್ರೋ- ಕಡಿಮೆಯಾದ ಟ್ರಾಫಿಕ್, ಎಲ್ಲೆಲ್ಲಿ? ಮಾಹಿತಿ, ವಿವರ
ಬೆಂಗಳೂರು, ಅಕ್ಟೋಬರ್ 11: ಚಲ್ಲಘಟ್ಟ-ವೈಟ್ಫೀಲ್ಡ್ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಪೂರ್ಣ ಕಾರ್ಯಾಚರಣೆ ಪ್ರಾರಂಭವಾದ ನಂತರ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಸೋಮವಾರ ಮಾಹಿತಿ ಹಂಚಿಕೊಂಡಿದೆ. ಟಿನ್ ಫ್ಯಾಕ್ಟರಿ-ಕೆಆರ್ ಪುರಂ ಸುತ್ತ ಸಾಮಾನ್ಯಕ್ಕಿಂತ ಕಡಿಮೆ ಟ್ರಾಫಿಕ್ ದಟ್ಟಣೆಯನ್ನು ಟ್ರಾಫಿಕ್ ಹೀಟ್ಮ್ಯಾಪ್ ತೋರಿಸಿದೆ.
ಟಿನ್ ಫ್ಯಾಕ್ಟರಿ-ಕೆಆರ್ ಪುರಂ ವಿಭಾಗದಲ್ಲಿ ಬೆಳಿಗ್ಗೆ 8 ರಿಂದ 10 ರ ನಡುವೆ ಕೇವಲ 1 ಕಿ.ಮೀ ಟ್ರಾಫಿಕ್ ದಟ್ಟಣೆ ಕಂಡುಬಂದಿದೆ. ಸೆಪ್ಟೆಂಬರ್ 25ರಂದು ( ಸೋಮವಾರ ) ಇದೇ ವಿಭಾಗದಲ್ಲಿ ವಾಹನ ದಟ್ಟಣೆಯು 2.1 ಕಿ.ಮೀ ಇತ್ತು.

ಸಂಜೆಯ ಪೀಕ್ ಅವರ್ನಲ್ಲಿ ( 4 ರಿಂದ 6 ರ ವರೆಗೆ ) ಸಾಮಾನ್ಯವಾಗಿ 800 ಮೀಟರ್ ಸಂಚಾರ ದಟ್ಟಣೆ ಇರುತ್ತಿತ್ತು. ಇದಕ್ಕೆ ಹೋಲಿಸಿದರೆ ಈಗ ದಟ್ಟಣೆಯ ಉದ್ದವು 100 ಮೀಟರ್ಗೆ ಇಳಿದಿದೆ. ಸಂಜೆ 6 ರ ಹೊತ್ತಿಗೆ ಉದ್ದವು 200 ಮೀಟರ್ವರೆಗೂ ಇರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 9 ರ ಸಂಜೆ ಜನದಟ್ಟಣೆ ಕಡಿಮೆಯಾಗಲು ಮಳೆಯೂ ಒಂದು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 25 ರಂದು, ದಟ್ಟಣೆಯ ಉದ್ದವು ಸಂಜೆ 4 ರಿಂದ 6 ರ ನಡುವೆ 800 ಮೀಟರ್ ಇತ್ತು. ಅದು 6 ಗಂಟೆಗೆ 1.3 ಕಿಮೀಗೆ ತಲುಪಿತ್ತು.
ಹೂಡಿ ಜಂಕ್ಷನ್ನಲ್ಲಿ, ಸಾಮಾನ್ಯವಾಗಿ ಸೋಮವಾರದಂದು 900 ಮೀಟರ್ ಸಂಚಾರ ದಟ್ಟಣೆ ಇರುತ್ತಿತ್ತು. ಇದಕ್ಕೆ ಹೋಲಿಸಿದರೆ ಅಕ್ಟೋಬರ್ 9ರಂದು ದಟ್ಟಣೆಯ ಉದ್ದವು ಸಂಜೆ 5 ರಿಂದ 6 ರವರೆಗೆ 200 ಮೀಟರ್ ಮಾತ್ರ ಇತ್ತು.

ಈ ಸೋಮವಾರ ನಗರದಲ್ಲಿ ಒಟ್ಟಾರೆ ದಟ್ಟಣೆಯ ಉದ್ದವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ ಎಂದು ಹೀಟ್ಮ್ಯಾಪ್ ತೋರಿಸಿದೆ. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಸರಾಸರಿ 31 ಕಿಮೀ ಉದ್ದವನ್ನು ದಾಖಲಿಸಿದೆ. ಸಂಜೆ 7 ಗಂಟೆ ವೇಳೆಗೆ ದಟ್ಟಣೆಯು 68.3 ಕಿ.ಮೀ.ಗೆ ಏರಿದೆ. ಸೆಪ್ಟೆಂಬರ್ 25 ರಂದು, ದಟ್ಟಣೆಯ ಉದ್ದವು ಇದೇ ಸಮಯದಲ್ಲಿ 46 ಕಿ.ಮೀ ಆಗಿತ್ತು ಎಂದು ತಿಳಿದುಬಂದಿದೆ.
ಈ ಕುರಿತು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಜೊತೆ ಮಾತನಾಡಿರುವ ಬೆಂಗಳೂರು ಜಂಟಿ ಆಯುಕ್ತ (ಸಂಚಾರ) ಎಂಎನ್ ಅನುಚೇತ್, 'ಅಕ್ಟೋಬರ್ 9 ರಂದು, ಕೆಆರ್ ಪುರಂ ಮಾರ್ಗದಲ್ಲಿ ಕಡಿಮೆ ವಾಹನಗಳು ಓಡಾಡುವುದು ಕಂಡುಬಂದಿದೆ. ಇದರಿಂದಾಗಿ ಟ್ರಾಫಿಕ್ ಹರಿವು ವೇಗವಾಗಿತ್ತು. ಬಹಳಷ್ಟು ಜನರು ತಮ್ಮ ವಾಹನಗಳನ್ನು ಬೈಯಪ್ಪನಹಳ್ಳಿಗೆ ತರುವುದನ್ನು ಬಿಟ್ಟಿದ್ದಾರೆ. ಇದರಿಂದಾಗಿ ಕೆಆರ್ ಪುರಂ ರೈಲು ನಿಲ್ದಾಣದ ಕಡೆಗೆ ಹೋಗುವ ವಾಹನಗಳ ಸರತಿ ಸಾಲು ಕಡಿಮೆಯಾಗಿತ್ತು' ಎಂದು ತಿಳಿಸಿದ್ದಾರೆ.

ಡಿಸಿಪಿ ಪೂರ್ವ ( ಸಂಚಾರ ) ಕುಲದೀಪ್ ಕುಮಾರ್ ಜೈನ್ ಮಾತನಾಡಿ, 'ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರಿಂದ ಕೆಆರ್ ಪುರಂ ಜಂಕ್ಷನ್ನಲ್ಲಿ ಸ್ವಲ್ಪ ಮಟ್ಟಿಗೆ ದಟ್ಟಣೆ ಕಡಿಮೆಯಾಗಿದೆ. ಆದರೂ, ಸಂಪೂರ್ಣ ಮೆಟ್ರೋ ಕಾರ್ಯಾಚರಣೆಗಳ ಪರಿಣಾಮವನ್ನು ಒಂದು ವಾರದ ನಂತರ ಮಾತ್ರ ನಿರ್ಣಯಿಸಲು ನಮಗೆ ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ.
ಅಕ್ಟೋಬರ್ 9 ರಂದು ಮೆಟ್ರೋದ ನೇರಳೆ ಮಾರ್ಗದಲ್ಲಿ 2,89,105 ಪ್ರಯಾಣಿಕರು ಸಂಚರಿಸಿದ್ದಾರೆ. ಅದರಲ್ಲಿ 61,179 ಬೈಯಪ್ಪನಹಳ್ಳಿ ಮತ್ತು ವೈಟ್ಫೀಲ್ಡ್ ನಡುವೆ ಪ್ರಯಾಣಿಸಿದ್ದಾರೆ. ಕೆಆರ್ ಪುರಂ- ಬೈಯಪ್ಪನಹಳ್ಳಿ ನಡುವೆ ಸಂಚಾರ ಆರಂಭಿಸುವುದಕ್ಕೂ ಮೊದಲು ವೈಟ್ಫೀಲ್ಡ್ಗೆ ಪ್ರತಿದಿನ ಸರಾಸರಿ 28,000 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.












Click it and Unblock the Notifications