ಮಾರ್ಗ ಬದಲಾವಣೆ: ಹಳೆ ಮದ್ರಾಸ್ ರಸ್ತೆ ಬಳಸುವ ಪ್ರಯಾಣಿಕರು ಗಮನಿಸಿ
ಬೆಂಗಳೂರು, ನ.14: ಬೆಂಗಳೂರಿನಲ್ಲಿ ವೈಟ್ ಟಾಪಿಂಗ್ ಕೆಲಸಗಳ ಕಾರಣ ಆಗಾಗ ಸಂಚಾರಿ ಮಾರ್ಗ ಬದಲಾವಣೆಯಾಗುತ್ತಲೆ ಇದೆ. ವಾಹನ ಪ್ರಯಾಣಿಕರು ಈ ಬಗ್ಗೆ ಮಾಹಿತಿ ಪಡೆಯುವುದು ಕೂಡ ಅಷ್ಟೇ ಮುಖ್ಯ. ಈಗ ಹಳೆ ಮದ್ರಾಸ್ ರಸ್ತೆಯನ್ನು ಬಳಸುವ ಪ್ರಯಾಣಿಕರು ಸಂಚಾರಿ ಮಾರ್ಗ ಬದಲಾವಣೆ ಬಗ್ಗೆ ತಿಳಿದುಕೊಳ್ಳಬೇಕಿದೆ.
ಹಳೆ ಮದ್ರಾಸ್ ರಸ್ತೆಯ ಒಂದು ಭಾಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಹಳೆ ಮದ್ರಾಸ್ ರಸ್ತೆಯಿಂದ ಬೆಂಗಳೂರಿನ ಇಂದಿರಾನಗರಕ್ಕೆ ವಾಹನಗಳನ್ನು ಚಲಾಯಿಸುವ ಪ್ರಯಾಣಿಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ಬುಧವಾರದಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನ ಹಲವೆಡೆ ಏಕಾಏಕಿ ಮನೆ ಬಾಡಿಗೆ ಹೆಚ್ಚಿಸಿದ ಮಾಲೀಕರು!
ಇಂದಿರಾನಗರ, ಹಲಸೂರು ಮತ್ತು ಜೀವನ್ ಭೀಮಾ ನಗರ ಸೇರಿದಂತೆ ಪೂರ್ವ ಬೆಂಗಳೂರು ಭಾಗಗಳಲ್ಲಿ ಸಂಚಾರ ದಟ್ಟಣೆಯಾಗುವ ಕುರಿತು ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ.
"ದಿನಾಂಕ 16.11.2022 ರಿಂದ ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಮದ್ರಾಸ್ ರಸ್ತೆಯ ಆಂಜನೇಯ ಜಂಕ್ಷನ್ ನಿಂದ ಇಂದಿರಾನಗರ 100 ಅಡಿ ರಸ್ತೆಯವರೆಗೆ ರಸ್ತೆಯ ಬಲಭಾಗದ ಪಥದಲ್ಲಿ ಬಿಬಿಎಂಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ" ಎಂದು ಬೆಂಗಳೂರು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಮದ್ರಾಸ್ ರಸ್ತೆ ಲಕ್ಷ್ಮೀಪುರಂ ಸ್ಮಶಾನ (ಆಂಜನೇಯ ಜಂಕ್ಷನ್) ನಿಂದ ಇಂದಿರಾನಗರ 100 ಅಡಿ ರಸ್ತೆಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
ಕೆ.ಆರ್.ಪುರ, ಮಹದೇವಪುರ ಮತ್ತು ವೈಟ್ ಫೀಲ್ಡ್ ಕಡೆಯಿಂದ ಹಳೆ ಮದ್ರಾಸ್ ರಸ್ತೆಯ ಮೂಲಕ ಆಂಜನೇಯ ಜಂಕ್ಷನ್ ನಿರ್ಬಂಧಿಸಲಾಗಿರುತ್ತದೆ. ಕಡೆಗೆ ಸಂಚರಿಸುವ ವಾಹನಗಳ ಮಾರ್ಗವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
ಇನ್ನು ಭಾರಿ ವಾಹನಗಳು ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಮತ್ತು ಖಾಸಗಿ ಬಸ್ಗಳು ಎನ್.ಜಿ.ಇ.ಎಫ್ ಜಂಕ್ಷನ್ನಲ್ಲಿ ಕಡ್ಡಾಯ ಎಡ ತಿರುವು ಪಡೆದು - ಸುರಂಜನ್ ದಾಸ್ ರಸ್ತೆ ಮೂಲಕ ಸಂಚರಿಸಿ ಹಳೇ ವಿಮಾನ ನಿಲ್ದಾಣ ರಸ್ತೆ ಮೂಲಕ ನಗರದ ಕಡೆಗೆ ಸಂಚರಿಸಬೇಕು.
ಇತರೆ ವಾಹನಗಳು ಇಂದಿರಾನಗರ 80 ಅಡಿ ರಸ್ತೆ ಜಂಕ್ಷನ್ ಅಥವಾ ಇಂದಿರಾನಗರ 100 ಅಡಿ ರಸ್ತೆ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಬಿ.ಎಂ.ಶ್ರೀ ಜಂಕ್ಷನ್ ಮೂಲಕ ಸಿ.ಎಂ.ಹೆಚ್ ರಸ್ತೆ - ಶಾಂತಿಸಾಗರ್ ಜಂಕ್ಷನ್ - ಆದರ್ಶ ಜಂಕ್ಷನ್ ಮೂಲಕ ನಗರದ ಕಡೆಗೆ ಸಂಚರಿಸಬೇಕು.
ವೈಟ್ ಟಾಪಿಂಗ್ ಕಾಮಗಾರಿಯಿಂದ ಪೂರ್ವ ಬೆಂಗಳೂರಿನ ಇಂದಿರಾನಗರ, ಹಲಸೂರು ಮತ್ತು ಜೀವನ್ ಭೀಮಾ ನಗರ ಟ್ರಾಫಿಕ್ ಪೊಲೀಸ್ ವ್ಯಾಪ್ತಿಯ ಸಿಎಂಎಚ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದೆ.