ಬೆಂಗಳೂರು ಮಹಾನಗರ ಎಂತು ಬಣ್ಣಿಸಲಿ ನಿನ್ನ?
ಬೆಂಗಳೂರು, ಜನವರಿ 16: ಜಗತ್ತಿನ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ನಗರದ ಸಂಚಾರ ನಿರ್ವಹಣೆ ವ್ಯವಸ್ಥೆ ಕುರಿತಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಸಿದ್ಧಪಡಿಸಿರುವ ಸಾಕ್ಷ್ಯಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
13 ಸಾವಿರ ಕಿ.ಮೀ ಉದ್ದದ ರಸ್ತೆಗಳನ್ನು ಹೊಂದಿರುವ ಬೆಂಗಳೂರು ನಗರದಲ್ಲಿ70 ಲಕ್ಷಕ್ಕಿಂತ ಅಧಿಕ ವಾಹನಗಳು ಸಂಚರಿಸುತ್ತದೆ. 1 ಕೋಟಿ 15 ಲಕ್ಷ ಜನಸಂಖ್ಯೆ ಹೊಂದಿರುವ ನಗರದಲ್ಲಿ ಟ್ರಾಫಿಕ್ ನಿಯಂತ್ರಣ ದೊಡ್ಡ ಸವಾಲಾಗಿದೆ. ಸವಾಲಾಗಿರುವ ಈ ಟ್ರಾಫಿಕ್ ಸಮಸ್ಯೆಯ ನಿರ್ವಹಣೆ ಕುರಿತಂತೆ ಟ್ರಾಫಿಕ್ ಪೊಲೀಸರು ಕೈಗೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಕ್ರಮಗಳನ್ನು ಸಾಕ್ಷ್ಯಚಿತ್ರ ವಿವರಿಸುತ್ತದೆ.
ಬೆಂಗಳೂರು ನಗರದ ೧೩ ಸಾವಿರ ಕಿ.ಮೀ ರಸ್ತೆಯಲ್ಲಿ 1,100 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡ ಪಾವತಿಸುವ ವಿಧಾನವನ್ನು ಕ್ಯಾಶ್ ಲೆಸ್ ಮಾಡಲಾಗಿದೆ. ಅಲ್ಲದೆ ದೇಶದಲ್ಲಿ ಅತಿದೊಡ್ಡ ಸಂಚಾರ ನಿಯಂತ್ರಣ ಕೊಠಡಿಯನ್ನು ಬೆಂಗಳೂರು ಹೊಂದಿದೆ ಎನ್ನುವುದು ಹೆಗ್ಗಳಿಕೆಯ ವಿಚಾರವಾಗಿದೆ.
ಸಂಚಾರಿ ಪೊಲೀಸರು ಸಿದ್ಧಪಡಿಸಿರುವ ಸಾಕ್ಷ್ಯಚಿತ್ರಕ್ಕೆ ಪ್ರಶಂಸೆ
ಇದೆಲ್ಲಾ ಮಾಹಿತಿಯನ್ನೊಳಗೊಂಡ ಸಾಕ್ಷ್ಯಚಿತ್ರ ಬೆಂಗಳೂರು ನಗರ ಸಂಚಾರ ಪೊಲೀಸರ ದಕ್ಷತೆಯನ್ನು ಎತ್ತಿತೋರಿಸುತ್ತಿದೆ. ಈ ಕುರಿತು ಬೆಂಗಳೂರು ಟ್ರಾಫಿಕ್ ಪೊಲೀಸರೇ ಸಿದ್ಧಪಡಿಸಿರವು ಸಾಕ್ಷ್ಯಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಅಷ್ಟೇ ಅಲ್ಲ ಹಗಲಿರುಳು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಾಕ್ಷ್ಯಚಿತ್ರ ವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಹೆಚ್ಚುವರಿ ಪೊಲೀಸ್ ಆಯುಕ್ತ ಆರ. ಹಿತೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ಸಾಕ್ಷ್ಯಚಿತ್ರವನ್ನು ಸಚಿವ ರಾಮಲಿಂಗಾರೆಡ್ಡಿ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
|
ನೂರು ಗಸ್ತುವಾಹನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು
ಗಸ್ತು ವಾಹನಗಳ ಕೊರತೆ ಇದೆ. ನೂರು ಗಸ್ತು ವಾಹನಗಳಿವೆ ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು. ಎಡಭಾಗದಲ್ಲಿಯೇ ವಾಹನಗಳು ನಿಧಾನವಾಗಿ ಸಂಚರಿಸಬೇಕು, ಹೆಲ್ಮೆಟ್ ಧರಿಸುವಿಕೆ, ರಾಂಗ್ ಸೈಡ್ ಡ್ರೈವಿಂಗ್ ನ್ನು ತಪ್ಪಿಸಿದರೆ ಸಂಚಾರ ದಟ್ಟಣೆ ನಿಯಂತ್ರಿಸಬಹುದು ಎಂದು ಟಿವಿ ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದಾರೆ.
|
ಧೂಳನ್ನೂ ಲೆಕ್ಕಿಸದೆ ಸಾರ್ವಜನಿಕರ ಸೇವೆ ಮಾಡುವ ಪೊಲೀಸರು
ಸಂಚಾರಿ ಪೊಲೀಸರು ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ, ಟಿನ್ ಫ್ಯಾಕ್ಟರಿ ಸುತ್ತಮುತ್ತಲ ಪ್ರದೇಶದಲ್ಲಿ ಧೂಳನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಬಣ್ಣಿಸಲು ಸಾಧ್ಯವಿಲ್ಲ ಎಂದು ಕಿರಣ್ ಹೊಳ್ಳ ಎಂಬುವರು ಟ್ವೀಟ್ ಮಾಡಿದ್ದಾರೆ.
|
ಎಲ್ಲಾ ಘಟನೆಗಳಿಗೆ ಪೊಲೀಸರು ಹೊಣೆ ಅಲ್ಲ
ಟೀಕೆಗಳು ನಿರಂತರವಾಗಿ ಬರುತ್ತಿರುವುತ್ತದೆ ಅದರ ಬಗ್ಗೆ ಆಲೋಚಿಸುವುದು ಬೇಡ, ನಗರದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೆ ಪೊಲೀಸರನ್ನು ಹೊಣೆ ಮಾಡುವುದು ಬೇಡ, ಸಂಚಾರಿ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಶ್ರಮಕ್ಕೆ ನಾವು ಬೆಂಬಲ ಸೂಚಿಸಬೇಕು ಎಂದು ಪ್ರಣವ್ ಹೇಳಿದ್ದಾರೆ.