ವಿಷ್ಣುವರ್ಧನ್ ಕಲಿತ ಬೆಂಗಳೂರಿನ ಪುರಾತನ ಕನ್ನಡ ಶಾಲೆ ಇನ್ನು ನೆನಪು ಮಾತ್ರ
ಬೆಂಗಳೂರು, ಜನವರಿ 3: ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದ್ದೇ ಮಾಡಿದ್ದು. ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸಿಎಂ ಗಂಟಾಘೋಷವಾಗಿ ಹೇಳಿದ್ದರು. ಆದರೆ ರಾಜ್ಯದ ಮುಖ್ಯಮಂತ್ರಿ ನೀಡಿದ ಭರವಸೆ ಹುಸಿಯಾಗಿದ್ದು ಬೆಂಗಳೂರಿನ ಅತ್ಯಂತ ಹಳೆಯ ಕನ್ನಡ ಶಾಲೆ ಇನ್ನು ಕೆಲವೇ ದಿನಗಳಲ್ಲಿ ಬಾಗಿಲೆಳೆದುಕೊಳ್ಳಲಿದೆ.
ನಗರದ ಚಾಮರಾಜಪೇಟೆಯಲ್ಲಿ 1870ರಲ್ಲಿ ಮಾಡೆಲ್ ಸ್ಕೂಲ್ ಎಜುಕೇಶನ್ ಸೊಸೈಟಿ ಕನ್ನಡ ಮಾಧ್ಯಮ ಶಾಲೆ ಆರಂಭಿಸಿತ್ತು. ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಇದೇ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಅಭ್ಯಾಸವನ್ನೂ ಮಾಡಿದ್ದರು.
ಸದ್ಯ ಇದೇ ಶಾಲೆ ಮುಚ್ಚಲು ಸಿದ್ದವಾಗಿದೆ. ಸಾರ್ವಜನಿಕ ಸೂಚನೆ ಇಲಾಖೆಯು ನೋಟಿಸ್ ನೀಡಿದ ಹಿನ್ನಲೆಯಲ್ಲಿ ಶಾಲೆ ಮುಚ್ಚಲಾಗುತ್ತಿದೆ. ಶಾಲೆಯಲ್ಲಿ ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಇಲ್ಲದ ಕಾರಣ ನೋಟಿಸ್ ನೀಡಲಾಗಿತ್ತು. ಇದೀಗ ಮೂರು ತಿಂಗಳ ದೀರ್ಘ ಪ್ರಕ್ರಿಯೆ ನಂತರ ಶಾಲೆಯನ್ನು ಮುಚ್ಚಲಾಗುತ್ತಿದೆ.
1870ರಲ್ಲಿ ಆರಂಭವಾದ ಶಾಲೆಯ ಪ್ರಾಥಮಿಕ ವಿಭಾಗ ಮತ್ತು 1957ರಲ್ಲಿ ಆರಂಭವಾದ ಪ್ರೌಢ ಶಾಲೆಯನ್ನು ಒಟ್ಟಾಗಿ ಮುಚ್ಚಲಾಗುತ್ತಿದೆ.
ಈಗಾಗಲೇ ಪ್ರೌಢಶಾಲೆಯನ್ನು ಮುಚ್ಚಲಾಗಿದ್ದು 147 ವರ್ಷದ ಇತಿಹಾಸ ಇರುವ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಸರಕಾರಕ್ಕೆ ಶಾಲೆಯ ಆಡಳಿತ ಮಂಡಳಿ ಮನವಿ ಸಲ್ಲಿಸಿದೆ. ಇನ್ನೇನು ಈ ವರ್ಷ ಮುಗಿಯುವುದರೊಳಗೆ ಶಾಲೆ ಮುಚ್ಚಲಿದ್ದು ಇತಿಹಾಸದ ಪುಟ ಸೇರಲಿದೆ.
ನಮ್ಮ ಸರಕಾರ ಕನ್ನಡ ಪರ, ಕನ್ನಡ ಶಾಲೆ ಮುಚ್ಚುವುದಿಲ್ಲ ಎಂಬ ಹೇಳಿಕೆಗಳು ಬಾಯಿ ಮಾತಿಗೆ ಸೀಮಿತವಾದಾಗ ತಳಮಟ್ಟದಲ್ಲಿ ಏನೇನಾಗುತ್ತವೆ ಎಂಬುದಕ್ಕೆ ಮಾಡೆಲ್ ಶಾಲೆ ಒಂದು ಉದಾಹರಣೆ ಅಷ್ಟೆ. ಇದೇ ರೀತಿ ಇನ್ನೂ 17 ಶಾಲೆಗಳು ಮುಚ್ಚಲು ಸಿದ್ದವಾಗಿವೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.