ಮುನಿರತ್ನ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ಹೇಳಲ್ಲ!
ಬೆಂಗಳೂರು, ಸೆ. 02: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೃಹತ್ ಭ್ರಷ್ಟಾಚಾರ ನಡೆದಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಇಂಜಿನೀಯರ್ಗಳು ಹಗರಣದಲ್ಲಿ ಶಾಮೀಲಾಗಿದ್ದರೆಂದು ಹೇಳಿಕೆ ಕೊಟ್ಟಿದ್ದಾರೆ.
ದಾಖಲೆ ಸಹಿತ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ನಂತರ ಮಾತನಾಡಿ, ನನ್ನ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 250 ಕೋಟಿ ರೂಪಾಯಿಗಳ ನಕಲಿ ಬಿಲ್ ಸೃಷ್ಟಿಸಿ ಹಣ ಹೊಡೆದಿದ್ದಾರೆ. ನಕಲಿ ಬಿಲ್ ನೀಡಿ ಹಣ ಪಡೆದಿರುವ ಕುರಿತು ಎಲ್ಲ ದಾಖಲೆಗಳೊಂದಿಗೆ ದೂರು ಕೊಟ್ಟಿದ್ದೇನೆ. ಇದೇ 2020ರ ಜನವರಿಯಲ್ಲಿ ನಕಲಿ ಬಿಲ್ ಭ್ರಷ್ಟಾಚಾರ ನಡೆದಿದೆ. ಒಟ್ಟು 130 ಕಾಮಗಾರಿಗಳನ್ನು ಮಾಡದೆಯೇ ನಕಲಿ ಬಿಲ್ ಮಾಡಲಾಗಿದೆ.
ಗ್ರಾಮಾಂತರ ಕ್ಷೇತ್ರದಲ್ಲಿರುವ ಎಲ್ಲ ಬಿಬಿಎಂಪಿ ಅಧಿಕಾರಿಗಳೇ ಇದಕ್ಕೆ ನೇರ ಕಾರಣ. ಅಧಿಕಾರಿಗಳೇ ಟೆಂಡರ್ ತೆಗೆದುಕೊಳ್ಳುತ್ತಾರೆ. ಕೆಲಸ ಮಾಡೋದು ಅವರೇ, ಹಣ ಪಡೆಯೋದು ಅವರೇ. ಮೋರಿ ಕ್ಲೀನ್ ಮಾಡಿದೆ, ರಸ್ತೆ ಕ್ಲೀನ್ ಮಾಡಿದೆ ಅಂತ ನಕಲಿ ಬಿಲ್ ಸೃಷ್ಟಿಸಲಾಗಿದೆ. ಅನರ್ಹ ಶಾಸಕ ಮುನಿರತ್ನ ಅವರು ಆ ಕ್ಷೇತ್ರದ ಮಾಜಿ ಶಾಸಕರು. ಅವರು ಭಾಗಿಯಾಗಿದ್ದಾರೆ ಎಂದು ನಾನು ಹೇಳುವುದಿಲ್ಲ. ನಾನು ಯಾವುದೇ ಆರೋಪ ಮಾಡುವುದಕ್ಕೆ ಹೋಗುವುದಿಲ್ಲ. ಅದಕ್ಕೆ ಬಿಬಿಎಂಪಿ ಎಂಜಿನಿಯರ್ಗಳು, ಅಧಿಕಾರಿಗಳು ಕಾರಣ. ಭ್ರಷ್ಟಾಚಾರದ ಬಗ್ಗೆ ದೂರು ನೀಡಿದ್ದೇನೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆ ಕೊಟ್ಟಿದ್ದಾರೆ.