ಬಾಡಿಗೆ ಕೇಳಿದ್ದಕ್ಕೆ ನಿವೃತ್ತ ಉಪ ತಹಶೀಲ್ದಾರ್ ಹತ್ಯೆ: ಕೊಲೆಗೆ ಸಾಥ್ ನೀಡಿದ 75 ವರ್ಷದ ಅಜ್ಜಿ ಸೆರೆ !
ಬೆಂಗಳೂರು, ಫೆಬ್ರವರಿ 05 : ರಾಜಧಾನಿಯಲ್ಲಿ ಅಪರಚಿತರಿಗೆ ಮನೆ ಬಾಡಿಗೆ ನೀಡಲಿಕ್ಕೆ ಸಾಕಷ್ಟು ಮಂದಿ ಭಯ ಪಡುತ್ತಾರೆ. ಯಾಕೆಂದ್ರೆ ಏನು ಎಡವಟ್ಟು ಮಾಡುತ್ತಾರೋ ಎಂಬ ಭಯ. ನಿಜ ಕೂಡ, ಅಪರಿಚಿತರಿಗೆ ಗೆ ಮನೆ ಬಾಡಿಗೆ ನೀಡಿದ್ದ ನಿವೃತ್ತ ಉಪ ತಹಶೀಲ್ದಾರ್ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಮನೆ ಬಾಡಿಗೆ ನೀಡುವಂತೆ ಕೇಳಿದ್ದಕ್ಕೆ ನಿವೃತ್ತ ಉಪ ತಹಶೀಲ್ದಾರ್ ತಲೆಗೆ ರಾಡ್ ನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಮಾತ್ರವಲ್ಲ ಮೃತ ದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಬಾಡಿಗೆದಾರ ಹಂತಕರನ್ನು ವಿವಿಪುರಂ ಪೊಲೀಸರು ಬಂಧಿಸಿಸಿದ್ದಾರೆ. ಹತ್ಯೆಗೆ ಸಹಕರಿಸಿದ ಆರೋಪದಲ್ಲಿ ವೃದ್ಧೆ ಜೈಲು ಪಾಲಾಗಿರುವುದು ವಿಶೇಷ.
ಮನೆ ಬಾಡಿಗೆ ಕೊಟ್ಟಿದ್ದಕ್ಕೆ ಪ್ರಾಣ ಹೋಯ್ತು !
ಕೋರಮಂಗಲದ ನಿವಾಸಿ ರಾಜೇಶ್ವರಿ (61 )ಹತ್ಯೆಯಾದ ನಿವೃತ್ತ ಉಪ ತಹಶೀಲ್ದಾರ್. ಜೇರನ್ ಪಾಷಾ, ಅಲೀಂಪಾಷಾ ಹಾಗೂ ಅಶ್ರಫುನ್ನೀಸಾ ಬಂಧಿತ ಆರೋಪಿಗಳು. ಇವರ ವಿರುದ್ಧ ಕೊಲೆ ಆರೋಪದಡಿ ಬಂಧಿಸಲಾಗಿದೆ.
ಉಪ ತಹಶೀಲ್ದಾರ್ ಆಗಿದ್ದ ರಾಜೇಶ್ವರಿ, ಬೆಂಗಳೂರಿನಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ರಾಜೇಶ್ವರಿ ಕೋರಮಂಗಲದಲ್ಲಿ ತನ್ನ ಮಗನ ಜತೆ ವಾಸವಾಗಿದ್ದರು. ರಾಜೇಶ್ವರಿ ವಿವಿ ಪುರಂನ ಪಾರ್ವತಿಪುರಂನಲ್ಲಿ ಮೂರು ಹಂತಸ್ತಿನ ಮನೆ ಹೊಂದಿದ್ದರು. ಈ ಮನೆಯನ್ನು ಆಲೀಂಪಾಷಾ ಮತ್ತು ಸಂಬಂಧಿಕರಿಗೆ ಮೂರು ವರ್ಷದ ಹಿಂದೆ ಬಾಡಿಗೆಗೆ ನೀಡಿದ್ದರು. ಆಲೀಂಪಾಷಾ ಸರಿಯಾಗಿ ಬಾಡಿಗೆ ನೀಡುತ್ತಿರಲಿಲ್ಲ. ಈ ವಿಚಾರವಾಗಿ ಆಲಿಂಪಾಷಾ ಮತ್ತು ರಾಜೇಶ್ವರಿ ನಡುವೆ ದೊಡ್ಡ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಕಳೆದ 9 ತಿಂಗಳಿನಿಂದ ಬಾಡಿಗೆಯನ್ನು ಆಲೀಂಪಾಷಾ ನೀಡಿರಲಿಲ್ಲ. ಇದನ್ನು ಕೇಳಲಿಕ್ಕೆ ಎಂದು ಕೋರಮಂಗಲದಿಂದ ರಾಜೇಶ್ವರಿ ಬಂದಿದ್ದರು .
ಫೆ. 3 ರಂದು ಮಿಸ್ಸಿಂಗ್
ಬಾಡಿಗೆ ಹಣ ವಸೂಲಿ ಮಾಡಲೆಂದು ರಾಜೇಶ್ವರಿ ಕೋರಮಂಗಲದಿಂದ ವಿವಿಪುರಂ ಸಮೀಪದ ಪಾರ್ವತಿಪುರಂಗೆ ಬಂದಿದ್ದರು. ಒಂದು ಕೊಠಡಿ ಇರುವ ಒಂದು ಮನೆ ಹತ್ತು ಸಾವಿರದಂತೆ ಮೂರು ಮನೆಯನ್ನು ಬಾಡಿಗೆಗೆ ನೀಡಿದ್ದರು. ಕಳೆದ ಹಲವು ತಿಂಗಳಿನಿಂದ ಬಾಡಿಗೆ ನೀಡದ ಆಲೀಂಪಾಷನನ್ನು ಬಾಡಿಗೆ ನೀಡುವಂತೆ ಕೇಳಿದ್ದಾರೆ. ಈ ವೇಳೆ ಇಬ್ಬರಿಗೂ ಪರಸ್ಪರ ಮಾತಿನ ವಾಗ್ವಾದ ನಡೆದಿದೆ. ಇದಾದ ಬಳಿಕ ರಾಜೇಶ್ವರಿಯನ್ನು ಆಲೀಂಪಾಷಾ ರಾಡ್ ನಿಂದ ತಲೆಗೆ ಹೊಡೆದು ಆನಂತರ ಚಾಕುವುನಿಂದ ತಿವಿದು ರಾಜೇಶ್ವರಿಯವರನ್ನು ಹತ್ಯೆ ಮಾಡಿದ್ದಾನೆ. ಗಾಂಜಾ ಮತ್ತಿನಲ್ಲಿ ಆಲೀಂ ಪಾಷಾ ಹತ್ಯೆ ಮಾಡಿ ಈ ವಿಷಯವನ್ನು ತನ್ನ ಚಿಕ್ಕಪ್ಪ ಮತ್ತು ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದಾರೆ. ಅವರ ಸಲಹೆಯಂತೆ ಆಟೋದಲ್ಲಿ ಮೃತ ದೇಹವನ್ನು ಬಿಡದಿ ಸಮೀಪ ತೆಗೆದುಕೊಂಡು ಹೋಗಿ ಅಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಬಿಸಾಕಿದ್ದಾರೆ. ಬಾಡಿಗೆ ಪಡೆಯಲೆಂದು ಹೋದ ತಾಯಿ ಎಷ್ಟೊತ್ತಾದರೂ ಮನೆಗೆ ಬಂದಿರಲಿಲ್ಲ. ಈ ಕುರಿತು ರಾಜೇಶ್ವರಿ ಪುತ್ರ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.
ರಾಜೇಶ್ವರಿ ಹತ್ಯೆಯ ಸುಳಿವು ಕೊಟ್ಟ ಮೊಬೈಲ್
ಬಾಡಿಗೆ ಕೇಳಿದ್ದಕ್ಕೆ ರಾಜೇಶ್ವರಿಯನ್ನು ಹತ್ಯೆ ಮಾಡಿದ್ದ ಆರೋಪಿಗಳು, ಆಟೋದಲ್ಲಿ ಮೃತ ದೇಹ ಬಿಡದಿಯ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಸುಟ್ಟು ಹಾಕಿದ್ದರು. ಬಳಿಕ ಬೆಂಗಳೂರು ಬಿಟ್ಟಿದ್ದ ಆರೋಪಿಗಳು ಚಿಂತಾಮಣಿ - ಕೋಲಾರ ಸುತ್ತ ಓಡಾಡಿಕೊಂಡಿದ್ದರು. ರಾಜೇಶ್ವರಿ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಂಡಿದ್ದ ವಿವಿಪುರಂ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು. ರಾಜೇಶ್ವರಿ ಮೊಬೈಲ್ ಗಿರಿನಗರ ಬಿಡಿಎ ಪಾರ್ಕ್ ಬಳಿ ಬಿದ್ದಿದ್ದು, ಅದು ಪೊಲೀಸರ ಕೈ ಸೇರಿತ್ತು. ಕರೆಗಳ ಮಾಹಿತಿ ಪರಿಶೀಲಿಸಿದಾಗ ಬಾಡಿಗೆ ಕೇಳಲು ಆಲೀಂಪಾಷಾ ಸಮೀಪ ಬಂದಿರುವ ವಿಚಾರ ಗೊತ್ತಾಗಿದೆ. ಅವರನ್ನು ವಿಚಾರಣೆ ನಡೆಸಲು ಹೋದಾಗ ಎಸ್ಕೇಪ್ ಆಗಿದ್ದ ಸಂಗತಿ ಬೆಳಕಿಗೆ ಬಂದಿತ್ತು. ನಂತರ ಎರಡು ಪ್ರತ್ಯೇಕ ತಂಡ ರಚಿಸಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆಯ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
Recommended Video
ಹತ್ಯೆಗೆ ಸಾಥ್ ಕೊಟ್ಟು ಜೈಲು ಸೇರಿದ ವೃದ್ಧೆ !
ಈ ಚಿತ್ರದಲ್ಲಿರುವ ವೃದ್ಧೆ ಆಯಸ್ಸು ಮುಗಿದಿದೆ. ಇನ್ನೇನು ಸಾವು ನೋಡುವ ಈ ವಯಸ್ಸಿನಲ್ಲೂ ರಾಜೇಶ್ವರಿಯನ್ನು ಹತ್ಯೆ ಮಾಡಿದ ಹಂತಕ ಮಕ್ಕಳಿಗೆ ಕೆಟ್ಟ ಸಲಹೆ ನೀಡಿ ಜೈಲು ಸೇರಿದ್ದಾಳೆ. ರಾಜೇಶ್ವರಿಯನ್ನು ಹತ್ಯೆ ಮಾಡಿದ ಆಲೀಂಪಾಷಾ ನಾನು ಪೊಲೀಸರಿಗೆ ಶರಣಾಗವುದಾಗಿ ತಿಳಿಸಿದ್ದಾನೆ. ಅದಕ್ಕೆ ನಿರಾಕರಿಸಿದ ವೃದ್ಧೆ, ನೀನು ಪೊಲೀಸರಿಗೆ ಶರಣಾಗಬೇಡ, ಮೃತ ದೇಹವನ್ನು ಎಲ್ಲೂ ಕುರುಹು ಸಿಗದಂತೆ ವಿಲೇವಾರಿ ಮಾಡುವಂತೆ ಸಲಹೆ ಮಾಡಿದ್ದಾಳೆ. ಮಾತ್ರವಲ್ಲ, ಆತ ಚಾಕುವಿನಿಂದ ಹತ್ಯೆ ಮಾಡುವಾಗ ಸುಮ್ಮನೇ ಕೂರುವ ಮೂಲಕ ಹತ್ಯೆಗೆ ಸಹಕರಿಸಿದ್ದಾಳೆ. ಹೀಗಾಗಿ ಈ ವೃದ್ಧೆ ಕೈಗೂ ಪೊಲೀಸರು ಕೋಳ ತೊಡಿಸಿದ್ದಾರೆ. ವಿವಿಪುರಂ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.