ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ: ಆರು ಆರೋಪಿಗಳ ಜಾಮೀನು ಅರ್ಜಿ ಸುಪ್ರೀಂನಲ್ಲೂ ತಿರಸ್ಕೃತ
ಬೆಂಗಳೂರು ಫೆ.28. ಬೆಂಗಳೂರು ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ 2020ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಆರು ಆರೋಪಿಗಳಿಗೆ ಇನ್ನೂ ಜಾಮೀನು ಸಿಕ್ಕಿಲ್ಲ ಹಾಗೂ ಸದ್ಯಕ್ಕೆ ಅವರು ಬಿಡುಗಡೆಯಾಗುವ ಸಾಧ್ಯತೆಗಳೂ ಇಲ್ಲ.
ಸೆಷನ್ಸ್ ಕೋರ್ಟ್, ಹೈಕೋರ್ಟ್ ನಂತರ ಇದೀಗ ಸುಪ್ರೀಂಕೋರ್ಟ್ ಕೂಡ ಆರು ಆರೋಪಿಗಳ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಜಾಮೀನು ಕೋರಿ ಆರೋಪಿಗಳಾದ ಮೊಹಮ್ಮದ್ ಕಲೀಂ, ಶೇಕ್ ಮೊಹಮ್ಮದ್ ಬಿಲಾಲ್, ಸೈಯದ್ ಆಸಿಫ್, ಮೊಹಮ್ಮದ ಅತಿಫ್, ನಖ್ವೀಬ್ ಪಾಷಾ ಮತ್ತು ಸೈಯದ್ ಇಕ್ರಮುದ್ದೀನ್ ಸಲ್ಲಿಸಿದ್ದ ಅರ್ಜಿಗಳನ್ನು ಸೋಮವಾರ ನ್ಯಾ.ದಿನೇಶ್ ಮಹೇಶ್ವರಿ ಮತ್ತು ನ್ಯಾ.ವಿಕ್ರಂ ನಾಥ್ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು. ವಾದ ಪ್ರತಿವಾದ ಆಲಿಸಿದ ಬಳಿಕ ಕರ್ನಾಟಕ ಹೈಕೋರ್ಟ್ ಜಾಮೀನು ತಿರಸ್ಕರಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿಯಿತು.

"ಪ್ರಕರಣದ ಸಂಬಂಧ ಆರೋಪಿಗಳ ಜಾಮೀನು ತಿರಸ್ಕರಿಸಿ ಹೈಕೋರ್ಟ್ ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ'' ಎಂದು ಆದೇಶ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಆರೋಪಿಗಳು ಕಳೆದ 16 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಎನ್ಐಎ ಈಗಾಗಲೇ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸಲ್ಲಿಸಿದೆ. ಆದರೂ ಜಾಮೀನು ನೀಡುತ್ತಿಲ್ಲ. 68 ವರ್ಷದ ಎಂಜಿನಿಯರ್ ಮೊಹಮ್ಮದ್ ಕಲೀಂ ಹೆಸರು ಎನ್ ಐಎ ತನಿಖೆಯಲ್ಲಿ ಕೇಳಿಬಂದಿದೆ. ಆದರೆ ಎಫ್ ಐ ಆರ್ ನಲ್ಲಿ ಇರಲಿಲ್ಲ ಎಂದರು.
ಹೈಕೋಟ್ ಆದೇಶವೇನು?
ವಿಶೇಷ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾ. ಅರವಿಂದ್ ಕುಮಾರ್ ಮತ್ತು ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯಪೀಠ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್ ೧೫ ಹೇರಿರುವುದು ಸರಿಯಾಗಿಯೇ ಇದೆ ಎಂದು ಮಹತ್ವದ ಆದೇಶ ನೀಡಿತ್ತು.
"ಆರೋಪಿಗಳ ಪಾತ್ರದ ಬಗ್ಗೆ ಪ್ರಾಸಿಕ್ಯೂಷನ್ ಸಾಕಷ್ಟು ಮಾಹಿತಿ ಸಾಕ್ಷ್ಯ, ಸಿಡಿಆರ್, ವಿದ್ಯುನ್ಮಾನ ಆಧಾರಗಳನ್ನು ಸಂಗ್ರಹಿಸಿದೆ. ಆರೋಪಿಗಳು ಅಕ್ರಮವಾಗಿ ಗುಂಪುಗೂಡಿ ಭಯೋತ್ಪಾದಕ ಕೃತ್ಯ ನಡೆಸಲು ಸೂಚು ರೂಪಿಸಿದ್ದರೆಂಬುದು ತಿಳಿಯುತ್ತದೆ. ಆ ಮೂಲಕ ಅವರು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಜಾಮೀನು ನೀಡಲಾಗದು, ಜಾಮೀನಿನ ಮೇಲೆ ಹೊರಬಂದರೆ ಸಾಕ್ಷ್ಯ ನಾಶ ಪಡಿಸಬಹುದು ಎಂದು ಅಭಿಪ್ರಾಯಪಟ್ಟಿತ್ತು.

ಪ್ರಕರಣದ ಹಿನ್ನೆಲೆ:
ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ಪಿ.ನವೀನ್ 2020ರ ಆ.11 ರಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಅದರಿಂದ ಉದ್ರಿಕ್ತರಾದ ಗುಂಪು ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳಿಗೆ ನುಗ್ಗಿದ್ದಲ್ಲದೆ, ವಾಹನಗಳಿಗೆ ಬೆಂಕಿ ಹಚ್ಚಿತ್ತು. ಮನೆಗಳಿಗೆ ನುಗ್ಗಿ ಧ್ವಂಸ ಮಾಡಲಾಗಿತ್ತು.
ಫಿರೋದ್ ಪಾಷಾ ಸಲ್ಲಿಸಿದ್ದ ದೂರಿನ ಮೇರೆಗೆ ಎಫ್ಐಆರ್ ಹೂಡಲಾಗಿತ್ತು. ಶಾಸಕರ ಮನೆಯ ಮೇಲೂ ಗುಂಪು ದಾಳಿ ನಡೆಸಿ ಧ್ವಂಸ ಮಾಡಿತ್ತು. ಆ ಬಗ್ಗೆ ಮೊದಲು ಸಿಐಡಿ ತನಿಖೆ ನಡೆಸಲಾಗುತ್ತಿತ್ತು.
ಬಳಿಕ ಎನ್ ಐಎ ತನಿಖೆಯನ್ನು ವಹಿಸಿಕೊಂಡು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಕಾಯ್ದೆ ಅಡಿ ಆರೋಪ ಹೊರಡಿಸಿ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿ ಸಲ್ಲಿಸಿದೆ.












Click it and Unblock the Notifications