Bengaluru Flood Alert: ಭಾರೀ ಮಳೆಗೆ ನಲುಗಿದ ಯಲಹಂಕ ವಲಯ, ಜಲಾವೃತ ರಸ್ತೆಯಲ್ಲಿ ರಕ್ಷಣಾ ಕಾರ್ಯ, 2 ಸಾವು
ಬೆಂಗಳೂರು, ಅಕ್ಟೋಬರ್ 22: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿದೆ. ಸೋಮವಾರ ಬೆಂಗಳೂರು ಗ್ರಾಮಾಂತರದಲ್ಲಿ 176.5 ಮಿ.ಮೀ. ಹಾಗೂ ಬೆಂಗಳೂರು ನಗರದಲ್ಲಿ 157 ಮಿ.ಮೀ. ಮಳೆ ದಾಖಲಾಗಿದೆ. ಇದರಿಂದ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಹಾಗೂ ಕೂಗಿಲು ಜಂಕ್ಷನ್ನಲ್ಲಿ ಕೆರೆ ತುಂಬಿದ ನೀರು ರಸ್ತೆಗೆ ಬಂದಿದೆ ಅಪಾರ್ಟ್ಮೆಂಟ್ ಮತ್ತೆ ಜಲಾವೃತಗೊಂಡು ಸಮಸ್ಯೆ ಸೃಷ್ಟಿಯಾಗಿದೆ. ಸ್ಥಳಕ್ಕೆ NDRF ತಂಡ ತೆರಳಿದ್ದು, ಜನರನ್ನು ರಕ್ಷಣೆ ಮಾಡುತ್ತಿದ್ದಾರೆ.
ಸೋಮವಾರ ಬೆಳ್ಳಂಬೆಳ್ಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಯಲಹಂಕ ವ್ಯಾಪ್ತಿಯಲ್ಲಿ ಹಾಗೂ ಇತರ ಕಡೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಬೆಂಗಳೂರಿನ ಕೂಗಿಲು ಜಂಕ್ಷನ್ಗಳಲ್ಲಿ ದೋಣಿಗಳು ಸಂಚರಿಸಿದ್ದು ಕಂಡು ಬಂದಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಜಲಾವೃತ ಆಗಿದೆ. ಮಳೆಗೆ ನಗರದಲ್ಲಿ 2 ಸಾವು ಸಂಭವಿಸಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ಕೆರೆ ತುಂಬಿ ಬಂದ ಪರಿಣಾಮ, ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಹಾಗೂ ಕೂಗಿಲು ಜಂಕ್ಷನ್ನಲ್ಲಿ ಕರೆಯಂತಾಗಿದೆ. ಮಂಗಳವಾರ ಬೆಳಗ್ಗೆಯೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಯಲಹಂಕ ವಲಯ ಆಯುಕ್ತರು ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಪರಿಶೀಲನೆ ನಡೆಸಿ ಪರಿಹಾರ ಕೈಗೊಳ್ಳಲು ಸೂಚನೆ ನೀಡಿದೆ.
ಈ ಭಾಗದ ಅನೇಕ ಪ್ರದೇಶಗಳಲ್ಲಿ ಎರಡು ಅಡಿಯಷ್ಟು ನೀರು ನಿಂತು ಕೊಂಡಿದೆ. ಸ್ಥಳೀಯ ಅಧಿಕಾರಿಗಳು ಹಾನಿಯನ್ನು ನಿರ್ಣಯಿಸಲು ಮತ್ತು ಬೀದಿಗಳನ್ನು ತೆರವುಗೊಳಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಕುರಿತು ಬೆಂಗಳೂರು ಈಶಾನ್ಯ ಭಾಗದ ಟ್ರಾಫಿಕ್ ಪೊಲೀಸ್ ಎಸಿಪಿ ಪ್ರದೀಪ್ ಅವರು ಮಾಹಿತಿ ನೀಡಿದ್ದಾರೆ. ಫೋಟೋ, ವಿಡಿಯೋ ಹಂಚಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕೋಗಿಲು ಜಂಕ್ಷನ್ನಿಂದ ಐಎಎಫ್ ಕಡೆಗೆ ಸರ್ವೀಸ್ ರಸ್ತೆಯನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Service road from kogilu junction towards IAF is closed to enable rescue pic.twitter.com/eGb1j05D31
— ACP Traffic Northeast Pradeep (@acpnortheasttr) October 22, 2024
ಸೋಮವಾರದ ಭಾರಿ ಮಳೆಗೆ ಸರ್ಜಾಪುರ ಪ್ರದೇಶದಲ್ಲಿ 56 ವರ್ಷದ ಮಹಿಳೆಯೊಬ್ಬರು ಪ್ರವಾಹದಿಂದಾಗಿ ಮೃತಪಟ್ಟಿದ್ದಾರೆ. ಇನ್ನೂ ಕೆಂಗೇರಿ ಭಾಗದಲ್ಲಿ ನೀರು ತರಲು ಮಹಿಳೆ ಮತ್ತು ಅವರ ಮಗ ತೆರಳಿದ್ದರು. ಈ ವೇಳೆ ಮಹಿಳೆಯ ಮಗ ಕೊಚ್ಚಿಹೋಗಿದ್ದು, ಇಲ್ಲಿ ಒಂದು ಸಾವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಪಾಯಕಾರಿ ರಸ್ತೆ ತಪ್ಪಿಸುವಾಗ ಹಿಂದಿನಿಂದ ಡಿಕ್ಕಿ
ಸರ್ಜಾರಪುರ ವ್ಯಾಪ್ತಿಯ ನಿವಾಸಿ ಮಲ್ಲಿಕಾ ಅವರು ತಮ್ಮ ಪತಿ ಮುನಿರಾಜು ಜೊತೆ ಬೈಕಿನಲ್ಲಿ ತೆರಳುತ್ತಿದ್ದರು. ಮಳೆಯಿಂದಾಗಿ ಮುಂದೆ ಅಪಾಯಕಾರಿ ರಸ್ತೆಗಳ ಮೇಲೆ ಕಣ್ಣಾಡಿಸುತ್ತಲೇ ಪತಿ ಮುನಿರಾಜು ಅವರು ರಸ್ತೆಗುಂಡಿ ತಪ್ಪಿಲು ಮುಂದಾಗಿದ್ದಾರೆ ಆಗ ಮಿನಿ ಟ್ರಕ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದು ಈ ವರ್ಷದ ಮಳೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲನೇಯದ್ದು.
ರೈಬ್ಬೋಡ್ರೈವ್ ಬಳಿ ಪ್ರಹಾಹ, ನಿಂತಲ್ಲೇ ನಿಂತ ನೀರು
ನಗರದಲ್ಲಿ ಸೋಮವಾರ ಸರಾಸರಿ 62 ಮಿಮೀ ಮಳೆ ಆಗಿದೆ. ಪರಿಣಾಮವಾಗಿ ತಗ್ಗು ಪ್ರದೇಶಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ವ್ಯಾಪಕವಾದ ಜಲಾವೃತಗೊಂಡಿವೆ. ಹಾಲನಾಯಕನಹಳ್ಳಿ ಮತ್ತು ದೊಡ್ಡಜನ್ನೆಲ್ಲಿ ಸಂಪರ್ಕ ಕಲ್ಪಿಸುವ ರಾಜಕಾಲುವೆ ಬಳಿಯ ರೈಬ್ಬೋಡ್ರೈವ್ ಕಟ್ಟಡ ಮುಂದೆ, ಆವರಣದಲ್ಲಿ ನೀರು ತುಂಬಿಕೊಂಡಿದೆ.
ಪ್ರವಾಹ ಸೃಷ್ಟಿಯಾಗಿದ್ದು, ಒತ್ತುವರಿ ತೆರವು ಗೊಳಿಸಿದ್ದರೆ ಇಂತಹ ಘಟನೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಅಲ್ಲಲ್ಲಿ ರಸ್ತೆಗಳು, ಅಪಾರ್ಟ್ಮೆಂಟ್ಗಳು ಭಾರೀ ಮಳೆಗೆ ತುತ್ತಾಗಿವೆ. ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಸೋಮವಾರದ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಂದಷ್ಟು ತೊಂದರೆ ಆಗಿದೆ. ಕನಿಷ್ಠ 20 ವಿಮಾನಗಳ ಸಂಚಾರ ವಿಳಂಬವಾಗಿದೆ. ಕೆಲವು ವಿಮಾನಗಳು ಮಳೆಗೆ ಮಾರ್ಗಗಳನ್ನು ಬದಲಾಯಿಸಿದವು ಎಂದು ಕೆಐಎ ಅಧಿಕಾರಿಗಳು ತಿಳಿಸಿದೆ. ಈ ವಾರದಲ್ಲಿ ಎರಡನೇ ಭಾರಿಗೆ ಶಾಲೆಗಳಿಗೆ ರಜೆ ಕೊಡಲಾಗಿದೆ. ನಗರದಲ್ಲಿ ಮುಂದಿನ ನಾಲ್ಕರಿಂದ ಐದು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications