ಬೆಂಗಳೂರು ಪೊಲೀಸ್ ಕಮೀಷನರ್ ಆಡಿಯೋ ವೈರಲ್: ತನಿಖೆಗೆ ಆದೇಶ
ಬೆಂಗಳೂರು, ಆಗಸ್ಟ್ 09: ಬೆಂಗಳೂರು ಹಾಲಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ವ್ಯಕ್ತಿಯೊಬ್ಬರ ನಡುವೆ ನಡೆದಿರುವ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು ಇದರ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
ಭಾಸ್ಕರ್ ರಾವ್ ಅವರು ಬೆಂಗಳೂರು ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಆಗುವ ಮೊದಲು ಭಾಸ್ಕರ್ ರಾವ್ ಅವರು ವ್ಯಕ್ತಿಯೊಬ್ಬರ ಜೊತೆ ಬೆಂಗಳೂರು ಕಮೀಷನರ್ ಹುದ್ದೆಗೆ ಲಾಭಿ ಮಾಡಿದ್ದರ ಬಗ್ಗೆ ಆಡಿಯೋದಲ್ಲಿ ಮಾಹಿತಿ ಇದೆ. ಆದರೆ ಈ ಆಡಿಯೋ ನಿಜವೋ, ತಿದ್ದಿದ್ದೋ ತಿಳಿಯಬೇಕಿದೆ.
ವರ್ಗಾವಣೆ : ಸಿಎಟಿಗೆ ಅರ್ಜಿ ಸಲ್ಲಿಸಿದ ಅಲೋಕ್ ಕುಮಾರ್
ಆಡಿಯೋ ಬಗ್ಗೆ ತನಿಖೆ ಮಾಡುವಂತೆ ಭಾಸ್ಕರ್ ರಾವ್ ಅವರು ಅಪರಾಧ ವಿಭಾಗದ ಜಂಟಿ ಕಮೀಷನರ್ ಸಂದೀಪ್ ಪಾಟೀಲ್ ಅವರಿಗೆ ಸೂಚಿಸಿದ್ದು, ಈ ಕುರಿತು ಮೂರು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.
ಅಪರಾಧ ತಡೆಗಟ್ಟಲು ಕೆಲವು ಕುಖ್ಯಾತರ ಫೋನ್ ಅನ್ನು ಟ್ಯಾಪ್ ಮಾಡುವ ಅಧಿಕಾರ ಪೊಲೀಸರಿಗಿದೆ. ಇದೇ ಅವಕಾಶವನ್ನು ಬಳಸಿಕೊಂಡು ತಮ್ಮ ಫೋನ್ ಅನ್ನೇ ಟ್ಯಾಪ್ ಮಾಡಲಾಗಿದೆ ಎಂಬ ಅನುಮಾನ ಭಾಸ್ಕರ್ ರಾವ್ ಅವರಿಗೆ ಇದೆ.
ಆಡಿಯೋ ಸತ್ಯಾತ್ಯತೆಯ ಬಗ್ಗೆಯೂ ತನಿಖೆಗೆ ಸೂಚಿಸಿದ್ದು, ಆಡಿಯೋ ವನ್ನು ತಿದ್ದಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.
ಐಎಂಎ ವಂಚನೆ: ಐಪಿಎಸ್ ಅಧಿಕಾರಿಯ ವಿಚಾರಣೆ ನಡೆಸಿದ ಎಸ್ಐಟಿ
ಭಾಸ್ಕರ್ ರಾವ್ ಅವರು ಸಿದ್ದಾಮಯ್ಯ ಸರ್ಕಾರದಲ್ಲಿದ್ದಾಗಲೂ ಬೆಂಗಳೂರು ಕಮೀಷನರ್ ಹುದ್ದೆಗೆ ಪ್ರಯತ್ನ ಪಟ್ಟಿದ್ದಾಗಿ ಆಡಿಯೋದಲ್ಲಿ ಮಾಹಿತಿ ಇದೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಹುದ್ದೆಗಾಗಿ ಲಾಭಿ ನಡೆಸಿದ್ದಾಗಿ ಆಡಿಯೋದಲ್ಲಿ ಮಾಹಿತಿ ಇದೆ. ಆಡಿಯೋದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರಾದ ಅಹ್ಮದ್ ಪಟೇಲ್, ಪುದುಚೆರಿ ಸಿಎಂ ನಾರಾಯಣಸ್ವಾಮಿ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಹೆಸರೂ ಆಡಿಯೋದಲ್ಲಿ ಇದೆ.
ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಕಮೀಷನರ್ ಸುನೀಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಅಲೋಕ್ ಕುಮಾರ್ ಅವರನ್ನು ನೇಮಿಸಲಾಗಿತ್ತು. ಆಗ ಭಾಸ್ಕರ್ ರಾವ್ ಅವರು ಅಸಂತೃಪ್ತಿ ವ್ಯಕ್ತಪಡಿಸಿದ್ದರು. ನಂತರ ಯಡಿಯೂರಪ್ಪ ಸಿಎಂ ಆದ ಕೂಡಲೇ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನು ನೇಮಿಸಲಾಗಿದೆ.