ತಮಿಳುನಾಡಲ್ಲಿ ಸೆರೆ ಸಿಕ್ಕ ಬೆಂಗಳೂರು ಕಾರುಗಳ್ಳರು
ಬೆಂಗಳೂರು, ಜ. 2: ಬೆಂಗಳೂರಿನ ಕಾರುಗಳನ್ನು ಕದ್ದು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಚಾಲಾಕಿ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
4 ಜನ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ವಿಭಾಗದ ಪೊಲೀಸರು 1.5 ಕೋಟಿ ರೂ ಬೆಲೆ ಬಾಳುವ 20 ಕಾರುಗಳು, ಒಂದು ಲಗೇಜ್ ಆಟೋ, 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.[ಧೂಮ್ ಕಳ್ಳರ ಬೈಕ್ ಓಡಿದ್ದು ಮೂರೇ ದಿನ]

ತಮಿಳುನಾಡು ಕೊಯಮತ್ತೂರಿನ ಮುಬಾರಕ್ (26), ಬೆಂಗಳೂರಿನ ಎಲ್.ಆರ್. ನಗರದ ಶಿವಲಿಂಗ, ಸುಂದರ್( 25) ಮತ್ತು ಧರ್ಮ (22) ಬಂಧಿತರು. ನಾಲ್ಕು ಚಕ್ರ ವಾಹನಗಳ ಕಳ್ಳತನ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಆರೋಪಿಗಳ ಪತ್ತೆಗೆ ಅಶೋಕನಗರ ಮತ್ತು ವಿಲ್ಸನ್ ಗಾರ್ಡನ್ ಪೊಲೀಸರು ತಂಡವೊಂದನ್ನು ರಚಿಸಿಕೊಂಡಿದ್ದರು. ತಮಿಳುನಾಡು ಪೊಲೀಸರಿಂದ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ.
ಚಾಲಾಕಿ ಕಳ್ಳರು
ವಿಚಾರಣೆ ವೇಳೆ ಆರೋಪಿಗಳು ಅನೇಕ ಸಂಗತಿಗಳನ್ನು ಬಾಯಿ ಬಿಟ್ಟಿದ್ದಾರೆ. ಕದ್ದ ಕಾರುಗಳನ್ನು ಜಯಪ್ರಕಾಶ್ ಎಂಬಾತನ ಮುಖಾಂತರ ಕೋಯಮತ್ತೂರು, ಹೊಸೂರು, ಊಟಿ, ಸೇಲಂ, ತಿರುಚಿನಾಪಲ್ಲಿ, ಮೆಟ್ಟುಪಾಳ್ಯಂ, ಧರ್ಮಪುರಿ, ಸತ್ಯಮಂಗಲದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ಕಾರಿನ ನಂಬರ್ ಹಾಗೂ ಛೇಸ್ ನಂಬರ್ ಸಹ ಬದಲಾಯಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.[ಮದುವೆಗಿತ್ತು ಕೆಲವೇ ಕ್ಷಣ, ಮಾಯವಾಗಿತ್ತು ಆಭರಣ!]
ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಲಸೂರುಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಮರನಾಥ್ ರೆಡ್ಡಿ, ಅಶೋಕನಗರ ಪೊಲೀಸ್ ಠಾಣೆಯ ರಂಗಪ್ಪ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬೋರೇಗೌಡ ಪಾಲ್ಗೊಂಡಿದ್ದರು.












Click it and Unblock the Notifications