ಬೆಂಗಳೂರು ಇಂದು ಪ್ರತಿಭೆಗಳ ತಾಣ, ಸಿಇಒಗಳ ನೆಚ್ಚಿನ ಆಯ್ಕೆ: ಪ್ರಿಯಾಂಕ್ ಖರ್ಗೆ
ಇತ್ತೀಚೆಗೆ ಗೂಗಲ್ ಎಐ ಹಬ್ ಆಂಧ್ರಪ್ರದೇಶದ ಪಾಲಾದ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಇದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ಲಕ್ಷ್ಯ ಎಂದು ಆರೋಪಿಸಿದ್ದರು. ಇದೀಗ ಟೀಕೆಗಳಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ನಾಳೆಯ ತಂತ್ರಜ್ಞಾನಗಳನ್ನು ನಿರ್ಮಿಸಲು ವಿಶ್ವದ ಸಿಇಒಗಳು ತಮ್ಮ ನೆಲೆಗಾಗಿ ಕರ್ನಾಟಕವನ್ನೇ ಆರಿಸುತ್ತಿರುವುದು ಅಚ್ಚರಿಯ ವಿಷಯವಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ಬಗ್ಗೆ ಮರ್ಸಿಡೀಸ್-ಬೆನ್ಸ್ ಸಿಇಒ ಮಾತನಾಡಿರುವ ವಿಡಿಯೋ ಅನ್ನು ಪ್ರಿಯಾಂಕ್ ಹಂಚಿಕೊಂಡಿದ್ದಾರೆ. "ಪ್ರತಿ ಬಾರಿ ನಾನು ಬೆಂಗಳೂರಿಗೆ ಹೋದಾಗ, ಎರಡು ಪಟ್ಟು ಹೆಚ್ಚು ಉತ್ಸಾಹದಿಂದ ಹಿಂದಿರುಗುತ್ತೇನೆ. ನಾನು ಜರ್ಮನಿಗೆ ಹೋಗಿರದಿದ್ದರೂ ಶುದ್ಧ ಜರ್ಮನ್ ಭಾಷೆಯಲ್ಲಿ ಮಾತನಾಡುವ ಜನರನ್ನು ಬೆಂಗಳೂರಿನಲ್ಲಿ ಭೇಟಿಯಾಗುತ್ತೇನೆ. ಅಂತಹ ಪ್ರತಿಭೆ ಇರುವ ಸ್ಥಳಕ್ಕೇ ನಾವು ಹೋಗುತ್ತೇವೆ ಎಂದು ಮರ್ಸಿಡೀಸ್-ಬೆನ್ಸ್ ಸಿಇಒ ಹೇಳಿದ್ದರು.

ಐಟಿ ಸೇವೆಗಳ ಕೇಂದ್ರವೆಂದು ಪರಿಚಿತವಾಗಿದ್ದ ಬೆಂಗಳೂರು, ಇಂದು ಆವಿಷ್ಕಾರ ಅಭಿವೃದ್ಧಿಯ ಹೃದಯವಾಗಿ ಬೆಳೆದಿದೆ. ನಮ್ಮ ತಂತ್ರಜ್ಞಾನ ಪರಿಸರ ಇಂದು ವೆಚ್ಚದ ಮೇಲೆ ಅಲ್ಲ, ಸಾಮರ್ಥ್ಯದ ಮೇಲೆ ಸ್ಪರ್ಧಿಸುತ್ತಿದೆ. ಇದು ಮೌಲ್ಯಮಾಪನದ ಮೇಲೆ ಅಲ್ಲ, ಮೌಲ್ಯದ ಮೇಲೆ ನಿಂತಿದೆ ಎಂದಿದ್ದಾರೆ.
ವಿಶ್ವದ ನಾಯಕರನ್ನು ಇಲ್ಲಿ ಆಕರ್ಷಿಸುವುದು ಕಡಿಮೆ ವೆಚ್ಚದ ಕಾರ್ಮಿಕ ಶಕ್ತಿ ಅಲ್ಲ, ಇಲ್ಲಿದ ಆಳವಾದ ತಾಂತ್ರಿಕ ಪರಿಣಿತಿ. ಬೆಂಗಳೂರು ಇಂದು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಅತ್ಯಂತ ನಿಪುಣ ಪ್ರತಿಭೆಗಳ ತಾಣವಾಗಿ ಹೊರಹೊಮ್ಮಿದ್ದು, ತಂತ್ರಜ್ಞಾನ ಪ್ರತಿಭೆಗಳನ್ನು ಆಕರ್ಷಿಸುವಲ್ಲಿ ಪ್ರಥಮ ಸ್ಥಾನದಲ್ಲಿದೆ. ವಿಶ್ವದ ಶೇ 36ರಷ್ಟು ತಂತ್ರಜ್ಞಾನ ಪ್ರತಿಭೆ ಅಮೆರಿಕಾ ಮತ್ತು ಭಾರತದಲ್ಲಿ ಕೇಂದ್ರೀಕೃತವಾಗಿರುವಾಗ, ಈ ನಗರವು ಹೊಸ ಆವಿಷ್ಕಾರಗಳ ಅಲೆಯನ್ನು ಮುನ್ನಡೆಸುತ್ತಿದೆ. ಕೇವಲ ಕಾರ್ಯಗತಗೊಳಿಸುವವರಲ್ಲ. ಅದನ್ನು ಯೋಚಿಸುವ, ನಿರ್ಮಿಸುವ ಮತ್ತು ವಿಶ್ವದ ಸಮಸ್ಯೆಗಳನ್ನು ಪರಿಹರಿಸುವ ಜನರಿಂದ ಬಲಗೊಂಡಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ನೀತಿ, ಸ್ಟಾರ್ಟ್ಅಪ್ ನೀತಿ, ಸ್ಪೇಸ್ಟೆಕ್ ನೀತಿಗಳನ್ನು ವ್ಯಾಪಕವಾದ ಉದ್ಯಮ ಸಮಾಲೋಚನೆಗಳು ಮತ್ತು ಜಾಗತಿಕ ಮಾನದಂಡದ ಮೂಲಕ ರೂಪಿಸಲಾಗುತ್ತಿದೆ. ಅವುಗಳು ಸಮಗ್ರ, ಭವಿಷ್ಯದ ದೃಷ್ಟಿಕೋನವನ್ನು ಹೊಂದಿವೆ. ಈ ಪ್ರಮುಖ ಕ್ಷೇತ್ರಗಳಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ವೇಗಗೊಳಿಸಲು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರು ಟೆಕ್ ಶೃಂಗಸಭೆ-2025 ಸಂಬಂಧ ಪರಿಶೀಲನಾ ಸಭೆಯನ್ನು ನಡೆಸಿದ್ದ ಪ್ರಿಯಾಂಕ್, ಈ ವರ್ಷದ ಶೃಂಗಸಭೆಯು ನಮ್ಮ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ವಿಕೇಂದ್ರೀಕೃತ ಆವೃತ್ತಿಯಾಗಿ ರೂಪುಗೊಳ್ಳುತ್ತಿದೆ. ಜಾಗತಿಕ ಭಾಷಣಕಾರರು, ಉದ್ಯಮ ನಾಯಕರು, ತಂತ್ರಜ್ಞಾನ, ನೀತಿ ಮತ್ತು ನಾವೀನ್ಯತೆ ಕುರಿತು ವಲಯವಾರು ಸಂವಾದಗಳವರೆಗೆ, ಪ್ರತಿಯೊಂದು ಅಂಶವನ್ನು ವಿನ್ಯಾಸಗೊಳಿಸಲಾಗಿದೆ ಎಂದಿದ್ದರು. ಮೊದಲ ಬಾರಿಗೆ ಬೆಂಗಳೂರು ಟೆಕ್ ಸಮಿಟ್ ನಿಜವಾಗಿಯೂ ಪರಿವರ್ತನಾಶೀಲವಾದದ್ದನ್ನು ಪ್ರಾರಂಭಿಸಲಿದೆ. ನಾವು ಕಂಪ್ಯೂಟಿಂಗ್ ಬಗ್ಗೆ ಹೇಗೆ ಯೋಚಿಸುತ್ತೇವೆ ಎಂಬುದನ್ನು ಮರು ವ್ಯಾಖ್ಯಾನಿಸುವ ತಂತ್ರಜ್ಞಾನದ ಒಂದು ಭಾಗವಾಗಿದ್ದೇವೆ ಎಂದಿದ್ದರು.












Click it and Unblock the Notifications